ಚಿಕ್ಕನಾಯಕನಹಳ್ಳಿ: ಗುಡಿಸಲಿಗೆ ಬೆಂಕಿ ತಗುಲಿ ಬಾಲಕಿಯೊಬ್ಬಳು ಜೀವಂತ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಯೋಗಮಾಧವನಗರ ಕಾಲೋನಿಯ ಗುಡಿಸಲುಗೆ ತಗುಲಿದ ಅಗ್ನಿ ಅವಘಡದಿಂದಾಗಿ ಅನಿತಾ ಎಂಬ 6ವರ್ಷದ ಹೆಣ್ಣು ಮಗು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದೆ.
ಯೋಗ ಮಾದವನಗರದಲ್ಲಿ ಅಲೆಮಾರಿಗಳಾದ ದೊಂಬಿದಾಸ ಕುಟುಂಬದವರ ಗುಡಿಸಲಿಗೆ ರಾತ್ರಿ ಬೆಂಕಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಅಗ್ನಿ ಅವಘಡಕ್ಕೆ ಸಿಲುಕಿದ 6 ವರ್ಷದ ಮುಗ್ದ ಬಾಲಕಿ ಸಂಪೂರ್ಣ ಸುಟ್ಟು ಹೋಗಿ ಮೂಳೆಗಳು ಮಾತ್ರ ಉಳಿದಿದೆ, ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ.
ಯೋಗಮಾದವನಗರದಲ್ಲಿ ಸರ್ಕಾರಿ ಜಾಗದಲ್ಲಿ ಸುಮಾರು 15 ವರ್ಷಗಳಿಂದ ವಾಸವಾಗಿದ್ದ ಈ ಕುಟುಂಬಗಳು ಸುಮಾರು 5 ರಿಂದ 6 ಗುಡಿಸಲುಗಳು ನಿರ್ಮಾಣವಾಗಿದ್ದವು. ಮೃತ ಅನಿತಾ ಪೋಷಕರು ಬೇರೆ ಊರಿಗೆ ವ್ಯಾಪಾರಕ್ಕೆ ಹೋಗಿದ್ದರು.
ಬೆಂಕಿ ನಂದಿಸಲು ಆಗ್ನಿ ಶಾಮಕ ದಳ ಬರುವಷ್ಟರಲ್ಲಿ ಅನಾಹುತ ನಡೆದು ಹೋಗಿದ್ದು, ಈ ಸಂಬಂಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿಕುಮಾರ್, ಸಿಡಿಪಿಒ ತಿಪ್ಪಯ್ಯ, ಅಲೆಮಾರಿ ಬುಡುಕಟ್ಟು ಮಹಾಸಭಾದ ರಾಜಪ್ಪ ಹುಳಿಯಾರ್, ರಂಗನಾಥ್ ಭೇಟಿ ನೀಡಿ ಪರಿಶೀಲಿಸಿದರು.