ಹುಬ್ಬಳ್ಳಿ: ಮದರ್ ತೆರೇಸಾ ಅವರನ್ನು ಎಲ್ಲರೂ ಪೂಜಿಸುತ್ತಾರೆ. ಆದರೆ, ಅವರು ನಮ್ಮದು ದರಿದ್ರರ ದೇಶ ಎನ್ನುವಂತೆ ಬಿಂಬಿಸಿ ವಿದೇಶಗಳಿಂದ ದುಡ್ಡು ತರಲು ದೇಶದ ಮಾನವನ್ನು ಹರಾಜು ಹಾಕಿದ್ದಲ್ಲದೆ, ಸೇವೆ ಹೆಸರಿನಲ್ಲಿ ಮತಾಂತರ ಮಾಡಿದರು ಎಂದು ಆರೆಸೆಸ್ಸ್ನ ಪ್ರಮುಖ ಮಂಗೇಶ್ ಭೇಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯ ರಾಷ್ಟ್ರೀಯ ಸೇವಾ ಭಾರತಿ ಹಾಗೂ ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ 'ಸೇವಾಸಂಗಮ ಸಮಾವೇಶ'ದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು, ಸರಕಾರಿ ನೌಕರರು ತಾವು ಮಾಡುವ ಕೆಲಸವನ್ನು ಸೇವೆ ಎನ್ನುತ್ತಾರೆ. ಆದರೆ, ಸಂಬಳ ಪಡೆಯುತ್ತಾರೆ. ಅದೇ ರೀತಿ ಕ್ರೈಸ್ತ ಮಿಷನರಿಗಳು ಸೇವೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಮೋಸದಿಂದ ಮತಾಂತರ ಮಾಡುತ್ತಾರೆ. ತೆರೇಸಾ ಅವರು ದೇಶದಲ್ಲಿ 500 ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ವಿದೇಶಗಳಿಂದ ಕೋಟ್ಯಂತರ ರೂ.ದುಡ್ಡು ತಂದರು ಎಂದು ಭೇಂಡೆ ಟೀಕಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮಾತನಾಡಿ, ಸರಕಾರದ ಯೋಜನೆಗಳನ್ನು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.