ಹೊಸದಿಲ್ಲಿ,: ಇಸ್ಲಾಮಿಕ್ ವಿದ್ವಾಂಸ ಝಾಕಿರ್ ನಾಯ್ಕಾ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್ಎಫ್) ತನ್ನ ಮೇಲೆ ತಕ್ಷಣ ನಿಷೇಧ ಹೇರುವ ಕೇಂದ್ರ ಸರಕಾರದ 2016,ನ.17ರ ನಿರ್ಧಾರವನ್ನು ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಇಂತಹ ಕ್ರಮವನ್ನು ತೆಗೆದುಕೊಂಡಿರುವುದಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಅಲ್ಲದೆ ತನಗೆ ಪೂರ್ವಭಾವಿ ನೋಟಿಸನ್ನೂ ನೀಡಿರಲಿಲ್ಲ ಎಂದು ಅದು ಪ್ರತಿಪಾದಿಸಿದೆ.ಐಆರ್ಎಫ್ ಮತ್ತು ಕೇಂದ್ರದ ಪರ ವಾದಗಳನ್ನು ಭಾಗಶಃ ಆಲಿಸಿದ ನ್ಯಾ.ಸಂಜೀವ ಸಚದೇವ ಅವರು, ಐಆರ್ಎಫ್ನ ತುರ್ತು ನಿಷೇಧಕ್ಕೆ ಕಾರಣವಿತ್ತೇ ಎನ್ನುವುದನ್ನು ನ್ಯಾಯಾಲಯವು ಪರಿಶೀಲಿಸಲು ಸಂಬಂಧಿಸಿದ ದಾಖಲೆಯನ್ನು ಜ.17ರಂದು ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದರು.
ಅಧ್ಯಕ್ಷ ಝಾಕಿರ್ ನಾಯ್ಕ ಸೇರಿದಂತೆ ಐಆರ್ಎಫ್ ಮತ್ತು ಅದರ ಸದಸ್ಯರ ಹೇಳಿಕೆಗಳು ಮತ್ತು ಭಾಷಣಗಳಿಂದ ಭಾರತೀಯ ಯುವಜನರು ಮೂಲಭೂತವಾದಿ ಗಳಾಗಬಹುದು ಅಥವಾ ಐಸಿಸ್ನಂತಹ ಭಯೋತ್ಪಾದಕ ಗುಂಪುಗಳನ್ನು ಸೇರಲು ಪ್ರೇರೇಪಿತರಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ‘‘ತುರ್ತು ನಿಷೇಧ’ ಕ್ರಮ ಅಗತ್ಯವಾಗಿದೆ ಎಂದು ಸರಕಾರವು ಭಾವಿಸಿದೆ ಎಂಬ ಒಕ್ಕಣೆಯಿರುವ ಗೃಹ ಸಚಿವಾಲಯದ ಅಧಿಸೂಚನೆಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ನ್ಯಾಯಾಲಯದಲ್ಲಿ ಓದಿ ಹೇಳಿದರು.