ಬೆಂಗಳೂರು: ದಲಿತ ದೌರ್ಜನ್ಯ ಸಂಬಂಧ ವರದಿಗಳು ಮಾಧ್ಯಮಗಳಲ್ಲಿ ಕಡೆಗಣಿಸ್ಲಪಡುತ್ತಿದ್ದು ಇದಕ್ಕಾಗಿ ನಾವು ನಮ್ಮದೇ ಆದ ಪರ್ಯಾಯ ಮಾಧ್ಯಮಗಳನ್ನು ಆರಂಭಿಸಬೇಕೆಂದು ಉನಾ ದಲಿತ್ ಅತ್ಯಾಚಾರ್ ಲಡ್ತಾ ಸಮಿತಿ ನಾಯಕ ಜಿಗ್ನೇಶ್ ಮೇವಾನಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಬೆಂಗಳೂರಿನ ದಲಿತ ದಮನಿತರ ಹೋರಾಟ ಸಮಿತಿಯು ಸೈಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಮಾಧ್ಯಮಗಳಲ್ಲಿ ದಲಿತ ದೌರ್ಜನ್ಯ ಸಂಬಂಧಿ ವಿಚಾರಗಳು ಹೆಚ್ಚಿನ ಪ್ರಚಾರ ಪಡೆಯುತ್ತಿಲ್ಲ. ಅಂಬಾನಿಯವರದ್ದೇ ಹಲವಾರು ಮಾಧ್ಯಮಗಳಿವೆ. ಹೀಗಾಗಿ ನಾವು ಪರ್ಯಾಯ ಮಾಧ್ಯಮವನ್ನು ಆರಂಭಿಸಬೇಕಿದೆ ಎಂದ ಅವರು, ಅದಕ್ಕೆ ನಾವು ಅಂಬಾನಿಯ ಅಂತಹವರ ಹಣದಿಂದ ಶುರು ಮಾಡಲು ಸಾಧ್ಯವಿಲ್ಲ. ಸಧ್ಯಕ್ಕೆ ನಮ್ಮ ವಿಷಯಗಳು ಮಾಧ್ಯಮದಲ್ಲಿ ಪ್ರಚಾರ ಪಡೆಯುತ್ತಿಲ್ಲ. ಹಾಗಾಗಿ ನಾವು ಉನಾದಂತಹ ಚಳವಳಿ ಹುಟ್ಟಲು ಕಾರಣವಾದ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕು ಎಂದರು.
ಭೂಮಿ ಕೇವಲ ಮಣ್ಣಿನ ಪ್ರಶ್ನೆ ಮಾತ್ರವಲ್ಲ, ಅದು ಒಂದು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಪ್ರಶ್ನೆ ಆಗಿರುವ ಕಾರಣ, ಭೂಮಿ ದಲಿತರಿಗೆ ತುರ್ತಾಗಿ ಬೇಕಾಗಿದೆ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭೂಮಿ ಹಕ್ಕಿನ ಪ್ರಶ್ನೆ ಏನೊ ಸರಿ. ಆದರೆ ಇಂದು ಕೃಷಿ ವಲಯ ಬಿಕಟ್ಟಿನಲ್ಲಿದೆ ಅಲ್ಲವೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಗ್ನೇಶ್, ನನ್ನ ಹೋರಾಟ ಶುರುವಾಗಿದ್ದೆ, ರೈತರ ಆತ್ಮಹತ್ಯೆಯ ವಿಷಯವಾಗಿ. ರೈತರ ಸ್ಥಿತಿ ಕೆಟ್ಟದಾಗಿ ಇರುವುದೆನೊ ನಿಜ. ಆದರೆ, ಏನೂ ಇಲ್ಲದ ಜನರು ಇಂದು ಅತ್ಯಂತ ಹೀನವಾಗಿದ್ದಾರೆ. ಭೂಮಿ ಎನ್ನುವುದು ಒಂದು ಸ್ವಾಭಿಮಾನದ ಪ್ರಶ್ನೆ. ಅಲ್ಲದೆ, ಭೂಮಿ ಇರುವ ದಲಿತರ ಮಕ್ಕಳು ಕೂಲಿಗೆ ಹೋಗುವುದನ್ನು ತಪ್ಪಿಸುವ ಜೊತೆಗೆ ವಿದ್ಯೆ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ, ಭೂಮಿ ಕೇವಲ ಮಣ್ಣಿನ ಪ್ರಶ್ನೆ ಅಲ್ಲ, ಭೂಮಿ ಒಂದು ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಪ್ರಶ್ನೆ ಆಗಿರುವ ಕಾರಣ, ಭೂಮಿ ಇಂದು ದಲಿತರಿಗೆ ತುರ್ತಾಗಿ ಬೇಕಾಗಿದೆ ಎಂದರು.
ಸಮಾನತೆ ಸಾಧಿಸಲು ಒಂದು ವಾದದಿಂದ ಸಾಧ್ಯವೇ? ಇಲ್ಲವಾದರೆ ಸಮಾನತೆ ಸಾಧಿಸಲು ಯಾವ ಯಾವ ವಾದ ಬೇಕು?ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಂಬೇಡ್ಕರ್ ವಾದದಲ್ಲಿ ನಂಬಿಕೆಯಿಟ್ಟವನು. ಅಂಬೇಡ್ಕರ್ ಅವರ ಜಾತಿವಿನಾಶ ಸಿದ್ಧಾಂತ ಅತ್ಯಂತ ಮುಖ್ಯವಾದದ್ದು ಹಾಗೂ ಜಾತಿ ನಿರ್ಮೂಲನೆಗೆ ಜೈ ಭೀಮ್ ಎಂದು ಘೋಷಣೆ ಕೂಗುವವರನ್ನು ನಾವು ಬೆಂಬಲ ನೀಡುತ್ತೇವೆ. ಅದೇ ರೀತಿ, ಎಡಪಂಥೀಯರು, ವಿಮೋಚನೆಗಾಗಿ ವಿಶ್ವ ಕಾರ್ಮಿಕರೇ ಒಂದಾಗಿ ಎಂದರೆ ಅದಕ್ಕೂ ಸಹ ನಾವು ಬೆಂಬಲಿಸಬೇಕು ಎಂದು ಹೇಳಿದರು.
ಸಮಾನತೆಯ ಸಾಧನೆಗಾಗಿ ಗಂಭೀರವಾಗಿರುವ ಮಹಿಳಾವಾದ, ಸರ್ವೋದಯ ಎಲ್ಲವನ್ನು ಒಳಗೂಳ್ಳಬೇಕು ಅಥವಾ ಇನ್ನೊಂದು ಹೊಸ ಸಿದ್ದಾಂತವು ಹುಟ್ಟಿದರೂ ಅದನ್ನು ಒಪ್ಪಿಕೊಳ್ಳಬೇಕು ಎಂದ ಹೇಳಿದರು.