ಭಟ್ಕಳ: ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗಗಳ ಕುರಿತ ನ್ಯಾಯಾಂಗ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಪರಿಶಿಷ್ಟ ಜಾತಿ ವರ್ಗಗಳ ಬಗ್ಗೆ ಸಾಕಷ್ಟು ಅನುಭವವಿರುವ ನ್ಯಾಯವಾದಿ ಸಿ.ಜಗದೀಶರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ರನ್ನಾಗಿ ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಮೀಸಲಾತಿ ರಕ್ಷಣಾ ಒಕ್ಕೂಟ ಭಟ್ಕಳ ಘಟಕದ ಸದಸ್ಯರು ಉಪಮುಖ್ಯಮಂತ್ರಿ ಪರಮೇಶ್ವರರವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನಿಯೋಜಿತ ಕರಿಯಾ ಮುಂಡಾ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ರಾಜ್ಯದಲ್ಲಿಯೂ ಒಬ್ಬ ನುರಿತ ಹಾಗೂ ಅನುಭವಿ ಪರಿಶಿಷ್ಟ ಜಾತಿಯ ನ್ಯಾಯವಾದಿಯವರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿ ಆಯಾ ರಾಜ್ಯಗಳಲ್ಲಿ ಇತ್ಯರ್ಥವಾಗದ, ಬಾಕಿ ಉಳಿದಿರುವ ದಲಿತ ದೌರ್ಜನ್ಯ ಪ್ರಕರಣಗಳನ್ನು ತ್ವರಿತ ನ್ಯಾಯಾಲಯದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ಆದೇಶ ಇದ್ದಿರುತ್ತದೆ. ಆದರಿಂದ ರಾಜ್ಯದಲ್ಲಿನ ಉಚ್ಚ ನ್ಯಾಯಾಲಯ, ಸಂಚಾರಿ ಪೀಠಗಳು, ಜಿಲ್ಲಾ ನ್ಯಾಯಾಲಯಗಳು ಹಾಗೂ ವಿವಿಧ ತಾಲೂಕುಗಳಲ್ಲಿನ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗಗಳ ಮೇಲಿನ ದೌರ್ಜನ್ಯ ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಈಗಾಗಲೇ ವಾದಿಸಿದ ಅನುಭವ ಸಿ.ಜಗದೀಶರವರಿಗೆ ಇದ್ದು, ಅವರ ಆಯ್ಕೆ ನ್ಯಾಯೋಚಿತವಾಗಿರುತ್ತದೆ. ರಾಜ್ಯ ಸರಕಾರ ಈಗಾಗಲೇ ಇತರೇ ಸಮುದಾಯದ ಮೂವರನ್ನು ಬೆಂಗಳೂರು, ಕಲ್ಬುರ್ಗಿ, ಧಾರವಾಡ ನ್ಯಾಯಾಲಯಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಪರಿಶಿಷ್ಟ ವರ್ಗದವರಿಗ ಅವಕಾಶ ನೀಡಿಲ್ಲ. ಈ ಬಗ್ಗೆ ಸರಕಾರ ಅಗತ್ಯ ಚಿಂತನೆ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ದಲಿತ ಸಂಘಟನೆಗಳ ಪ್ರಮುಖರಾದ ತುಳಸೀದಾಸ ಪಾವಸ್ಕರ್, ಮಾರುತಿ ಪಾವಸ್ಕರ್, ನ್ಯಾಯವಾದಿ ರವೀಂದ್ರ ಮಂಗಳಾ, ನರಸಿಂಹ ಶಿರಾಲಿಕರ್, ಸೀತಾರಾಮ್ ಪಾಲೇಕರ್, ಲೋಹಿತ್ ಶಿರಾಲಿಕರ್, ದಿನೇಶ ಪಾವಸ್ಕರ್ ಮೊದಲಾದವರು ಉಪಸ್ಥಿತರಿದ್ದರು.