ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್ಗೆ ಸೀಮಿತಗೊಳಿಸುವ ಬದಲು 45 ಮೀಟರ್ ಅಗಲೀಕರಣಗೊಳಿಸಬೇಕು ಎಂದು ಈಗಾಗಲೇ ಅರ್ಜಿ ಸಲ್ಲಿಸಿದ್ದರೂ ಸಹ ಬೆಲೆ ಕೊಡದ ಜಿಲ್ಲಾಡಳಿತ, ಎನ್.ಎಚ್.ಎ.ಐ ಹಾಗೂ ಗುತ್ತಿಗೆದಾರ ಕಂಪೆನಿಯ ನಿರ್ಧಾರವನ್ನು ವಿರೋಧಿಸಿ ಶಿರಾಲಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.
ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ 700 ಮೀಟರ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವನ್ನು 45 ಮೀಟರ್ನಿಂದ 30 ಮೀಟರ್ಗೆ ಮೀತಿ ಗೋಳಿಸಿ ಈ ಹಿಂದೆಯೇ ಎನ್.ಎಚ್.ಎ.ಐ. ಆದೇಶ ಮಾಡಿದ್ದು ಆ ಪ್ರಕಾರವೇ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಂಎಯೇ ಹೆದ್ದಾರಿ ಅಗಲೀಕರಣ ಕಾಮಗಾರಿಯೂ ನಡೆಯುತ್ತಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನಾಗರೀಕರು ಕಳೆದ 5-6 ತಿಂಗಳಿನಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಿ ಶಿರಾಲಿಯ ಹೆದ್ದಾರಿ ಅಗಲೀಕರಣವನ್ನು ಸಂಪೂರ್ಣ 45 ಮೀಟರ್ಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಈ ಹಿಂದೆ ಪ್ರತಿಭಟನೆಯನ್ನು ಕೂಡಾ ಮಾಡಲಾಗಿದ್ದರೂ ಕೂಡಾ ಕೆಲಸ ಆರಂಭವಾಗಿತ್ತು. ಈ ಹಿಂದೆ ಪ್ರತಿಭಟನೆಯನ್ನು ಮಾಡಿದಾಗ ಕೆಲಸವನ್ನು ನಿಲ್ಲಿಸಿದ್ದ ಐ.ಆರ್.ಬಿ. ಕಂಪೆನಿ ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಬಂದೋಬಸ್ತ ಬಳಸಿ ಕೆಲಸ ಆರಂಭಿಸಿತ್ತು. ಇದರಿಂದ ಇನ್ನಷ್ಟು ಕೆರಳಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನಾಗರೀಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಶಾಸಕರು ಬಂದು ಭರವಸೆ ನೀಡುವ ತನಕ ಧರಣಿ ಸತ್ಯಾಗ್ರಹ ಮುಂದುವರಿಯುವುದು ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಶಿರಾಲಿ ಗ್ರಾಮ ಪಂಚಾಯತ್ ಶೀಘ್ರವಾಗಿ ಬೆಳೆಯುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವನ್ನು 30 ಮೀಟರ್ ಮಾಡುವುದರಿಂದ ಮುಂದೆ ತೀವ್ರ ತೊಂದರೆಯಾಗಲಿದೆ. ಅಟೋ ರಿಕ್ಷಾಗಳನ್ನು ನಿಲ್ಲಿಸಲೂ ಜಾಗಾ ಇಲ್ಲವಾಗುವುದಲ್ಲದೇ ಅಪಘಾತಗಳ ಸಂಖ್ಯೆ ಭಾರೀ ಹೆಚ್ಚಳವಾಗಲಿದೆ. ರಾಜ್ಯ ಸರಕಾರ ಶಿರಾಲಿಯ ಕುರಿತು ಮಲತಾಯಿ ಧೋರಣೆಯನ್ನು ತೋರಿಸುತ್ತಿದ್ದು ಇದು ಸರಿಯಲ್ಲ. ಹೆದ್ದಾರಿಯ ಅಗಲೀಕರಣ 45 ಮೀಟರ್ ಆಗುವ ತನಕ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದ ಅವರು. ನಮ್ಮ ಪ್ರತಿಭಟನೆ ಅನಿರ್ಧಿಷ್ಟಾವಧಿಯ ಕಾಲ ನೆಡಯಲಿದ್ದು ಬೇಡಿಕೆ ಈಡೇರುವ ತನಕ ಮುಂದುವರಿಯಲಿದೆ ಎಂದರು.
ಧರಣಿ ಸತ್ಯಾಗ್ರಹದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಊರಿನ ಪ್ರಮುಖರು, ನಾಗರೀಕರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು.