ಭಟ್ಕಳ: ವರ್ಣರಂಜಿತ ಪ್ರೋ-ಕಬಡ್ಡಿ ಸೀಸನ್-3 ಪಂದ್ಯಾವಳಿಗೆ ತಾಲೂಕಿನ ಸರ್ಪನಕಟ್ಟೆ ಸ್ಪೋಟ್ರ್ಸ ಕ್ಲಬ್ಬಿನ ಆಟಗಾರ ಹರೀಶ ನಾಯ್ಕ ಆಯ್ಕೆಯಾಗಿದ್ದಾರೆ.
ಪಂದ್ಯಾವಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಆಟಗಾರರಾಗಿರುವ ಹರೀಶ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡಲಿದ್ದಾರೆ. ಬಡ ಕುಟುಂಬದಲ್ಲಿ ಬೆಳೆದ ಈತನು ಅತ್ಯಂತ ಕಠಿಣ ಪರಿಶ್ರಮದಿಂದ ಈ ಸಾಧನೆಯ ಶಿಖರವನ್ನೇರಿದ್ದಾನೆ. ಪ್ರಸ್ತುತ ಧಾರವಾಡದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವ್ಯಾಸಂಗ ಮಾಡುತ್ತಿರುವ ಈತನು ಪಿಯುಸಿಯಲ್ಲಿ ಓದುತ್ತಿರುವಾಗಲೇ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾನೆ. ಭಟ್ಕಳದ ಸರ್ಪನಕಟ್ಟೆಯ ಸ್ಪೋಟ್ರ್ಸ ಕ್ಲಬ್ ಈತನ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದು, ಇದೀಗ ಫಲ ನೀಡಿದೆ. ಗುರುವಾರ ಸಂಜೆ ತಾಲೂಕಿನ ಖಾಸಗಿ ಹೊಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ಕಬಡ್ಡಿ ಅಮೋಚೂರ್ ಅಸೋಶಿಯೇಶನ್ನಿನ ಪ್ರಮುಖರು, ಹರೀಶ ಆಯ್ಕೆಯೊಂದಿಗೆ ಭಟ್ಕಳ ಕಬಡ್ಡಿಗೆ ಹೆಸರುವಾಸಿಯಾಗಿರುವುದು ಇನ್ನೊಮ್ಮೆ ಸಾಬೀತಾಗಿದೆ. ಇದು ಭಟ್ಕಳಿಗರಲ್ಲಿ ಉತ್ಸಾಹವನ್ನು ಹೆಚ್ಚಿಸಿದ್ದು, ಯುವ ಪೀಳಿಗೆ ಇದನ್ನು ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ಎಮ್.ಬಿ.ನಾಯ್ಕ, ಇನಾಯಿತುಲ್ಲಾ ಶಾಬಂದ್ರಿ, ಶ್ರೀಧರ ನಾಯ್ಕ, ಜಾಫರ್, ಗಣೇಶ ನಾಯ್ಕ, ಹನ್ಮಂತ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ವಾಸು ನಾಯ್ಕ, ಉಮೇಶ ನಾಯ್ಕ, ತುಳಸೀದಾಸ ನಾಯ್ಕ, ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.