· ನಿರಪರಾಧಿ ಎಂದು ಸಾಬಿತಾಗಲು ೯ವರ್ಷ ಬೇಕಾಯಿತು
ಭಟ್ಕಳ: ತಾನು ಮಾಡದ ತಪ್ಪಿಗಾಗಿ ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಜೈಲಿನಲ್ಲಿ ತನ್ನ ಅರ್ದ ಯೌವನವನ್ನೆ ಕಳೆದ ಭಟ್ಕಳ ಮಗ್ದೂಮ್ ಕಾಲೋನಿಯ ಮೌಲಾನ ಶಬ್ಬಿರ್ ಗಂಗೋಳಿ(೩೭) ಕೊನೆಗೂ ನಿರಪರಾಧಿ ಎಂದು ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಟಾಂಜಲಿ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿದ್ದಾರೆ.
ಪೊಲೀಸರ ಒಂದು ದುಡುಕಿನ ನಿರ್ಧಾರದಿಂದಾಗಿ ಒರ್ವ ವ್ಯಕ್ತಿ ಹೇಗೆ ತನ್ನ ಇಡೀ ಜೀವನವೇ ಜೈಲಿನಲ್ಲಿ ಕೊಳೆಯಬೇಕಾದೀತು ಎನ್ನುವುದಕ್ಕೆ ತಾಜಾ ಉದಾಹರಣೆ ಎನ್ನಬಹುದಾದ ಪ್ರಕರಣ ಇದಾಗಿದೆ.
೨೦೦೮ ರಲ್ಲಿ ಉಳ್ಳಾಲ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕ ರಿಯಾಝ್ ಹಾಗೂ ಇಕ್ಬಾಲ್ ರ ಸಂಪರ್ಕದಲ್ಲಿದ್ದು ಜಿಹಾದಿ ಸಾಹಿತ್ಯ ವಿತರಣೆ ಮಾಡಿರುವ ಆರೋದಡಿ ಪೊಲೀಸರಿಗೆ ಬೇಕಾಗಿದ್ದ ಮೌಲಾನ ಶಬ್ಬಿರ್ ಇವರ ಸಹವಾಸವೇ ಬೇಡಬೆಂದು ಮಹರಾಷ್ಟ್ರ ಪೂನಾದ ತನ್ನ ಸಹೋದರಿಯ ಮನೆಯಲ್ಲಿದ್ದು ಅಲ್ಲಿಯೆ ಮಸೀದಿಯೊಂದರಲ್ಲಿ ಇಮಾಮರ ಕಾರ್ಯಮಾಡುತ್ತ ಬದುಕು ಸಾಗುತ್ತಿದ್ದ ಈತನಿಗೆ ನವೆಂಬರ್ ೨೯,೨೦೦೯ರಂದು ನಕಲಿ ನೋಟು ಪ್ರಕರಣವೊಂದರಲ್ಲಿ ಅಲ್ಲಿನ ಪೊಲೀಸರು ಬಂಧಿಸುತ್ತಾರೆ. ಬಂಧನದ ಎರಡು ತಿಂಗಳ ನಂತರ ಅಂದರೆ ಜನೆವರಿ ೨೦೦೯ ರಲ್ಲಿ ಈತನಿಗೆ ಕೋರ್ಟಿಗೆ ಹಾಜರು ಪಡಿಸಲಾಗುತ್ತದೆ. ಅಕ್ರಮವಾಗಿ ೨ ತಿಂಗಳು ಕಾಲ ಪೊಲೀಸರ ಕಸ್ಟೋಡಿಯಲ್ಲಿದ್ದು ಅನುಭವಿಸಲಾರದ ಅನುಭವಗಳನ್ನು ಪಡೆಯುತ್ತಾನೆ. ಅಲ್ಲಿನ ಕೋರ್ಟ್ ಈತನಿಗೆ ೫ ವರ್ಷಗಳ ಜೈಲು ಶಿಕ್ಷೆಯೂ ನೀಡುತ್ತದೆ. ಆದರೆ ಈತನ ಉತ್ತಮ ಚಾರಿತ್ಯ್ರ ಹಾಗೂ ನಡವಳಿಕೆಯನ್ನು ಕಂಡು ಪ್ರಭಾವಿತ ಪೊಲೀಸರು ೪ತಿಂಗಳು ಮೊದಲೆ ಬಿಡುಗಡೆಗೊಳಿಸುತ್ತಾರೆ.
ಈ ಮಧ್ಯೆ ಮುಂಬೈಯಲ್ಲಿ ೨೬/೧೧ ನಡೆಯುತ್ತೆ. ಇದಕ್ಕಾಗಿ ಬಲಿಯ ಕುರಿಗಳ ಹುಡಕಾಟದಲ್ಲಿದ್ದ ಪೊಲೀಸರಿಗೆ ಮೌಲಾನ ಶಬ್ಬಿರ್ನನ್ನು ಬಹಳ ಸುಲಭವಾಗಿ ಬಲಿಗೆ ಅರ್ಪಿಸುವ ಸಿದ್ದತೆಗಳು ನಡೆಯುತ್ತದೆ. ಅಲ್ಲದೆ ೨೦೧೦ ರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತದೆ. ಈ ಮಧ್ಯೆ ಎ.ಪಿ.ಸಿ.ಆರ್. ನಾಗರೀಕ್ಷ ಹಕ್ಕು ಸಂರಕ್ಷಣ ಸಂಸ್ಥೆಯೊಂದು ಬಲವಾದ ದಾವೆ ಹೂಡಿ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ಬಾಂಬ್ ಬ್ಲಾಸ್ಟ್ ಹೇಗೆ ಮಾಡಲು ಸಾಧ್ಯ? ಎಂದು ಸುಪ್ರಿಮ್ ಕೋರ್ಟ್ನಲ್ಲಿ ಪ್ರಶ್ನಿಸುತ್ತಾರೆ. ಇದರಿಂದಾಗಿ ಆ ಪ್ರಕರಣದಲ್ಲಿ ಕೈಬಿಟ್ಟ ಪೊಲೀಸರು ಈತನಗೆ ನ್ಯಾಯಾಲಯದಿಂದ ಜಾಮೀನು ಸಿಗದ ಹಾಗೆ ನೋಡಿಕೊಳ್ಳುತ್ತಾರೆ. ಮತ್ತೆ ಎ.ಪಿ.ಸಿ.ಆರ್.ಸಂಸ್ಥೆಯು ಸುಪ್ರಿಮ್ ಕೋರ್ಟ ಮೊರೆ ಹೋಗಿ ಈತನ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಮಂಗಳೂರು ನ್ಯಾಯಾಲಯಕ್ಕೆ ತೀವ್ರಗತಿಯಲ್ಲಿ ಶಬ್ಬಿರ್ ನ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದೇಶಿಸುತ್ತದೆ. ಕಳೆದ ಒಂದು ವರ್ಷದಿಂದ ಪ್ರಕರಣ ತ್ವರಿತಗತಿಯಲ್ಲಿ ಸಾಗಿದ್ದು ಸೋಮವಾರ ಮೌಲಾನ ಶಬ್ಬಿರ್ ನಿರಾಪರಾಧಿ ಎಂದು ನ್ಯಾಯಾಧೀಶರು ಘೋಷಿಸುತ್ತಾರೆ.
ಇಷ್ಟೆಲ್ಲ ಆಗಬೇಕಾದರೆ ಬರೋಬ್ಬರಿ ೯ ವರ್ಷ ಬೇಕಾಯಿತು. ಈ ೯ ವರ್ಷಗಳಲ್ಲಿ ದೇಶ ಹಲವು ಬದಾವಣೆ ಕಂಡಿದೆ. ತಾನು ಹುಟ್ಟಿ ಬೆಳೆದ ಭಟ್ಕಳ ಸಂಪೂರ್ಣ ಬದಲಾಗಿದೆ. ಮಗನ ನಿರೀಕ್ಷೆಯಲ್ಲಿದ್ದ ಬಡ ತಾಯಿಯ ದೇಹದ ಚರ್ಮ ಸುಕ್ಕುಗಟ್ಟಿದೆ. ತನ್ನ ಗಂಡನನ್ನೂ ಕಳೆದುಕೊಂಡ ಈಕೆ ತನ್ನಾಸರೆಯಾಗಿರುವ ಮಗನ ಬರುವಿಕೆಗಾಗಿ ಜೀವವನ್ನು ಗಟ್ಟಿಯಾಗಿಟ್ಟುಕೊಂಡು ಬದುಕುತ್ತದ್ದಾರೆ. ಮನೆ ಮಂದಿಗೆ ಆಸರೆಯಾಗಬೇಕಾಗಿದ್ದ ಮಗ ತನ್ನ ೨೭ನೇ ವಯಸ್ಸಿನಲ್ಲಿಯೆ ಜೈಲು ಪಾಲಾದ ಈಗ ಆತನಿಗೆ ೩೭ ವರ್ಷ ತನ್ನ ಹೆಚ್ಚಿನೆಲ್ಲ ಯೌವನವನ್ನು ಸೆರೆಮನೆಯ ಸಲಾಕೆಗಳ ಹಿಂದೆ ಕಳೆದ ಈತನ ಆ ಯೌವನದ ದಿನಗಳನ್ನು ಯಾವ ಇಲಾಖೆ ಮರಳಿ ಕೊಡುತ್ತದೆ ಎನ್ನುವುದು ಮಾತ್ರ ಅರ್ಥವಾಗದ ಒಗಟಾಗಿ ಉಳಿದುಕೊಂಡಿದೆ.