ಗಂಗೊಳ್ಳಿ: ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ - ಅಂತಿಮ ಸಂಸ್ಕಾರ ನಡೆಸಿದ ಮುಸ್ಲಿಮರು

Source: so english | By Arshad Koppa | Published on 6th September 2016, 8:36 AM | Coastal News | Incidents | Don't Miss |

ಗಂಗೊಳ್ಳಿ, ಸೆ ೫: ಗಂಗೊಳ್ಳಿ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಓರಿಸ್ಸಾ ಮೂಲದ ಮೀನುಗಾರ ದಯಾ ಸಾಗರ್ (35) ಎಂಬುವರು ಸೆ. ೪ ರಂದು ಮೀನು ಹಿಡಿಯುವ ಸಮಯದಲ್ಲಿ ನಾಪತ್ತೆಯಾಗಿದ್ದರು. ಇವರ ಶವ ಸೆ ೫ ರ ಬೆಳಿಗ್ಗೆ ನಾಪತ್ತೆಯಾದಲ್ಲೇ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಇವರ ಆಪ್ತರು ಯಾರೂ ಇಲ್ಲಿ ಇಲ್ಲದ ಕಾರಣ ಹಿಂದೂ ವಿಧಿಗಳಿಗನುಸಾರವಾಗಿ ಅಂತ್ಯ ಸಂಸ್ಕಾರವನ್ನು ಮುಸ್ಲಿಮರೇ ನಡೆಸಿ ಭಾವೈಕ್ಯತೆ ಮೆರೆದಿದ್ದಾರೆ.

ಒಂದು ದೋಣಿಯಿಂದ ಇನ್ನೊಂದು ದೋಣಿಗೆ ದಾಟುವಾಗ ಕಾಲು ಜಾರಿ ಬಿದ್ದು ಮುಳುಗಿದ್ದ ಈತನನ್ನು ಹುಡುಕಲು ಬಹಳಷ್ಟು ಪ್ರಯತ್ನಿಸಲಾಗಿತ್ತು. 

ಮರುದಿನ ಶವ ಕಂಡುಬಂದ ಬಳಿಕ ಗಂಗೊಳ್ಳಿ 24X7 ಹೆಲ್ಪ್ ಲೈನ್ ಸ್ವಯಂಸೇವಕರು ವಿಷಯವನ್ನು ಪೋಲೀಸರಿಗೆ ತಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಒರಿಸ್ಸಾದಲ್ಲಿ ಇರುವ ಇವರ ಮನೆಯವರನ್ನು ಸಂಪರ್ಕಿಸಲು ಗಂಗೊಳ್ಳಿ 24X7 ಹೆಲ್ಪ್ ಲೈನ್ ಸ್ವಯಂಸೇವಕರು ಬಹಳಷ್ಟು ಪ್ರಯತ್ನಿಸಿದರಾದರೂ ಫಲ ಕಾಣಲಿಲ್ಲ. ಆದರೆ ಈ ಪ್ರಯತ್ನಗಳ ನೆರವಿನಿಂದ ಉಡುಪಿಯಲ್ಲಿರುವ ಒರಿಸ್ಸಾದವರೇ ಆದ ದೂರದ ಸಂಬಂಧಿ ನಿಶಾಂತ್ ಎಂಬುವರು ಉಡುಪಿಯಿಂದ ಆಗಮಿಸಿ ಮೃತರ ಸಂಬಂಧಿಕರನ್ನು ಸಂಪರ್ಕಿಸಿ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಪಡೆದರು. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ನಿಶಾಂತ್ ರವರಿಗೆ ಒಪ್ಪಿಸಲಾಯಿತು. ಇವರು ಗಂಗೊಳ್ಳಿ 24X7 ಹೆಲ್ಪ್ ಲೈನ್ ಸ್ವಯಂಸೇವಕರ ಸಹಾಯ ಪಡೆದು ಗಂಗೊಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಿದರು. 

ಈ ಕಾರ್ಯದಲ್ಲಿ ಸಾಹಿಲ್ ಆನ್ಲೈನ್ ತಾಣದ ಕುಂದಾಪುರ ಪ್ರತಿನಿಧಿ ಇಬ್ರಾಹಿಂ ಗಂಗೊಳ್ಳಿ ಪ್ರಮುಖ ಪಾತ್ರ ವಹಿಸಿದ್ದು ಪ್ರಾರಂಭದಿಂದ ಅಂತಿಮ ಸಂಸ್ಕಾರ ಪೂರ್ಣಗೊಳ್ಳುವವರೆಗೂ ಕಾಳಜಿ ವಹಿಸಿ ಎಲ್ಲಾ ಕಾರ್ಯಗಳು ಸುಗಮವಾಗುವಂತೆ ನೋಡಿಕೊಂಡರು. ಇವರಿಗೆ ಸದಸ್ಯರಾದ ಮೌಲಾನಾ ಶಕೀಲ್, ಅಬ್ದುಲ್ ಸುಭಾನ್, ಹಾಜಿ ಮುಜಮ್ಮಿಲ್, ಮುಹಮ್ಮದ್ ನದೀಂ, ಅಬ್ದುಲ್ ಮಜೀದ್ ಸಹಕರಿಸಿದರು. ಬೋಟ್ ಮಾಲಿಕರಾದ ಭವಾನಿ ಶಂಕರ್, ಸ್ನೇಹಿತರಾದ ಲೋಕೇಶ್, ರಾಜಕುಮಾರ್ ಸಹಾ ಉಪಸ್ಥಿತರಿದ್ದರು. ಈ ಮೂಲಕ ಭಾವೈಕ್ಯತೆ ಮತ್ತು ಸೌಹಾರ್ದತೆ ಮೆರೆದ 24X7 ಹೆಲ್ಪ್ ಲೈನ್ ಸ್ವಯಂಸೇವಕರು ಹಾಗೂ ಇತರರು ರಾಜ್ಯಕ್ಕೇ ಮಾದರಿಯಾಗಿದ್ದಾರೆ. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...