ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ನಲ್ಲಿ ಗುರುವಾರ ಪಾದಾಚಾರಿ ಮೇಲ್ಸೇತುವೆ ಕುಸಿದ ಪರಿಣಾಮ ಐವರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 29 ಮಂದಿ ಗಾಯಗೊಂಡಿದ್ದಾರೆ. ಪಾದಚಾರಿ ಮೇಲ್ಸೇತುವೆಯಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅದು ಗುರುವಾರ ಸಂಜೆ ಕುಸಿಯಿತು. ಪೊಲೀಸ್ ಅಧಿಕಾರಿಗಳು ಹಾಗೂ ರಕ್ಷಣಾ ಕಾರ್ಯಕರ್ತರು ತತ್ಕ್ಷಣ ಸ್ಥಳಕ್ಕೆ ಧಾವಿಸಿದರು.
ಗಾಯಗೊಂಡವರನ್ನು ಸಮೀಪದ ಜಿಟಿ ಆಸ್ಪೆತ್ರೆಗೆ ಕೊಂಡೊಯ್ಯಲಾಯಿತು. ಗಂಭೀರ ಗಾಯಗೊಂಡ ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘‘ಫ್ಲಾಟ್ಫಾರ್ಮ್ 1 ನಾರ್ಥ್ ಎಂಡ್ ಅನ್ನು ಬಿಟಿ ಲೇನ್ ಸಮೀಪದ ಟೈಮ್ಸ್ ಆಫ್ ಇಂಡಿಯಾ ಕಟ್ಟಡಕ್ಕೆ ಜೋಡಿಸುವ ಪಾದಚಾರಿ ಮೇಲ್ಸೇತುವೆ ಸಂಜೆ 7.46ಕ್ಕೆ ಕುಸಿದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ.’’ ಎಂದು ಮುಂಬೈ ಪೊಲೀಸ್ನ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ.