ಸೌದಿ ಅರೇಬಿಯಾ-ಜಿದ್ದಾ: ಹಲವಾರು ಆಸೆ, ಆಕಾಂಕ್ಷೆಗಳು ಹಾಗೂ ತನ್ನ ಮೇಲಿರುವ ಜವಾಬ್ದಾರಿಯನ್ನು ಹೊತ್ತುಕೊಂಡು 2008ರ ಡಿಸೆಂಬರ್ 24ರಂದು ಮನೆಯಿಂದ ಪ್ರವಾಸಿ ಜೀವನದ ಮೂಲಕ ತಾನೆನಾದರೂ ಸಂಪಾದಿಸಬೇಕೆಂಬ ಬಹುದೊಡ್ಡದಾದ ಕನಸಿನೊಂದಿಗೆ ತನಗೆ ದೊರೆತ ವೀಸಾದ ಮೂಲಕ ಸೌದಿಅರೇಬಿಯಾಕ್ಕೆ ಹೊರಡುತ್ತಾರೆ ಕಾರ್ಕಳ ತಾಲೂಕಿನ ಮಿಯಾರ್ ಬೆಳ್ಮನ್ ನ ಆದಂ ಹುಸೈನ್ ಸಯ್ಯೆದ್.
ಬಂದ ಮೊದಲ ವರ್ಷದಲ್ಲಿ ತನ್ನ ಮಾಲಿಕನೊಂದಿಗೆ ಅತ್ಯಂತ ಮೃದುಸ್ವಭಾವದಲ್ಲಿ ತನಗಿದ್ದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಒಂದು ವರ್ಷದ ಬಳಿಕ ಆದಂ ಹುಸೈನ್ ಅನುಭವಿಸಿದ ಕಷ್ಟಗಳು ನಮ್ಮೆಲ್ಲರನ್ನು ನಿಬ್ಬೆರಗಾಗಿಸಿದೆ. ವರ್ಷಂಪ್ರತೀ ಇಖಾಮ (ವಾಸದ ಗುರುತಿನ ಚೀಟಿ) ಬದಲಾಯಿಕೊಳ್ಳಬೇಕಾಗಿರುವುದು ಸೌದಿ ಕಾನೂನು ನಿಯಮಗಳಲ್ಲಿ ಕಡ್ಡಾಯವಾಗಿದೆ. ಒಂದು ವರ್ಷದ ಬಳಿಕ ಖಫೀಲ್ (ವೀಸಾ ಪ್ರಯೋಜಕ) ಆದಂ ಹುಸೈನ್ ವ ಇಖಾಮ ಬದಲಾಯಿಸಿಕೊಡುವಲ್ಲಿ ಹಿಂಜರಿಯುತ್ತಾರೆ ಮಾತ್ರವಲ್ಲದೆ ಕೆಲಸದಿಂದಲೂ ದೂರ ಉಳಿಯುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ಕಂಗಾಲಾದ ಅವರು ದಿಕ್ಕೇ ತೋಚದಂತಾಗುತ್ತಾರೆ. ಇಖಾಮವಿಲ್ಲದೆ ಯಾವುದೇ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದಿರುವುದರಿಂದ ಕೆಲಸವಿಲ್ಲದೆ ಅಲೆದಾಡುತ್ತಾರೆ. ಮಲಗಲು ಸರಿಯಾದ ಸ್ಥಳವಿಲ್ಲದೆ ಒದ್ದಾಡುತ್ತಾರೆ. ತುತ್ತು ಅನ್ನಕ್ಕೆ ಒಂದಷ್ಟು ಜನರ ಮುಂದೆ ಕೈ ಚಾಚುತ್ತಾರೆ. ಮನೆಯವರ ಸಂಪರ್ಕಕ್ಕೂ ಯಾವುದೇ ಮಾರ್ಗಗಳು ಇವರ ಮುಂದೆ ಇರಲಿಲ್ಲ. ಮನೆಯವರಲ್ಲಾದರೂ ತನ್ನ ಅಸಾಹಾಯಕತೆಯನ್ನು ಹೇಳಿ ಪರಿಹಾರವನ್ನು ಕಂಡುಕೊಳ್ಳುತ್ತೆನೆಂದರೆ ಅದಕ್ಕೂ ಪರಿಹಾರ ಮಾರ್ಗ ಇವರ ಮುಂದೆ ಬರಲೇ ಇಲ್ಲ. ಎಲ್ಲೆಲ್ಲಾ ಅಲೆದಾಡಿದ ಇವರು ಕಷ್ಟದಾಯಕ ಮತ್ತು ತ್ಯಾಗಯುತ ಜೀವನವನ್ನು ಬರೋಬ್ಬರಿ 7 ವರ್ಷಗಳಿಂದ ಅನುಭವಿಸಿದ್ದಾರೆ.
ಹೊಟ್ಟೆಗೆ ಸರಿಯಾದ ಹಿಟ್ಟಿಲ್ಲದೆ ಅನಾರೋಗ್ಯ ಪೀಡಿತರಾಗಿದ್ದ ಇವರಿಗೆ ಹಲವರು ಖಾಯಿಲೆಗಳು ಬೆನ್ನು ಬಿಡದೆ ಸತಾಯಿಸುತ್ತಿದ್ದವು. ಅನಾರೋಗ್ಯವು ಇನ್ನಷ್ಟು ಹದೆಗೆಡುತ್ತಲೇ ಎದ್ದು ನಿಲ್ಲುವಲ್ಲಿಯೂ ಅಸಾಹಾಯಕತೆಯಾದರು. ಅನಾರೋಗ್ಯ ಪೀಡಿತರಾಗಿದ್ದ ಇವರನ್ನು ನೋಡಿದ ಸಾರ್ವಜನಿಕರೊಬ್ಬರು ಸರಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಇತರ ಅನಾರೋಗ್ಯ ಪೀಡಿತರನ್ನು ಸಂಪರ್ಕಿಸಲು ಆಸ್ಪತ್ರೆಗೆ ಹೋದಂತವರು ಇವರ ಶೋಚನೀಯ ಮತ್ತು ನರಕಯಾತನೆಯ ಸ್ಥಿತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ಚಿಂತನೆಯೊಂದಿಗೆ ಆದಂ ಹುಸೈನ್ ರವರ ಶೋಚನೀಯ ಸ್ಥಿತಿಯನ್ನು ಪ್ರಕಟಪಡಿಸುತ್ತಾರೆ. ಇದನ್ನು ಗಂಭೀರವಾಗಿ ಗಣನೆಗೆ ತೆಗೆದ ಇಂಡಿಯನ್ ಸೋಶಿಯಲ್ ಫಾರಂ ಕರ್ನಾಟಕ ಚಾಪ್ಟರ್ ಸಮಿತಿಯು ಅವರನ್ನು ಭೇಟಿ ಮಾಡಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ತಕ್ಷಣ ಕಾರ್ಯಪೃವತ್ತರಾಗಿ ಸ್ಪಂದಿಸುತ್ತೆ. ಹಾಗೂ ಶೀಘ್ರದಲ್ಲಿ ತವರೂರಿಗೆ ಕಳುಹಿಸುವ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದುತ್ತೆ. ಸೌದಿ ಕಾನೂನಿನಡಿ 7ವರ್ಷಗಳಿಂದ ಇಖಾಮ ಇಲ್ಲದೆ ತವರೂರಿಗೆ ಕಳುಹಿಸಿಕೊಡುವುದು ಅಷ್ಟೊಂದು ಸುಲಭದ ವಿಷಯವಲ್ಲ. ಅಲ್ಲದೆ ಬೃಹತ್ ಮೊತ್ತವನ್ನು ನೀಡಬೇಕಾಗುತ್ತೆ. ಇದೆಲ್ಲವನ್ನು ಗಣನೆಗೆ ತೆಗೆದು ಹಲವು ಕಾನೂನು ಕಚೇರಿಗಳನ್ನು ಸಂಪರ್ಕಿಸುತ್ತಾರೆ. ಸಮಿತಿ ಸದಸ್ಯನ ಹೆಸರಿನಲ್ಲಿ ಬೇಕಾಗಿರುವ ಕಾನೂನು ಸಿದ್ದತೆಗಳನ್ನು ರಚಿಸುತ್ತಾರೆ. ಹಲವು ಕಾನೂನು ತೊಡಕುಗಳೂ ಬಂದರೂ, ಆತ್ಮಸ್ಥೈರ್ಯ ಕಳೆದುಕೊಳ್ಳದ ಇಂಡಿಯನ್ ಸೋಶಿಯಲ್ ಫಾರಂ ಸದಸ್ಯರು ಹಗಲಿರುಲೆನ್ನದೆ ಕಚೇರಿ ಕಚೇರಿಯೆಂದು ಅಲೆದಾಡಿ ಅಧಿಕಾರಿಗಳ ಸಕಾರಾತ್ಮಕವಾದ ಸ್ಪಂದನೆಯಿಂದ ಕಾನೂನು ಪ್ರಕ್ರಿಯೆಗಳನ್ನು ಸಿದ್ದಪಡಿಸುತ್ತಾರೆ. ಆನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತೆ ಹಾಗೂ ಅದರಿಂದ ಅವರು ಚೇತರಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಮತ್ತು ಆಸ್ಪತ್ರೆಯ ಕಾನೂನುವಿಧಿಗಳನ್ನು ಸಮರ್ಪಕವಾಗಿ ನಿಭಾಯಿಸಿ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುತ್ತಾ, ಸೌದಿ ಕಾನೂನಿನಡಿ ಜೈಲುವಾಸ ಅನುಭವಿಸಬೇಕಾಗಿದ್ದ ಇವರ ಆರೋಗ್ಯವು ಬಹಳಷ್ಟು ಚಿಂತಾಜನಕವಾಗಿರುವುದರಿಂದ ಜೈಲುವಾಸ ಅನುಭವಿಸಲು ಶಕ್ತರಲ್ಲ ಎಂಬುವುದನ್ನು ಮನವೊಲಿಸಿ ಸೌದಿ ಯ ಕಾನೂನಿನಡಿ ತವರೂರಿಗೆ ಕಳುಹಿಸುವ ಕೊಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿತು. ಆನಾರೋಗ್ಯದಿಂದ ಆಸ್ಪತ್ರೆಯಲ್ಲಿಯೇ ಇದ್ದು 2017ರ ಮೇ 17(ಬುಧವಾರ)ರಂದು ಇಂಡಿಯನ್ ಸೋಶಿಯಲ್ ಫಾರಂನ ಸದಸ್ಯನೊಂದಿಗೆ ಆದಂ ಹುಸೈನ್ ಸೆಯ್ಯದ್ ತವರೂರು ತಲುಪಲಿದ್ದಾರೆ. ಆರ್ಥಿಕವಾಗಿ ಇಂಡಿಯನ್ ಸೋಶಿಯಲ್ ಫಾರಂ ಹಿತೈಶಿಗಳು ಹಾಗೂ ಕೆ.ಎನ್.ಆರ್.ಐ ಸಂಸ್ಥೆ ಸಹಾಯವನ್ನು ನೀಡಿ ಪ್ರೋತ್ಸಾಹಿಸಿದೆ. ಜವಾಬ್ದಾರಿ ನಿಭಾಯಿಸುವ ಸಲುವಾಗಿ ವಿದೇಶ ಹೋದವರನ್ನು ಕಾಣದೆ ಕಂಗಾಲಾಗಿದ್ದ ಕುಟುಂಬಿಕರು ಆದಂ ಹುಸೈನ್ ರವರ ಆಗಮನವನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ.