ಮಂಗಳೂರು: ಕರ್ನಾಟಕ ಕೇರಳ ಗಡಿಭಾಗವಾದ ಕೇರಳ ರಾಜ್ಯ ವ್ಯಾಪ್ತಿಯ ತಲಪಾಡಿ ಆರ್ ಟಿ ಒ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರೊಂದರಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಕರ್ನಾಟಕದ ಭಾಗವಾದ ತಲಪಾಡಿಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಮಂಗಳೂರಿನಿಂದ ಕಾಸರಗೋಡು ತೆರಳುತ್ತಿದ್ದ ಟ್ಯಾಂಕರಿನ ಮೇಲ್ಬಾಗದಿಂದ ಗ್ಯಾಸ್ ಮೇಲಕ್ಕೆ ಸ್ಪ್ರೇ ಆಗುತಿತ್ತು. ಕೂಡಲೇ ಮಂಜೇಶ್ವರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.
ಕಾಸರಗೋಡು ಭಾಗದಿಂದ ಆಗಮಿಸುತ್ತಿರುವ ವಾಹನಗಳನ್ನು ತೂಮಿನಾಡಿನಲ್ಲಿ ತಡೆದು ಒಳ ರಸ್ತೆಯಿಂದಾಗಿ ತಲಪಾಡಿ ಭಾಗಕ್ಕೆ ಕಳುಹಿಸಲಾಗಿತ್ತು. ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಯಿತು.
ಘಟನಾ ಸ್ಥಳದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸೋರಿಕೆಯಿಂದ ಆಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಸಮೀಪವಿದ್ದ ವ್ಯಾಪಾರ ಕೇಂದ್ರಗಳನ್ನು ಮುಚ್ಚುಗಡೆಗೊಳಿಸಲಾಯಿತು.
ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಆಗಮಿಸುವ ಟ್ಯಾಂಕರಿನಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಕರ್ನಾಟಕದ ಗಡಿಭಾಗದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.