ಮೊಬೈಲ್ ಕಳೆದರೂ ಪತ್ತೆ ಹಚ್ಚುವ ಈ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೀನುಗಾರರನ್ನು ಪತ್ತೆ ಮಾಡದಿರುವುದಕ್ಕೆ ಮೀನುಗಾರ ಮುಖಂಡ ವಸಂತ ಖಾರ್ವಿ ಆಕ್ರೋಶ
ಮಿನುಗಾರಿಕಾ ಸಚಿವರೆದುರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೀನುಗಾರರು
ಭಟ್ಕಳ: ಮೀನುಗಾರರು ನಾಪತ್ತೆಯಾಗಿ ಈಗಾಗಲೆ 24 ದಿನಗಳು ಕಳೆದು ಹೋಗಿದೆ. ಸರ್ಕಾರವಾಗಲಿ, ಜನಪ್ರತಿನಿಧಿ, ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಒಂದು ಮೊಬೈಲ್ ಕಳೆದು ಹೋದರು ಹುಡುಕುವ ತಂತ್ರಜ್ಞಾನವಿರುವ ದೇಶದಲ್ಲಿ ಮೀನುಗಾರರು ನಾಪತ್ತೆಯಾದರೆ ಹುಡುಕುವ ಸೌಲಭ್ಯವಿಲ್ಲ ಎಂದು ಮೀನುಗಾರರ ಮುಖಂಡ ವಸಂತ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಬುಧವಾರ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ನಡೆದ ಮೀನುಗಾರರ ಮುಖಂಡರ ಸಭೆಯಲ್ಲಿ ಮೀನುಗಾರಿಕಾ ಸಚಿವ ನಾಡಗೌಡರ ಎದುರೇ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಸಚಿವರು ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಸೀಬರ್ಡನ ನೌಕಾನೆಲೆಯ ಸಹಾಯವನ್ನು ಯಾಚಿಸಿದೆ. ಹೆಲಿಕಾಪ್ಟರ್, ಕಾವಲು ಪಡೆ ಸೇರಿದಂತೆ ಯಾವದನ್ನು ಬಳಸಬಹುದೊ ಎಲ್ಲವನ್ನು ಮಾಡಿದೆ. ಮತ್ತೇನು ಕ್ರಮ ಕೈಗೊಳ್ಳಬೇಕು ಎಂದು ನೀವೆ ಹೇಳಿ ಸರ್ಕಾರ ಅದನ್ನು ಮಾಡಲು ಸಿದ್ಧವಿದೆ. ಬಡತನದಲ್ಲಿರುವ ಮೀನುಗಾರರ ಕುಟುಂಬಕ್ಕೆ 1 ಲಕ್ಷ ರೂ ಸಹಾಯಧನ ನೀಡುವಂತೆ ಮುಖ್ಯಮಂತ್ರಿ ಅವರ ಹತ್ತಿರ ಮಾತನಾಡಿದ್ದು ಗುರುವಾರ ನಡೆಯುವ ಕ್ಯಾಬಿನೆಟ್ ಸಬೆಯಲ್ಲಿ ಅದನ್ನು ಅಂತಿಮಗೊಳಿಸಲಾಗುವದು. ಈ ಕುರಿತು ಪ್ರಸ್ತಾವನೆ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಮೀನುಗಾರರು ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿರುವಂತೆ ಸರ್ಕಾರ ಅವರ ಪತ್ತೆಗೆ ಕ್ರಮ ಕೈಗೊಂಡಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಇಲ್ಲಿಯವರೆಗೂ ಅವರ ಹುಡುಕಾಟದಲ್ಲೆ ನಿರತವಾಗಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ ನಾಡಗೌಡ ವಿವರಿಸಿದರು.
ತಾಲೂಕಿನ ನಾಪತ್ತೆಯಾದ ಮೀನುಗಾರರ ಮನೆಗೆ ಬೇಟಿ ನೀಡಿ, ನಂತರ ಪ್ರವಾಸಿ ಮಂದಿರದಲ್ಲಿ ಮೀನುಗಾರ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮೊದಲು ಅಳಿವೆಕೋಡಿಯ ಮೀನುಗಾರ ಹರೀಶ ಮೊಗೇರ, ನಂತರ ಬೆಳ್ನಿಯ ಮೀನುಗಾರ ರಮೇಶ ಮೊಗೇರ ಮನೆಗಳಿಗೆ ಬೇಟಿ ನೀಡಿ ಸಾಂತ್ವಾನ ಹೇಳಿದರು.
ಜಿಲ್ಲಾಧಿಕಾರಿ ಎಸ್ ನಕುಲ್ ಮಾತನಾಡಿ ಜಿಲ್ಲಾಡಳಿತಕ್ಕೆ ನಾಪತ್ತೆಯಾದ ಮಾಹಿತಿ ದೊರೆತ ತಕ್ಷಣ ಗೋವಾ ಮತ್ತು ಮಹಾರಾಷ್ಟ್ರದ ಕಲೆಕ್ಟರ್ಗಳ ಜೊತೆ ಮಾತನಾಡಿ ಪತ್ತೆ ಮಾಡುವ ಕಾರ್ಯ ನಡೆಸಲಾಗಿದೆ. ಅಲ್ಲಿಯ ನಲೆಗಳ ಬಳಿಯೂ ತೆರಳಿ ಪರೀಶೀಲನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು.