ಭಟ್ಕಳ: ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ದೇವರಾಜ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಹಳೆ ಬಸ್ ನಿಲ್ದಾಣದ ಮೀನು ಮಾರುಕಟ್ಟೆಯಲ್ಲಿನ ಮಹಿಳಾ ಮೀನು ವ್ಯಾಪಾರಸ್ಥರನ್ನು ಸಂತೆ ಮಾರುಕಟ್ಟೆಯಲ್ಲಿನ ನೂತನ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಿ ವ್ಯಾಪಾರವನ್ನು ಮುಂದುವರೆಸುವಂತೆ ಮನವೊಲಿಸಿದರು.
ಈಗಾಗಲೇ ಕೆಲ ದಿನದ ಹಿಂದೆ ಹಳೆ ಮೀನು ಮಾರುಕಟ್ಟೆಯ ಗುತ್ತಿಗೆದಾರ ಖಾಝಾ ಎನ್ನುವವರಿಗೆ ಪುರಸಭೆಯಿಂದ ಇಲ್ಲಿನ ಮೀನು ಮಾರುಕಟ್ಟೆ ಮಹಿಳಾ ಮೀನು ವ್ಯಾಪಾರಸ್ಥರನ್ನು ಸಂತೆ ಮಾರುಕಟ್ಟೆಗೆ ಸ್ಥಳಾಂತರಿಸಿ ಹಣ ವಸೂಲಿ ಮಾಡುವಂತೆ ಮೌಖಿಕವಾಗಿ ಹಾಗೂ ಲಿಖಿತ ರೂಪದ ನೋಟಿಸ ಸಹ ನೀಡಲಾಗಿತ್ತು. ಆದರೆ ಈ ಬಗ್ಗೆ ಗುತ್ತಿಗೆದಾರ ಮಹಿಳಾ ಮೀನು ವ್ಯಾಪಾರಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲವಾದ ಹಿನ್ನೆಲೆ ಕುದ್ದು ಮೀನು ಮಾರುಕಟ್ಟೆಗೆ ತೆರಳಿ ಮಹಿಳಾ ಮೀನು ವ್ಯಾಪಾರಸ್ಥರಿಗೆ ಸ್ಥಳಾಂತರದ ಕುರಿತು ಮಾಹಿತಿ ನೀಡಿದರು. ಇದಕ್ಕೆ ಮಹಿಳಾ ಮೀನು ವ್ಯಾಪಾರಿಗಳು ಈಗಿನ ಮೀನು ಮಾರುಕಟ್ಟೆ ಸ್ಥಳದಲ್ಲಿ 15 ವರ್ಷದಿಂದ ವ್ಯಾಪಾರವನ್ನು ಮಾಡುತ್ತಾ ಬಂದಿದ್ದು ಹೊಸ ಮೀನು ಮಾರುಕಟ್ಟೆಗೆ ತೆರಳಿದರೆ ನಮ್ಮ ವ್ಯಾಪಾರಕ್ಕೆ ಸಮಸ್ಯೆಯಾಗಲಿದೆ ಎಂಬ ಮನವಿಯನ್ನು ಮಾಡಿದರು. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಮೀನು ಮಾರುಕಟ್ಟೆಗೆ ಮಹಿಳಾ ವ್ಯಾಪಾರಸ್ಥರನ್ನು ಸ್ಥಳಾಂತರಿಸುವಂತೆ ಸರಕಾರದಿಂದ ಸೂಚನೆಯಿದ್ದು, ಇದಕ್ಕೆ ಸಹಕರಿಸಬೇಕೆಂದು ತಿಳಿ ಹೇಳಿದ ಅವರು ಹಾಗೂ ನಿರ್ಮಾಣಗೊಂಡ ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು ಒಂದಾನು ವೇಳೆ ಸಮಸ್ಯೆಯಿದ್ದಲ್ಲಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ದೇವರಾಜ ‘ಮಹಿಳಾ ಮೀನು ವ್ಯಾಪಾರಿಗಳನ್ನು ಹಳೆ ಮೀನು ಮಾರುಕಟ್ಟೆಯಿಂದ ಒಕ್ಕಲೆಬ್ಬಿಸುವ ಉದ್ದೇಶ ನಮ್ಮದಲ್ಲವಾಗಿದೆ. ಈ ಹಿಂದೆ ಪುರಸಭೆಯೇ ಹಳೆ ಬಸ್ ನಿಲ್ದಾಣದ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಕ್ಕೆ ಅವಕಾಶ ನೀಡಿದಂತೆ ಈಗ ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ವ್ಯಾಪಾರಕ್ಕೆ ಅವಕಾಶ ನೀಡಿದೆ. ಇದರ ಸದುಪಯೋಗ ಪಡೆದುಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದ್ದೇವ ಹಾಗೂ ರಸ್ತೆ ಪಕ್ಕದಲ್ಲಿ ಬುಟ್ಟಿನಲ್ಲಿ ಮೀನು ಮಾರಾಟ ಮಾಡುವ ಮಹಿಳಾ ವ್ಯಾಪಾರಸ್ಥರನ್ನು ಸಹ ಮನವೊಲಿಸಿ ಒಂದೇ ಸೂರಿನಡಿ ಎಲ್ಲರು ವ್ಯಾಪಾರ ಮಾಡುವಂತೆ ಪ್ರಯತ್ನ ಪುರಸಭೆಯಿಂದ ಆಗಲಿದೆ’ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭೆ ಇಂಜಿನಿಯರ, ಸಿಬ್ಬಂದಿಗಳು ಹಾಗೂ ಮೀನು ಮಾರುಕಟ್ಟೆ ಗುತ್ತಿಗೆದಾರ ಖಾಜಾ ಮುಂತಾದವರು ಇದ್ದರು.