ಹಳಿಯಾಳ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರೊ.ಮಾಲತಿ ಹಿರೇಮಠ ಅವರಿಗೆ ಕ.ವಿ.ವಿ ಉತ್ತಮ ಎನ್.ಎಸ್.ಎಸ್. ಅಧಿಕಾರಿ ಪ್ರಶಸ್ತಿ ಪ್ರಧಾನ
ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ವಿಶ್ವವಿದ್ಯಾಲಯ ಮಟ್ಟದ 2016-17ನೇ ಸಾಲಿನ ಡಾ.ಡಿ.ಸಿ.ಪಾವಟೆ ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರೊ. ಮಾಲತಿ ಸಿ. ಹಿರೇಮಠ ಅವರು ಇಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಸಮಾರಂಭದಲ್ಲಿ ಸ್ವೀಕರಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಸ್ತುತ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಮಾಲತಿ ಹಿರೇಮಠ ಅವರು ಕಳೆದ 2013-2014 ರಿಂದ ಇಲ್ಲಿವರೆಗೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವುದರಿಂದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳ ಅಧ್ಯಕ್ಷತೆಯ ಸಮಿತಿ ಸಂದರ್ಶನ ಮೂಲಕ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ದತ್ತುಗ್ರಾಮ ಯೋಜನೆ, ಬುಡಕಟ್ಟು ಜಾನಪದ ನೃತ್ಯ-ಸಾಹಿತ್ಯ-ಕಲೆ ಉಳಿಕೆ, ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಚಾರ, ಫಲಾನುಭವಿಗಳ ಸೂಕ್ತ ಆಯ್ಕೆಗೆ ಸಹಾಯ, ಗ್ರಾಮದ ಸಮಾಜೋಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮೂಲಕ ದತ್ತಾಂಶ ಸಂಗ್ರಹ, ಶೌಚಾಲಯಗಳ ನಿರ್ಮಾಣ, ಈಶಾನ್ಯ ರಾಜ್ಯಗಳ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮವನ್ನು ಬುಡಕಟ್ಟು ವಾಸಿಗಳ ಗ್ರಾಮದಲ್ಲಿ ಯಶಸ್ವಿ ಆಯೋಜನೆ, ಅರಣ್ಯೀಕರಣ, ಉಚಿತ ಆರೋಗ್ಯ ಶಿಬಿರ, ಪಲ್ಸ್ ಪೋಲಿಯೋ, ರಕ್ತದಾನ ಮತ್ತು ವಾರ್ಷಿಕ ಶಿಬಿರಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರೊ.ಮಾಲತಿ ಹಿರೇಮಠ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಧಾರವಾಡ ಕೆ.ಇ.ಬೊರ್ಡನ ಪ್ರಾಚಾರ್ಯ ಪ್ರೊ. ಮೊಹನ ಸಿದ್ದಾಂತಿ, ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ ಆರ್.ಆರ್.ನಾಯಕ ಮತ್ತು ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಎಂ.ಬಿ.ದಳಪತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಕಾರ್ಯಕ್ರಮಾಧಿಕಾರಿಗಳು, ಕಾಲೇಜು ಪ್ರಾಚಾರ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.