ಹುಬ್ಬಳ್ಳಿ: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ರೌಡಿಗಳ ಪರೇಡ್ ನಡೆಯಿತು. ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ಮಾಡಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್, ಡಿಸಿಪಿಗಳಾದ ರೇಣುಕಾ ಸುಕುಮಾರನ್, ಬಿ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ಪರೇಡ್ ನಡೆಸಿ, ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವಳಿ ನಗರದ ರೌಡಿ ಶೀಟರ್ ಗಳಿಗೆ ಸೂಚನೆ ನೀಡಿದರು. ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗುಡುಗಿದ ಅವರು ಸುಮಾರು 200 ಕ್ಕೂ ಅಧಿಕ ರೌಡಿಗಳ ಪರೇಡ್ ತೆಗೆದುಕೊಂಡ ಪೊಲೀಸ್ ಆಯುಕ್ತರು ರೌಡಿಗಳಿಗೆ ವಾರ್ನ್ ಮಾಡಿದರು. ಚುನಾವಣಾ ಸಂದರ್ಭದಲ್ಲಿನ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಮಾಡದೆ ಶಾಂತಿಯುತವಾಗಿ ಚುನಾವಣೆ ಯಲ್ಲಿ ಭಾಗವಹಿಸಬೇಕೆಂದು ಸೂಚನೆ ನೀಡಿದರು. ಅಲ್ಲದೆ, ನೀವು ಮತದಾನ ಮಾಡಿ, ಆದರೆ ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ. ಅಪರಾಧಗಳ ಆಧಾರದ ಮೇಲೆ ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಿದರು. ೨ ಲಕ್ಷ ದಿಂದ ೫ ಲಕ್ಷ ರೂಪಾಯಿಗಳ ವರೆಗೂ ಬಾಂಡ್ ನೀಡಿ ನಾವು ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗ ವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು ಎಂದು ತಾಕೀತು ಮಾಡಿದರು.
ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರ ಸೂಚನೆಯಿಂದ ರೌಡಿ ಶಿಟರ್ ಗಳಿಗೆ ನಡುಕ ಉಂಟಾಗಿದ್ದು, ರಾಜಕೀಯ ವಲಯದಲ್ಲಿ ಇದು ಯಾವ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.