ಬೆಂಗಳೂರು:ವಿಜಯನಗರ ಮಾಗಡಿ ರಸ್ತೆ ಸಮೀಪದ ಅಗ್ರಹಾರ ದಾಸರಹಳ್ಳಿ ಹಾಡಹಗಲೇ ಕೊಲೆಯಾಗಿದೆ. ಹಾವನೂರು ಪಬ್ಲಿಕ್ ಶಾಲೆಯ ಆವರಣದಲ್ಲೇ ಪ್ರಿನ್ಸಿಪಾಲ್ ರಂಗನಾಥ್ ನಾಯಕ್ ಅವರನ್ನು ಚಾಕು ಮತ್ತು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಇವತ್ತು ಸ್ಪೆಷಲ್ ಕ್ಲಾಸ್ಗೆಂದು ಬಂದಿದ್ದ ಶಾಲಾ ಮಕ್ಕಳ ಕಣ್ಣೆದುರೇ ಈ ಪೈಶಾಚಿಕ ಘಟನೆ ನಡೆದಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಂಗನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 10:30ಕ್ಕೆ ಈ ಘಟನೆ ಸಂಭವಿಸಿದೆ.
ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿ ಈ ಕೊಲೆ ನಡೆದಿರುವ ಶಂಕೆ ಇದೆ. ಗಂಗಮ್ಮ ಎಂಬುವರ ಮಕ್ಕಳಾದ ಪ್ರಸಾದ್ ಹಾಗೂ ಮಹೇಶ್ ಅವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. ಗಂಗಮ್ಮ ಹಾಗೂ ರಂಗನಾಥ್ ಮಧ್ಯೆ 10 ಅಡಿ ಜಾಗದ ಕುರಿತು ಹಲವು ವರ್ಷಗಳಿಂದಲೂ ವ್ಯಾಜ್ಯವಿತ್ತು. ಈ ವಿಚಾರದಲ್ಲಿ ಹಲವು ಬಾರಿ ಜಗಳಗಳಾಗಿತ್ತೆನ್ನಲಾಗಿದೆ. ರಂಗನಾಥ್ ಅವರಿಗೆ ಸೇರಬೇಕಾದ 10 ಅಡಿ ಜಾಗವನ್ನು ಗಂಗಮ್ಮ ಒತ್ತುವರಿ ಮಾಡಿಕೊಂಡ ಆರೋಪವಿದೆ. ರಂಗನಾಥ್ ಅವರು ಕೋರ್ಟ್ ಮೆಟ್ಟಿಲೇರಿ ನ್ಯಾಯ ಪಡೆದುಕೊಂಡಿದ್ದರು. ಕೋರ್ಟ್ ಆದೇಶದ ಮೇರೆ ಮೊನ್ನೆ ಶುಕ್ರವಾರದಂದು ವ್ಯಾಜ್ಯದ 10 ಅಡಿ ಪ್ರದೇಶವನ್ನು ತೆರವುಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡು ಗಂಗಮ್ಮನ ಮಕ್ಕಳು ಈ ಕೊಲೆ ಮಾಡಿರಬಹುದೆಂಬ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.