ಹೊನ್ನಾವರ: ಹೊನ್ನಾವರ, ಕುಮಟಾ ತಾಲೂಕುಗಳಲ್ಲಿ ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಜನಸಾಮಾನ್ಯರ ಆತಂಕಕ್ಕೆ ಯಾವ ರೀತಿಯಲ್ಲೂ ಸ್ಪಂದಿಸದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ 15-20 ದಿನಗಳಿಂದ ಹೊನ್ನಾವರ, ಕುಮಟಾ, ಮಾಗೋಡಿ ಹಾಗೂ ಇತರ ಕಡೆಗಳಲ್ಲಿ ದುಷ್ಕರ್ಮಿ ಗಳು ಕಲ್ಲೆಸೆತ, ಬೆಂಕಿ ಹಚ್ಚುವಿಕೆ, ದಾಂಧಲೆಯಿಂದ ಶ್ರೀಸಾಮಾನ್ಯರ ಸೊತ್ತುಗಳು ಹಾನಿಗೀಡಾಗಿವೆ. ಮಸೀದಿ, ಮನೆ, ಅಂಗಡಿಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿ ನಷ್ಟ ಉಂಟುಮಾಡಿದ್ದಾರೆ. ಘಟನೆಯಿಂ ದಾಗಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಏನೂ ಸಂಭವಿಸದಂತೆ ಮೌನವಾಗಿದ್ದಾರೆ ಎಂದು ಸಂಘ ಸಂಸ್ಥೆಗಳು ಆರೋಪಿ ಸಿವೆ. ಓರ್ವ ಸಚಿವರಾಗಿ ಅವರು ನಿರ್ವಹಿಸಬೇಕಾಗಿದ್ದ ಪಾತ್ರದ ಬಗ್ಗೆ ಜನರು ಆತಂಕಕ್ಕೀಡಾಗಿದ್ದು, ಮುಸ್ಲಿ ಮರ ರಕ್ಷಣೆ ಬಗ್ಗೆ ಸಚಿವರ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.
ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಠಿಕಾಣಿ ಹೂಡಬೇಕಾಗಿತ್ತು: ಯಮುನಾ ಗಾಂವ್ಕರ್
ಹೊನ್ನಾವರ: ಕಳೆದ ಹಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ, ಮಗೋಡಿ ಮೊದಲಾದ ಕಡೆಗಳಲ್ಲಿ ಕೋಮು ಘರ್ಷಣೆಗಳು ಸಂಭವಿಸುತ್ತಿದ್ದಾಗ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲಿ ಠಿಕಾಣಿ ಹೂಡಬೇಕಾಗಿತ್ತು ಎಂದು ಉ.ಕ. ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದ್ದಾರೆ. ಓರ್ವ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿರುವ ದೇಶಪಾಂಡೆ ಅವರು ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವಾಗ ಜಿಲ್ಲೆಯಲ್ಲಿ ಠಿಕಾಣಿ ಹೂಡಿ ಸರಕಾರದ ಪರವಾಗಿ ಮಾರ್ಗದರ್ಶನ ನೀಡಿ ಗಲಭೆಯನ್ನು ಹತ್ತಿಕ್ಕುವುದು ಅವರ ಕರ್ತವ್ಯವಾಗಿತ್ತು ಎಂದು ಹೇಳಿದ್ದಾರೆ. ಉ.ಕ. ಜಿಲ್ಲೆಯಲ್ಲಿ ಕೋಮುಗಲಭೆ ನಡೆಯುತ್ತಿದ್ದಾಗ ಸಿಪಿಎಂ, ಸರಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇತ್ತು. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದ್ದರೂ ಸಿಪಿಎಂ ತನ್ನ ಕರ್ತವ್ಯ ನಿಭಾಯಿಸಿದೆ. ಇತ್ತೀಚೆಗೆ ಹೊನ್ನಾವರದಲ್ಲಿ ಗಲಭೆಗೆ ಸಂಬಂಧಿಸಿ 4 ದಿನಗಳ ಹಿಂದೆಯಷ್ಟೇ ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
25 ವರ್ಷಗಳ ಹಿಂದೆ ಭಟ್ಕಳದಲ್ಲಿ ನಡೆದ ಗಲಭೆ ಸಹಿತ ಅದರ ಪೂರ್ವ, ನಂತರ ನಡೆದಿದ್ದ ಗಲಭೆಗಳನ್ನು ನಿಭಾಯಿಸಲು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಯಾವ ಸರಕಾರವೂ ಎದೆಗಾರಿಕೆಯನ್ನು ತೋರಿಸಿಲ್ಲ. ಪರೇಶ್ ಮೇಸ್ತಾ ಸಾವಿನ ಬಳಿಕ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ,ಅನಂತ ಕುಮಾರ ಹೆಗಡೆ ಜಿಲ್ಲೆಗೆ ಆಗಮಿಸಿ ಬೆಂಕಿ ಹಚ್ಚುವ ಹೇಳಿಕೆ ನೀಡಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಏನು ಮಾಡಬಾರದಿತ್ತು ಅದನ್ನು ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಳ್ಳುತ್ತಿರುವಾಗ ಸಚಿವ ದೇಶಪಾಂಡೆ ತಮ್ಮ ಕರ್ತವ್ಯ ನಿಭಾಯಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಚಿವರು ಜವಾಬ್ದಾರಿ ನಿಭಾಯಿಸಿಲ್ಲ: ನಾಯ್ಕಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮುಘರ್ಷಣೆ ಮರುಕಳಿಸುತ್ತಿದ್ದರೂ ಅದನ್ನು ಹತೋಟಿಗೆ ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಸರಿಯಾದ ಜವಾಬ್ದಾರಿ ನಿಭಾಯಿಸಿಲ್ಲ ಎಂದು ಜೆಡಿಎಸ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಯ್ಕಾ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲ ದಿನ ಕೋಮುಘರ್ಷಣೆ ಉಂಟಾದಾಗ ಅಂದೇ ಸಚಿವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಅವತ ನಿರ್ಲಕ್ಷದಿಂದ ಜಿಲ್ಲೆಯಲ್ಲಿ ಘರ್ಷಣೆ ಮರುಕಳಿಸಿದೆ. ರಾಜ್ಯದಲ್ಲಿ ಅವರದೇ ಸರಕಾರ ಇರುವಾಗ ಸಚಿವರು ಆಡಳಿತ ಯಂತ್ರ ಬಳಸಿ ಪರಿಸ್ಥಿತಿ ನಿಭಾಯಿಸಬೇಕಿತ್ತು ಮತ್ತು ಅದು ಅವರ ಕರ್ತವ್ಯವೂ ಆಗಿತ್ತು ಎಂದು ತಿಳಿಸಿದರು.
ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ: ಮುಝಮ್ಮಿಲ್
ದುಷ್ಕರ್ಮಿಗಳಿಂದ ದಾಂಧಲೆಗೊಳಗಾಗಿರುವ ಮುಸ್ಲಿಮರ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ ಎಂದು ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಭಟ್ಕಳ ಇದರ ಅಧ್ಯಕ್ಷ ಮುಝಮ್ಮಿಲ್ ಖಾಝಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊನ್ನಾವರ, ಕುಮಟಾ ಸಹಿತ ಹಲವು ಕಡೆಗಳಲ್ಲಿ ಮನೆ, ಅಂಗಡಿ ಹಾಗೂ ಮುಸ್ಲಿಮರ ಮೇಲೆ ದಾಳಿ ನಡೆದಿದ್ದು, ಉಸ್ತುವಾರಿ ಸಚಿವ ದೇಶಪಾಂಡೆ ಆಯಾ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು, ಈವರೆಗೂ ಅವರು ಭೇಟಿ ನೀಡಿಲ್ಲ. ಸಂತ್ರಸ್ತರಿಗೆ ಸರಕಾರದಿಂದ ಪರಿಹಾರ ಒದಗಿಸಿಲ್ಲ ಎಂದು ಮುಝಮ್ಮಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಂಝೀಮ್ ನಿಯೋಗ ಗೃಹ ಸಚಿವರನ್ನು ಭೇಟಿಯಾಗಿ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿದ್ದೇವೆ. ಆದರೂ ಶಾಂತಿ ಸಭೆ ನಡೆದಿಲ್ಲ ಎಂದು ತಿಳಿಸಿದರು.
ಮುಸ್ಲಿಮರನ್ನು ಭೇಟಿಯಾಗಿ ಧೈರ್ಯ ತುಂಬಬೇಕಾಗಿತ್ತು: ಮೊಹ್ಸಿನ್
ಹೊನ್ನಾವರ, ಕುಮಟಾ ಮತ್ತಿತರ ಕಡೆಗಳಲ್ಲಿ ದುಷ್ಕರ್ಮಿಗಳ ದಾಂಧಲೆಯಿಂದ ಆತಂಕಕ್ಕೀಡಾದ ಮುಸ್ಲಿಮರನ್ನು ಭೇಟಿಯಾಗಿ ಉಸ್ತುವಾರಿ ಸಚಿವರು ಸಂತ್ರಸ್ತರಲ್ಲಿ ಧೈರ್ಯ ತುಂಬಬೇಕಾಗಿತ್ತು ಎಂದು ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫಾರಂ ಇದರ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ಖಾಝಿಯ ಹೇಳಿದ್ದಾರೆ. ಮುಸ್ಲಿಮರ ಮನೆಗಳು, ಅಂಗಡಿ ಮುಂಗಟ್ಟು ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದರೂ, ಸಚಿವರು ಮುಸ್ಲಿಮರ ಪರವಾಗಿ ಅನುಕಂಪ ತೋರಿಸಿಲ್ಲ, ಈ ಬಗ್ಗೆ ಊರಿನ ಹಿರಿಯರನ್ನು ಕರೆದು ಶಾಂತಿ ಸಭೆ ನಡೆಸಿಲ್ಲ ಎಂದು ಅರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಪೆ: vbnewsonline