ನ್ಯೂ ಶಮ್ಸ್ ಶಾಲೆಯಲ್ಲಿ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭ
ಭಟ್ಕಳ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸ್ಟೂಡೆಂಟ್ಸ್ ಕೌನ್ಸಿಲ್ ಪ್ರೇರಕವಾಗುತ್ತದೆ ಎಂದು ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಶ್ರೀಕಾಂತ್ ನಾಯಕ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಸಭಾಭವನದಲ್ಲಿ ಜರಗಿದ ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಜಾಪ್ರುಭತ್ವ ರೀತಿಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ದೇಶ ಹಾಗೂ ರಾಜ್ಯವನ್ನು ಪ್ರತಿನಿಧಿಸಿದರೆ ವಿದ್ಯಾರ್ಥಿ ನಾಯಕನು ತನ್ನ ಶಾಲೆಯನ್ನು ಪ್ರತಿನಿಧಿಸುತ್ತಾನೆ. ಈ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಲು ಶಾಲೆಗಳು ಪ್ರೇರಣೆ ನೀಡುತ್ತವೆ ಎಂದರು.
ಅಂಜುಮನ್ ಪಿ.ಯು ಬೋರ್ಡ್ ಕಾರ್ಯದರ್ಶಿ ಮೊಹಸಿನ್ ಶಾಬಂದ್ರಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರವು ಅಗಾಧವಾಗಿ ಪರಿವರ್ತನೆ ಹೊಂದಿದ್ದು ಹಿಂದಿನ ವರ್ಷ ಕಲಿತ ವಿಷಯ ಹಳತಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮುಂದಿನ 5ವರ್ಷಗಳ ನಂತರ ಶಿಕ್ಷಣ ಕ್ಷೇತ್ರ ಹೇಗಿರುತ್ತದೆ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬ ಕಲ್ಪನೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು. ತರಗತಿಯಲ್ಲಿ ರ್ಯಾಂಕ್ ಪಡೆದವರಿಗಿಂತಲೂ ಕೇವಲ 40%-50% ಅಂಕ ಗಳಿಸಿದವರು ಭವಿಷ್ಯದಲ್ಲಿ ಮುಂದೆ ಬಂದಿರುವುದನ್ನು ನಾವು ಕಂಡಿದ್ದೇವೆ. ಕೇವಲ ರ್ಯಾಂಕ್ ಗಳಿಕೆಯೊಂದೇ ಶಿಕ್ಷಣದ ಮಾನದಂಡವಲ್ಲ ಬದಲಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣೆಗೆ ಆಗಬೇಕು ಎಂದರು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಎಲ್ಲ ರೀತಿಯ ಕೆಲಸವನ್ನು ಮಾಡಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ನಿಕೃಷ್ಟ ಎಂದು ಭಾವಿಸದೆ ತನ್ನ ಕೆಲಸದಲ್ಲಿ ನಿಷ್ಟೆಯನ್ನು ಪ್ರದರ್ಶಿಸುವುದರ ಮೂಲಕ ಮುನ್ನೆಡೆ ಸಾಧಿಸಬೇಕೆಂದು ಅವರು ಕರೆ ನೀಡಿದರು.
ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮುಷ್ತಾಖ್ ಆಹ್ಮದ್ ಭಾವಿಕಟ್ಟೆ ಮಾತನಾಡಿ, ಜ್ಞಾನ, ಕೌಶಲ್ಯ ಮತ್ತು ಮನೋಭಾವ ಈ ಮೂರನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ನಾಯಕನಾದವನಲ್ಲಿ ಉತ್ತಮ ಜ್ಞಾನ ಕೌಶಲ ಹಾಗೂ ಅವನ ಉತ್ತಮ ವರ್ತನೆಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂದರು.
ಶಮ್ಸ್ ಸ್ಕೂಲ್ ಬೋರ್ಡ್ ಚೇರ್ಮನ್ ಕಾದಿರ್ ಮೀರಾ ಪಟೇಲ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ನ್ಯೂಶಮ್ಸ್ ಸ್ಕೂಲ್ ಪ್ರಾಂಶುಪಾಲೆ ಫಹಮಿದಾ ಡಾಟಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಮುಹಮ್ಮದ್ ರಝಾ ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಧನ್ಯವಾದ ಅರ್ಪಿಸಿದರು. ಶಿಕ್ಷಕರಾದ ಶಾಝಿರ್ ಹುಸೇನ್ ಹಾಗೂ ಅಬ್ದುಲ್ಲಾ ಖಲಿಫಾ ನದ್ವಿ ಕಾರ್ಯಕ್ರಮ ನಿರೂಪಿಸಿದರು.