ಧಾರವಾಡ : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬಿಆರ್ಟಿಎಸ್ ಕಾಮಗಾರಿಯ ಅವಾಂತರ ಮುಗಿಯುವ ಲಕ್ಷಣಗಳು ಈವರೆಗೆ ಕಾಣುತ್ತಿಲ್ಲ. ಇಂತಹ ಯಡವಟ್ಟಿನಿಂದಾಗಿ ಶಂಕರ ಪ್ಲಾಜಾದ ಕೆಳಮಹಡಿ ಸಂಪೂರ್ಣ ನೀರಿನಿಂದ ಆವೃತ್ತವಾಗಿದ್ದು ಅಂದಾಜು ರು. 5 ಕೋಟಿ ಹಾನಿಯಾಗಿದೆ ಎಂದು ಅಲ್ಲಿಯ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಟೆಲ್ ಸೆಂಟ್ರಲ್ ಪಾರ್ಕ್ ಮಾಲೀಕ ಸುನೀಲ ಶೆಟ್ಟಿ, ಹೆಗಡೆ ಝರಾಕ್ಸ್ ನ ಗಿರೀಶ ಹೆಗಡೆ, ಓಂ ಕಂಪ್ಯೂಟರ್ಸ ರಾಜು ಹೊಂಗಲಮಠ, ಬಿಆರ್ಟಿಎಸ್ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಪಾರ ಹಾನಿಗೆ ಒಳಗಾದ ಸೆಂಟ್ರಲ್ ಪಾರ್ಕ್ ಅಂಗಡಿ ಮಾಲೀಕರು, 1995 ರಿಂದಲೇ ಈ ಕಟ್ಟಡದಲ್ಲಿ ವಾಸಿಸುತ್ತಿದ್ದು ಎಂತಹ ಮಳೆ ಬಂದರೂ 3 ಇಂಚು ನೀರು ನಿಂತಿರುವ ಉದಾಹರಣೆ ಇಲ್ಲ. ಆದರೆ, ಬಿಆರ್ಟಿಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ದೊಡ್ಡ ಅನಾಹುತ ಸಂಭವಿಸಿದೆ. ಈ ಬಗ್ಗೆ ಒಂದು ತಿಂಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಆರ್ಟಿಎಸ್ ಕಾಮಗಾರಿಯಿಂದಾಗಿ ಕೋರ್ಟ್ ವೃತ್ತ, ಕೆಸಿಡಿ, ಕಲಾಭವನ ಎಲ್ಲೆಡೆಯಿಂದ ಏಕಾಏಕಿ ರಾಡಿ ಸಮೇತ ಮಳೆ ನೀರು ನುಗ್ಗಿದೆ. ಕೆಳ ಮಹಡಿಯಲ್ಲಿನ 16 ಅಂಗಡಿಗಳು ಹಾನೀಗಿಡಾಗಿವೆ. ಅದರಿಂದ ಅಂಗಡಿಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಝರಾಕ್ಸ್, ಪ್ರಿಂಟಿಂಗ್ ಯಂತ್ರಗಳು, ಕುರ್ಚಿ ಹಾಗೂ ಸೋಪಾ, ಟೇಬಲ್ ಮೊಬೈಲ್ ಗಳು, ಕಂಪ್ಯೂಟರ್ ಹಾಗೂ ಇಡೀ ಕಟ್ಟಡಕ್ಕೆ ವಿದ್ಯುತ್ ಪೂರೈಸುತ್ತಿದ್ದ ಜನರೇಟರ್ ಸಹ ಹಾಳಾಗಿದೆ. ಜೊತೆಗೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಒಂದು ಹೊಸ ಕಾರು, ನಾಲ್ಕೈದು ಕಾರು ಮತ್ತು ಬೈಕ್ ನೀರಿನಲ್ಲಿ ಮುಳುಗಿ ಹೋಗಿದೆ ಎಂದು ದೂರಿದರು. ನಿನ್ನೆ ಸಂಜೆಯಿಂದ ಸೋಮವಾರ ಮಧ್ಯಾಹ್ನದ ವರೆಗೆ ಇಷ್ಟೆಲ್ಲಾ ಅವಾಂತರ ನಡೆದರೂ ಬಿಆರ್ಟಿಎಸ್ ಅಧೀಕಾರಿಗಳಾಗಲಿ ಅಥವಾ ಪಾಲಿಕೆ ಅಧಿಕಾರಿಗಳಾಗಲಿ ಈ ಕುರಿತು ಗಮನ ಹರಿಸಿಲ್ಲ. 10 ಅಡಿ ಆಳದಲ್ಲಿ ನಿಂತಿರುವ ನೀರು ಹೊರಗೆ ಹಾಕುವ ಪ್ರಯತ್ನ ಅಂಗಡಿಗಳ ಮಾಲೀಕರೇ ಮಾಡುತ್ತಿದ್ದು ಇನ್ನೂ ಒಂದು ವಾರಗಳ ಕಾಲ ಎಲ್ಲ ಕೆಲಸಗಳು ಬಂದ್ ಆಗಲಿವೆ.