ಪರೇಶ್ ಮೇಸ್ತ ಸಾವಿನ ಕುರಿತು ಹರಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು: ಐಜಿಪಿ ಸ್ಪಷ್ಟನೆ
# ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ
ಹೊನ್ನಾವರ: ಪರೇಶ್ ಮೇಸ್ತ ಸಾವು ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ಬಿಡುಗಡೆಗೊಳಿಸಿದ್ದ ಪತ್ರಿಕಾ ಪ್ರಕಟನೆ ಹಾಗು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು ಎಂದು ಸದ್ಯ ಕುಮಟಾದಲ್ಲಿ ಮೊಕ್ಕಾಂ ಹೂಡಿರುವ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರಲ್ಲಿ ಸಮಾಜವನ್ನು ಒಡೆಯುವ ಹಾಗು ಕೋಮುಭಾವನೆಯನ್ನು ಕೆರಳಿಸಲು ನಡೆಸಿದ ಷಡ್ಯಂತ್ರ ಈ ವದಂತಿಗಳ ಹಿಂದಿದೆ ಎಂದವರು ಹೇಳಿದ್ದಾರೆ.
ಪತ್ರಿಕಾ ಪ್ರಕಟನೆ ಹಾಗು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದ ಎಲ್ಲಾ ಆರೋಪಗಳನ್ನು ತನಿಖಾಧಿಕಾರಿ ಕಲೆ ಹಾಕಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಇದನ್ನು ಕಳುಹಿಸಲಾಗಿತ್ತು. ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಇಂದು ಲಭಿಸಿದ್ದು, ಸತ್ಯಾಂಶ ಏನೆಂಬುದನ್ನು ತಿಳಿಸಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ವರದಿ ಸಾಮಾಜಿಕ ಜಾಲತಾಣದಲ್ಲಿ ಹಾಗು ಪತ್ರಿಕಾ ಪ್ರಕಟನೆಯಲ್ಲಿರುವ ಆರೋಪಗಳನ್ನು ಅಪ್ಪಟ ಸುಳ್ಳು ಎಂದು ಸಾಬೀತುಪಡಿಸಿದೆ. ಪಕ್ಷವೊಂದು ನೀಡಿದ ಪತ್ರಿಕಾ ಪ್ರಕಟನೆ ಹಾಗು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ತಂತ್ರವಾಗಿದೆ ಎಂದವರು ಹೇಳಿದ್ದಾರೆ.
ಹೊನ್ನಾವರದಲ್ಲಿ ನಡೆದ ಕೋಮು ಗಲಭೆಗೆ ಪ್ರಚೋದನೆ ನೀಡಿದವರು ಹಾಗು ಕುಮಟಾದಲ್ಲಿ ಇಂದು ಸಿಬ್ಬಂದಿಯೊಬ್ಬರ ಮೇಲೆ ನಡೆದ ಹಲ್ಲೆಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿಂಬಾಳ್ಕರ್ ಹೇಳಿದ್ದಾರೆ.
ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಸದೆ ಶೋಭಾ ಕರಂದ್ಲಾಜೆ ‘ಇದು ಜಿಹಾದಿಗಳ ಕೃತ್ಯ’ ಎಂದು ಆರೋಪಿಸಿದ್ದರು. ಅಲ್ಲದೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಪ್ರಚೋದನಕಾರಿಯಾಗಿ ಮಾತನಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸಂಘಪರಿವಾರದ ಮಂದಿ ಪರೇಶ್ ಮೇಸ್ತಾ ಸಾವಿನ ಬಗ್ಗೆ ಪ್ರಚೋದನಕಾರಿ ಪೋಸ್ಟ್, ಸಂದೇಶಗಳನ್ನು ಹರಡುತ್ತಿದ್ದರು.