ಭಟ್ಕಳ: ನಗರದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಉತ್ತರ ಕನ್ನಡ ಜಿಲ್ಲಾ ಆಹ್ವಾನಿತ ಅಂತರ್ ಪದವಿ ಕಾಲೇಜುಗಳ ವಿಷಯ ಪ್ರಸ್ತುತಿ ಸ್ಪರ್ಧೆ (ಪೇಪರ್ ಪ್ರೆಸೆಂಟೇಶನ್) "ಅಭ್ಯುದಯ 2019"ಜರುಗಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಶ್ರೀಧರ ಆಚಾರ್ಯ ಮಾತನಾಡಿ " ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿಷಯವನ್ನು ಪರಿಣಾಮಕಾರಿ ಬಳಸಿಕೊಳ್ಳುವುದರ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ಮಾತನಾಡಿ " ಯುವಜನತೆ ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು" ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಷನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಟ್ರಸ್ಟ್ನ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲ ನಾಗೇಶ ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೈಬರ್ ಸೆಕ್ಯುರಿಟಿ, ಉತ್ತರ ಕನ್ನಡ ಜಿಲ್ಲೆ ಮತ್ತು ಸಣ್ಣ ಕೈಗಾರಿಕೆಗಳು, ಜಿ.ಎಸ್.ಟಿ ಸ್ಟಾರ್ಟಪ್ ಇಂಡಿಯಾ, ಡಿಜಿಟಲ್ ಪೇಮೆಂಟ ಮುಂತಾದ ವಿಷಯಗಳನ್ನು ಪ್ರಸ್ತುತ ಪಡಿಸಿದರು.
ಬಿ.ಸಿ.ಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು, ಉಪನ್ಯಾಸಕ ವಿಶ್ವನಾಥ ಭಟ್ಟ ವಂದಿಸಿದರು. ಬಿ.ಕಾಂ ಕಾಲೇಜಿನ ಸಂಯೋಜಕ ಫಣಿಯಪ್ಪ ಹೆಬ್ಬಾರ ವರದಿ ವಾಚಿಸಿದರು. ಉಪನ್ಯಾಸಕರು ಹಾಗೂ ಉತ್ತರ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಹಾಜರಿದ್ದರು.