ಭಟ್ಕಳ:ಈ ಹಿಂದೆ ಅಳ್ವೇಕೋಡಿ ಅಭಿವೃದ್ಧಿ ಕಾಣದಾಗಿದ್ದು, ಈಗ ಇದರ ಅಭಿವೃದ್ಧಿಗೆ ಇಲ್ಲಿನ ಜನರ ಶ್ರಮವೇ ಕಾರಣವಾಗಿದೆ. ಅದೇ ರೀತಿ ಇಲ್ಲಿನ ಮೀನುಗಾರಿಕಾ ಸಹಕಾರಿ ಸಂಘದ ಶ್ರಮವೂ ಇದ್ದು ಇದೇ ರೀತಿ ಮುನ್ನಡೆಯಲಿ ಎಂದು ಉ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ ಅಧ್ಯಕ್ಷ ಗಣಪತಿ ಮಾಂಗ್ರೆ ಹಾರೈಸಿದರು.
ಅವರು ಶುಕ್ರವಾರದಂದು ಇಲ್ಲಿನ ಶಿರಾಲಿಯ ಅಳ್ವೇಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಹಬ್ಬ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಹಿಂದೆ ಇದ್ದ ಅಳ್ವೇಕೋಡಿ ಈಗ ಬೃಹದಾಕಾರ ಬೆಳೆದು ನಿಂತಿದೆ. ಮೀನುಗಾರಿಕಾ ಸಹಕಾರಿ ಸಂಘವೂ ಸಣ್ಣ ಪ್ರಮಾಣದ ಸಂಸ್ಥೆಯಿಂದ ಆರಂಭವಾಗಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಅಳ್ವೇಕೋಡಿ ಸಹಕಾರಿ ಸಂಘವೂ ಜಿಲ್ಲೆಯಲ್ಲಿಯೇ ತನ್ನದೇ ಆದ ಸ್ಥಾನಮಾನ, ಗೌರವವನ್ನು ಹೊಂದಿದ್ದು, ರಾಜ್ಯದಲ್ಲಿಯೇ ಹೆಸರು ಪಡೆದುಕೊಂಡಿದೆ. ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದಿಸಿದ ಅವರು ಮುಂದಿನ ದಿನದಲ್ಲಿ ಸಂಸ್ಥೆಗೆ ನಮ್ಮ ಸಹಕಾರ ನೀಡಲಿದ್ದೇನೆ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಮುಂದಿನ ದಿನದಲ್ಲಿ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.
ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ನೆರವೆರಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ ‘ಸಂಘವೂ 50 ವರ್ಷದ ಹಿಂದೆ ಸಣ್ಣ ಕಟ್ಟಡದಲ್ಲಿ ಆರಂಭಗೊಂಡು ಈಗ ವಿದ್ಯುಕ್ತವಾಗಿ ಸುಸಜ್ಜಿತ ಕಟ್ಟಡ ಉದ್ಘಾಟನೆಗೊಂಡಿರುವುದು ಸಂತಸವಾಗಿದೆ. ಈ ಸಂಘದ ಸಹಾಯ ಎಲ್ಲಾ ಜನರಿಗೂ ದೊರೆಯಬೇಕಿದ್ದು, ಎಲ್ಲರಿಗೂ ಮಾದರಿ ಸಂಸ್ಥೆಯಾಗಿ ಬೆಳೆಯಲೇ ಎಂದು ಹಾರೈಸಿದರು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ಚಿನ್ನಾಭರಣಗಳ ಭದ್ರತಾ ಕೊಠಡಿಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಾಸು ನಾಗಪ್ಪ ದೈಮನೆ ಉದ್ಘಾಟಿಸಿದರು. ಹಾಗೂ 50 ವರ್ಷ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳಿಗೆ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಅಳ್ವೇಕೋಡಿ ಮೀನುಗಾರಿಕಾ ಸಹಕಾರಿ ಸಂಘದಅಧ್ಯಕ್ಷ ವಿಠ್ಠಲ ಎಸ್. ದೈಮನೆ, ಶಿರಾಲಿ ಗ್ರಾ.ಪಂ. ಅದ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ನಾರಾಯಣ ದೈಮನೆ, ಟ್ರಾಲ್ ಬೋಟ ಯೂನಿಯನ್ ಮುಖಂಡ ತಿಮ್ಮಪ್ಪ ಹೊನ್ನಿಮನೆ, ಊರಿನ ಪ್ರಮುಖ ರಾಮಾ ಮೋಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.