ಜೆ.ಡಿ.ಎಸ್. ಅಭ್ಯರ್ಥಿ ಮಧುಬಂಗಾರಪ್ಪ ಪರ ಮಾಜಿ ಸಿಯಂ ಭರಾಟೆಯ ಪ್ರಚಾರ
ಬೈಂದೂರು: ಬಿ.ಎಸ್.ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗುವ ಆಸೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರ ಮೇಲೆ ಈ ಉಪಚುನಾವಣೆಯನ್ನು ಅನಗತ್ಯವಾಗಿ ಹೇರಲಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನ.3ರಂದು ನಡೆಯುವ ಉಪಚುನಾವಣೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗೂರಿನಲ್ಲಿ ಆಯೋಜಿಸಲಾದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಕ್ಕೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ನಡೆಯುತ್ತಿದೆ. ಇವುಗಳಲ್ಲಿ ಕೇವಲ 4-5 ತಿಂಗಳ ಕಾಲಾವಕಾಶವಿರುವ ಲೋಕಸಭಾ ಚುನಾವಣೆಯನ್ನು ಅನಗತ್ಯವಾಗಿ ರಾಜ್ಯದ ಜನತೆಯ ಮೇಲೆ ಹೇರಲಾಗಿದೆ ಎಂದವರು ನುಡಿದರು.
ಕ್ಷೇತ್ರದ ಜನರನ್ನು ಕೇಳಿ ರಾಜಿನಾಮೆ ನೀಡಬೇಕಿತ್ತು. ಆದರೆ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ಪ್ರಜಾಪ್ರಭುತ್ವ ವಿರೋಧಿ ನಿಲುವಿನಿಂದಾಗಿ ಕ್ಷೇತ್ರದ ಮತದಾರರಿಗೆ ಅಪಮಾನ ಮಾಡಿದ್ದಾರೆ. ಈ ಎಲ್ಲಾ ಅರಾಜಕತೆಗೆ ಶಿವಮೊಗ್ಹ ಕ್ಷೇತ್ರದ ಜನತೆ ಉತ್ತರ ಕೊಡ್ತಾರೆ, ಸಮ್ಮಿಶ್ರ ಸರಕಾರದ ಅಭ್ಯರ್ಥಿ ಮಧು ಬಂಗಾರಪ್ಪರನ್ನು ಗೆಲ್ಲಿಸುತ್ತಾರೆ ಎಂದರು.
ಸಂಸತ್ ಸದಸ್ಯರಾಗಿ ಯಡಿಯೂರಪ್ಪ ಈ ಕ್ಷೇತ್ರಕ್ಕೆ ಏನಾದರೂ ದೊಡ್ಡ ಕೊಡುಗೆ ನೀಡಿದ್ದಾರಾ ಎಂದು ಜನರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ತನ್ನ ಐದು ವರ್ಷಗಳ ಶಾಸಕ ಅವಧಿಯಲ್ಲಿ ಗೋಪಾಲ ಪೂಜಾರಿ ಅವರು ರಾಜ್ಯ ಸರಕಾರ ದಿಂದ ಎರಡು ಸಾವಿರ ಕೋಟಿ ರೂ.ಗಳ ಅನುದಾನ ತಂದು ಕ್ಷೇತ್ರದ ಅಬಿವೃದ್ಧಿ ಮಾಡಿದ್ದರು. ಆದರೆ ಅವರಿಗೆ ಇತ್ತೀಚಿನ ವಿದಾನಸಭಾ ಚುನಾವಣೆಯಲ್ಲಿ ಆರ್ಶೀವದಿಸಲಿಲ್ಲ. ಈಗ ತಂದೆಯಂತೆಯೇ ಜಾತ್ಯತೀತ ಮನೋಧರ್ಮದ ಮಧು ಬಂಗಾರಪ್ಪರನ್ನು ಗೆಲ್ಲಿಸುವ ಮೂಲಕ ಇವರನ್ನು ಆಶೀರ್ವದಿಸಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಎಲ್ಲಾ ಜಾತಿಯ ಬಡವರಿಗೆ, ಎಲ್ಲಾವರ್ಗದ ಜನರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಆದರೆ ಎಂದೂ ಮೇಲ್ವರ್ಗವನ್ನು ಕಡೆಗಣಿಸಲಿಲ್ಲ. ರಾಜ್ಯದ 4 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಿ ಯಾರೂ ಸಹ ಯಾರು ಸಹ ಹಸಿವಿನಿಂದ ನರಳದಂತೆ ನೋಡಿಕೊಂಡೆ. ಇದನ್ನು ದೇಶದ ಬಿಜೆಪಿ ಆಡಳಿತದ ರಾಜ್ಯದಲ್ಲಿ ಮಾಡಿದ್ದನ್ನು ಕಂಡಿದ್ದೀರಾ ಎಂದವರು ಪ್ರಶ್ನಿಸಿದರು.
ಹಿಂದುತ್ವದಿಂದ ದೇಶದ ಜನಕ್ಕೆ ಹೊಟ್ಟೆ ತುಂಬಲ್ಲ. ಧರ್ಮದ ಕುರಿತಂತೆ ಜನರನ್ನು ಪ್ರಚೋದಿಸಿ ಬಿಜೆಪಿ ದಾರಿ ತಪ್ಪಿಸುತ್ತಿದೆ. ಇದರಿಂದ ಏನಾದರೂ ಹೊಟ್ಟೆ ತುಂಬುವುದೇ ಎಂದು ಕೇಳಿದ ಸಿದ್ಧರಾಮಯ್ಯ, ನರೇಂದ್ರ ಮೋದಿ ‘ಮನ್ ಕಿ ಬಾತ್’ ಮಾತನಾಡಿ ಏನಾದರೂ ಸಾಧಿಸಿದ್ದಾರಾ, ‘ಕಾಮ್ ಕಿ ಬಾತ್’ ಏನಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡಲು ನಾನೇನೂ ನೋಟು ಪ್ರಿಂಟ್ ಮಾಡುತಿಲ್ಲ ಎಂದು ಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದ ಯಡಿಯೂರಪ್ಪ, ರೈತರ ಸಾಲ ಮನ್ನಾವನ್ನು ಕೇಂದ್ರ ಸರಕಾರ ಮಾಡಬೇಕು ಅಂದು ಹೇಳಿದ್ದರು. ಈ ನಾಲ್ಕು ವರ್ಷಗಳಲ್ಲಿ ಅವರೆಂದಾದರೂ ರೈತರ ಸಾಲ ಮನ್ನಾ ಮಾಡಿ ಎಂದು ನರೇಂದ್ರ ಮೋದಿಯವರನ್ನು ಕೇಳಿದ್ದನ್ನು ನೀವು ನೋಡಿದ್ದೀರಾ ಎಂದು ಲೇವಡಿ ಮಾಡಿದರು.
ಬಿಎಸ್ವೈ ಹಸಿರು ಶಾಲುಹಾಕೊಂಡು ಡೋಂಗಿತನ ಮಾಡುತ್ತಿದ್ದಾರೆ. ಬಿಎಸ್ವೈ ಹಸಿರು ಶಾಲಿನ ರಾಜಕಾರಣ ಮಾಡ್ತಾರೆ. ನರೇಂದ್ರ ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ. ಬರ ಮತ್ತು ಮಹದಾಯಿ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ನಿಯೋಗವನ್ನು ಕೊಂಡೊಯ್ದೆಗ ಅದರಲ್ಲಿ ಬಿಜೆಪಿ ಈ ಗಿರಾಕಿಗಳು ಮೋದಿ ಮುಂದೆ ಬಾಯಿಯೇ ತೆರೆದಿಲ್ಲ ಎಂದು ಲೇವಡಿ ಮಾಡಿದರು.
ಬಿಎಸ್ವೈ ಹಸಿರು ಶಾಲುಹಾಕೊಂಡು ಡೋಂಗಿತನ ಮಾಡುತ್ತಿದ್ದಾರೆ. ಬಿಎಸ್ವೈ ಹಸಿರು ಶಾಲಿನ ರಾಜಕಾರಣ ಮಾಡ್ತಾರೆ. ನರೇಂದ್ರ ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ. ಬರ ಮತ್ತು ಮಹದಾಯಿ ವಿಷಯದಲ್ಲಿ ಕೇಂದ್ರ ಸರಕಾರಕ್ಕೆ ನಿಯೋಗವನ್ನು ಕೊಂಡೊಯ್ದೆಗ ಅದರಲ್ಲಿ ಬಿಜೆಪಿ ಈ ಗಿರಾಕಿಗಳು ಮೋದಿ ಮುಂದೆ ಬಾಯಿಯೇ ತೆರೆದಿಲ್ಲ ಎಂದು ಲೇವಡಿ ಮಾಡಿದರು. ದೇಶದ ಕಾರ್ಪೋರೇಟ್ ಕಂಪೆನಿಗಳ 2,38,000 ಕೋಟಿ ರೂ. ಸಾಲ ಮನ್ನಾ ಮಾಡಿರುವ ಈ ಮೋದಿ, ದೇಶದ ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ. ಆದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿ ಸಂಸ್ಥೆಗಳಲ್ಲಿದ್ದ ರೈತರ 8,165 ಕೋಟಿ ರೂ. ಹಾಗೂ ಈಗ ಕುಮಾರಸ್ವಾಮಿ ಅವರು 48,000 ಕೋಟಿ ರೂ.ಸಾಲ ಮನ್ನಾ ಮಾಡಿದ್ದಾರೆ ಎಂದರು.
ಈ ದೇಶದಲ್ಲಿ ಬಿಜೆಪಿಯಲ್ಲಿರುವವರು ಮಾತ್ರ ಹಿಂದುಗಳಾ? ಎಂದು ಖಾರವಾಗಿ ಪ್ರಶ್ನಿಸಿದ ಸಿದ್ಧರಾಮಯ್ಯ, ನಾನು ಹಿಂದೂ ಅಲ್ಲವಾ. ಮಧು, ಜಯಮಾಲಾ, ಪ್ರಮೋದ್, ಸೊರಕೆ ಎಲ್ಲರೂ ಹಿಂದು ಅಲ್ಲವಾ. ಓಟು ಕೇಳುವಾಗ ನೀವು ಮುಂದೆ, ಆಮೇಲೆ ಹಿಂದುಗಳೆಲ್ಲಾ ಹಿಂದೆ, ಈ ನಾಯಕರು ಮುಂದೆ. ಹಿಂದುತ್ವದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನಮಗೆ ಮತ ನೀಡಲಿಲ್ಲ. ಈ ಮರು ಚುನಾವಣೆಯಲ್ಲಾದರೂ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ, ಇದರಿಂದ ಬಂಗಾರಪ್ಪರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದ ಗೋಪಾಲ ಪೂಜಾರಿ ಮನವಿ ಮಾಡಿದರೂ ಮತದಾರರು ಮನಸ್ಸು ಮಾಡಲಿಲ್ಲ. ಈಗ ಮಧುವನ್ನು ಗೆಲ್ಲಿಸಿ ಪೂಜಾರಿ ಅವರಿಗೆ ಬಡ್ಡಿ ಸಮೇತ ಕೂಲಿ ಕೊಡಿ ಎಂದು ಪ್ರಾರ್ಥಿಸಿದರು.
ಅಭ್ಯರ್ಥಿ ಮಧು ಬಂಗಾರಪ್ಪ, ಸಚಿವ ಜಮೀರ್ ಅಹ್ಮದ್, ಮಾಜಿ ಶಾಸಕ ಗೋಪಾಲ ಪೂಜಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ, ಕಾಂಗ್ರೆಸ್ ನಾಯಕರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಗೋಪಾಲ ಭಂಡಾರಿ, ಪ್ರತಾಪ್ಚಂದ್ರ ಶೆಟ್ಟಿ, ಜಿ.ಎ.ಬಾವಾ, ಎಂ.ಎ.ಗಫೂರ್, ಜನಾರ್ದನ ತೋನ್ಸೆ, ವಾಸುದೇವ ಯಡಿಯಾಳ್, ವೆರೋನಿಕಾ ಕರ್ನೇಲಿಯೊ, ಎಸ್.ಸಂಜೀವ ಶೆಟ್ಟಿ, ಜೆಡಿಎಸ್ ನಾಯಕರಾದ ಎಚ್.ಎಲ್.ಬೋಜೇಗೌಡ, ಯೋಗೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮೋದಿ ಯಾರ ಚೌಕಿದಾರ?
ಪ್ರಧಾನಿಯಾದಾಗ ತಾನು ದೇಶದ ಪ್ರಧಾನಿಯಲ್ಲ, ನಿಮ್ಮ ಚೌಕಿದಾರ. ನಾನು ತಿನ್ನಲ್ಲ.. ಯಾರಿಗೂ ತಿನ್ನಲು ಸಹ ಬಿಡುವುದಿಲ್ಲ ಎಂದು ಹೇಳಿದ ನರೇಂದ್ರ ಮೋದಿ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾರ ಚೌಕಿದಾರ ಆಗಿ ಕೆಲಸ ಮಾಡಿದ್ದಾರೆ ಎಂಬುದು ದೇಶದ ಜನತೆಗೆ ಅರ್ಥವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವಿಜಯ ಮಲ್ಯ 9000 ಕೋಟಿ ರೂ. ಹಣ ತಿಂದು, ಅರುಣ್ ಜೇಟ್ಲಿಗೆ ಹೇಳಿ ದೇಶ ಬಿಟ್ಟು ಪಲಾಯನ ಮಾಡುವಾಗ ಈ ಚೌಕಿದಾರ ಮಲಗಿದ್ದ, ನಿರೇನ್ ಮೋದಿ 14,000 ಕೋಟಿ ರೂ. ಪಂಗನಾಮ ಹಾಕಿ ದೇಶ ಬಿಡುವಾಗ ಚೌಕಿದಾರ ಕಣ್ಣು ಮುಚ್ಚಿಕೊಂಡಿದ್ದ. ಈಗ ರಫೇಲ್ ಹಗರಣದಲ್ಲಿ 40,000 ಕೋಟಿ ರೂ.ಗೋಲ್ಮಾಲ್ ಆಗಿದ್ದು ಇದನ್ನು ತಿಂದವರು ಯಾರು ಎಂಬುದು ಚೌಕಿದಾರನಿಗೆ ಗೊತ್ತಿದೆ. ಈ ಮೂಲಕ ಚೌಕಿದಾರನ ನಿಜ ಬಣ್ಣ ಬಯಲಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಇನ್ನು ಈ ಯಡಿಯೂರಪ್ಪ ಏನು ಹಾನೆಸ್ಟಾ? ಇವರೂ ಜೈಲಿಗೆ ಹೋಗಿ ಬಂದ ಗಿರಾಕಿ ಅಲ್ಲವಾ....ಎಂದರು.