ಭಟ್ಕಳ: ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರಿನ ಮಾಧ್ಯಮ ಕೇಂದ್ರದ ಸಹಕಾರದೊಂದಿಗೆ ಅ.13 ರಿಂದ 17ರ ವರೆಗೆ ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮ ಕಾರ್ಯಗಾರ ಆಯೋಜಿಸಲಾಗಿದೆ ಎಂದು ತಂಝೀಮ್ ಮಾಧ್ಯಮ ಸಮಿತಿ ಸಂಚಾಲಕ ಹಿರಿಯ ಪತ್ರಕರ್ತ ಆಫ್ತಾಬ್ ಹುಸೇನ್ ಕೋಲಾ ತಿಳಿಸಿದರು.
ಅವರು ಬುಧವಾರ ಸಂಜೆ ತಂಝೀಮ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 5ದಿನಗಳ ಈ ಕಾರ್ಯಾಗಾರದಲ್ಲಿ ಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳ ಮೇಲೆ ನಾಡಿನ ಅನುಭವಿ ಪತ್ರಕರ್ತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮಾಧ್ಯಮ ಕೇಂದ್ರದ ನಿದೇರ್ಶಕ ಅಬ್ದುಸ್ಸಲಾಂ ಪುತ್ತಿಗೆ, ಪತ್ರಿಕೋದ್ಯಮದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಈ ಕ್ಷೇತ್ರದಲ್ಲಿರುವ ಅಪಾರ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು 5ದಿನಗಳ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಗುವುದು, ಪತ್ರಿಕಾ ರಂಗವನ್ನು ವೃತ್ತಿಯನ್ನಾಗಿ ಮಾಡಿಕೊಂಡು ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದೆಂಬ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವದರ ಮೂಲಕ ಪತ್ರಿಕೋದ್ಯಮದ ಎಲ್ಲ ಆಯಾಮಗಳ ಕುರಿತು ಬೆಳಕುಚೆಲ್ಲುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು. ಭಟ್ಕಳದ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಪತ್ರಿಕೋದ್ಯಮದಲ್ಲಿ ಬಹಳಷ್ಟು ಆಸಕ್ತಿಯಿದ್ದು ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆಯ್ದ ವಿದ್ಯಾರ್ಥಿಗಳನ್ನು ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದ ಅವರು ಹಲವು ವೃತ್ತಿನಿರತ ಪತ್ರಕರ್ತರು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಹೆಸರಾಂತ ಪತ್ರಕರ್ತರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ತುಮಕೂರು ಪತ್ರಿಕೋಧ್ಯಮ ಕಾಲೇಜಿನ ಮುಖ್ಯಸ್ಥ ಸೀಬಂತಿ ಪದ್ಮನಾಭ, ದ ಹಿಂದೂ ಪತ್ರಿಕೆ ಹಿರಿಯ ಪತ್ರಕರ್ತ ಎಂ.ರಘುರಾಂ, ಬೆಂಗಳೂರಿನ ಹಿರಿಯ ಪತ್ರಕರ್ತ ಕೆ.ಪುಟ್ಟಸ್ವಾಮಿ, ಫ್ರಂಟ್ ಲೈನ್ ನ ಸಹಸಂಪಾದಕ ವಿಖಾರ್ ಆಹ್ಮದ್ ಸಯೀದ್, ಬೆಂಗಳೂರು ದೂರದರ್ಶನದ ಮಾಜಿ ನಿರ್ದೇಶಕ ಎ.ಎಸ್. ಚಂದ್ರಮೌಳಿ, ಸ್ಕ್ರೋಲ್ ಇನ್ ನ ಹಿರಿಯ ಬರಹಗಾರ ಟಿ.ಎ. ಅಮೀರುದ್ದೀನ್, ಹೈದರಾಬಾದ್ ನ ಡಿಜಿಟಲ್ ಮಾರ್ಕೇಟಿಂಗ್ ಮುಖ್ಯಸ್ಥ ಆಹ್ಮದ್. ಝೆಡ್ ದಾಮೂದಿ ವಾರ್ತಾಭಾರತಿ ಪ್ರಧಾನ ಸಂಪಾದಕ ಎ.ಎಸ್.ಪುತ್ತಿಗೆ, ಬೆಂಗಳೂರಿನ ಪಿ.ಆರ್. ಕನ್ಸಲ್ಟಂಟ್ ಜೀಸಸ್ ಮಿಲ್ಟನ್ ರೋಸಿಯೋ, ಪ್ರಜಾವಾಣಿ ಸಹಸಂಪಾದಕ ಎನ್.ಎಂ.ಎನ್. ಇಸ್ಮಾಯಿಲ್, ಡೆಕ್ಕನ್ ಕ್ರೋನಿಕಲ್ ಉಪಸಂಪಾದಕ ಜಾವೀದ್ ಗೆಹಲೋತ್, ಮಂಗಳೂರು ಟೈಮ್ಸ್ ಆಫ್ ಇಂಡಿಯಾದ ಫೋಟೊ ಪತ್ರಕರ್ತ ರವಿ ಪುಸವನಿಕೆ, ಹೈದರಾಬಾದ್ ನ ಸಿಯಾಸತ್ ಉರ್ದು ದೈನಿಕ ಸಂಪಾದಕ ಝಹಿರುದ್ದೀನ್ ಖಾನ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ,
ಅ.17 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದು, ಖಲೀಝ್ ಟೈಮ್ಸ್ ನ ಮಾಜಿ ಅಬುದಾಬಿ ಬ್ಯೂರೊ ಚೀಫ್ ಸೈಯ್ಯದ್ ಖಮರ್ ಹಸನ್ ಗೌರವ ಅತಿಥಿಯಾಗಿ ಉಪಸ್ಥಿತರಿರುವರು ಎಂದು ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ ಅಲ್ತಾಫ್ ಖರೂರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕಾರ್ಯದರ್ಶಿ ಯಾಸೀರ್ ಬರ್ಮಾವರ್ ನದ್ವಿ, ಮಾಧ್ಯಮ ಸಮಿತಿಯ ಇನಾಯತುಲ್ಲಾ ಗವಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.