ಭಟ್ಕಳ ವಲಯಮಟ್ಟದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ
ಭಟ್ಕಳ: ಪಠ್ಯಗಳಂತೆ ಪಠ್ಯೇತರ ಚಟುವಟಿಕೆಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ ಹೇಳಿದರು.
ಅವರು ಗುರುವಾರ ನಗರದ ನೌನಿಹಾಲ್ ಪ್ರೌಢಶಾಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಭಟ್ಕಳ, ಸಾರ್ವಜನಿಕ ಶಿಕ್ಷಣ ಇಲಾಖೆ ಉ.ಕ. ಇವರು ಜಂಟಿಯಾಗಿ ಆಯೋಜಿಸಿದ್ದ ಭಟ್ಕಳ ತಾಲೂಕು ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಪಠ್ಯೇತರ ಚಟುವಟಿಕೆಗಳು ಅತಿಅವಶ್ಯಕವಾಗಿದ ಎಂದ ಅವರು, ಸರ್ಕಾರ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ, ಕಲೋತ್ಸವಗಳಂತಹ ಯೋಜನೆಗಳನ್ನು ರೂಪಿಸಿದೆ. ಇದೆ ಮೂಲಕ ವಿದ್ಯಾರ್ಥಿ ಶಾಲಾ ಹಂತ, ವಲಯ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಅನಾವರಣ ಮಾಡುತ್ತಾನೆ ಎಂದರು.
ಕ್ಷೇತ್ರ ಸಂಪನ್ಮೂಲ ಸಂಯೋಜನಾಧಿಕಾರಿ ಯಲ್ಲಮ್ಮ ಮರಿಸ್ವಾಮಿ ಮಾತನಾಡಿ, ಶಾಲಾ ಹಂತದಲ್ಲಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಹೊಣೆ ಶಿಕ್ಷರದ್ದಾಗಿದ್ದು ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಎಲ್ಲರಿಗೂ ಅವಕಾಶ ಮಾಡಿಕೊಡಬೇಕಾಗಿದೆ ಎಂದರು. ಸಿ.ಆರ್.ಪಿ. ಸಯೀದಾ ಫಾತಿಮುನ್ನಿಸಾ ರವರ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ಅಚ್ಚುಕಟ್ಟಾಗಿ ನಡೆದವು.
ವೇದಿಕೆಯಲ್ಲಿ ನೌನಿಹಾಲ್ ಸಂಸ್ಥೆಯ ಅಧ್ಯಕ್ಷ ಶಬೀಬ್ ಕೋಲಾ, ಕಾರ್ಯದರ್ಶಿ ಗುಲ್ ಅಫ್ರೋಝ್, ಮುಖ್ಯಾಧ್ಯಾಪಕಿ ಸಿವತಾ ಪ್ರಭು ಸಯೀದಾ ಫಾತಿಮುನ್ನಿಸಾ ಉಪಸ್ಥಿತರಿದ್ದರು.