ನಾಪತ್ತೆಯಾದಮೀನುಗಾರರ ಪತ್ತೆಗೆ ಇಸ್ರೋ ನೆರವು –ಮೀನುಗಾರಿಕಾ ಸಚಿವ ನಾಡಗೌಡ
• ನಾಪತ್ತೆಯಾಗಿರುವ ಮೀನುಗಾರ ಕುಟುಂಬಕ್ಕೆ ಸಾಂತ್ವಾನ ನೀಡಿದ ಸಚಿವ ನಾಡಗೌಡ
ಭಟ್ಕಳ: ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿ.15 ರಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನಲ್ಲಿದ್ದ ಮೀನುಗಾರರ ಮನೆಗೆ ಮೀನುಗಾರಿಕಾ ಸಚಿವ ವೆಂಕಟ್ರಾವ್ ನಾಡಗೌಡ ಭೇಟಿ ನೀಡಿ ನಾಪತ್ತೆಯಾದವರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಉಡುಪಿ ಜಿಲ್ಲೆಯ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕಾ ಬೋಟಿನಿಂದ ಮೀನುಗಾರಿಕಗೆ ತೆರಳಿದ್ದ ಭಟ್ಕಳದ ಹರೀಶ ಮೋಗೇರ, ರಮೇಶ ಮೊಗೇರ ಅವರ ಮನೆಗೆ ಮೀನುಗಾರಿಕಾ ಸಚಿವ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ ರಾಜ್ಯ ಸರಕಾರದ ಗಮನಕ್ಕೆ ಬಂದ ತಕ್ಷಣ ಸ್ಥಳೀಯ ಪೊಲೀಸರು, ಕೋಸ್ಟ್ ಗಾರ್ಡ ಸಹಾಯದಿಂದಲ್ಲದೇ ಮಹಾರಾಷ್ಟ್ರ, ಗುಜರಾತ್ ಪೊಲೀಸರಿಂದಲೂ ಹುಡುಕಿಸಲಾಗುತ್ತಿದೆ. ಇವುಗಳಲ್ಲಿ ಸಾಧ್ಯವಾಗದೇ ಇದ್ದಾಗ ಇಸ್ರೋ ನೆರವು ಪಡೆದು ಸೆಟಲೈಟ್ ಮೂಲಕ ಹುಡುಕುವ ಕುರಿತು ಪತ್ರ ಬರೆಯಲಾಗಿದೆ. ಮಹಾರಾಷ್ಟ್ರ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ. ನಮ್ಮ ಪೊಲೀಸರು ಅಲ್ಲಿಗೆ ಹೋಗಿ ಅವರೊಂದಿಗೆ ಸಹಕರಿಸುತ್ತಿದ್ದಾರೆ. ಸರಕಾರದಿಂದ ಕೂಡಾ ಸಹಕರಿಸುವಂತೆ ಪತ್ರ ಬರೆಯಲಾಗಿದೆ. ಕೇಂದ್ರ ಸರಕಾರದ ಸಹಾಯ ಕೂಡಾ ನಾವು ಪಡೆದುಕೊಂಡಿದ್ದೇವೆ. ಮೀನುಗಾರರು ಹೇಗೆ ಸಲಹೆ ಕೊಡುತ್ತಾರೆ ಆ ರೀತಿಯ ಪ್ರಯತ್ನ ಕೂಡಾ ಸಾಗಿದೆ. ಆದರೂ ಕೂಡಾ ನಮ್ಮಿಂದ ಹುಡುಕಲು ಇನ್ನೂ ಸಾಧ್ಯವಾಗದೇ ಇರುವುದಕ್ಕೆ ಬೇಸರ ಇದೆ. ಈಗಾಗಲೇ ಮುಖ್ಯ ಮಂತ್ರಿಗಳಲ್ಲಿ ಮಾತನಾಡಿದ್ದು ಅವರ ಪತ್ತೆಯಾಗುವ ತನಕ ಕುಟುಂಬಕ್ಕೆ ಆಸರೆಯಾಗಲಿ ಎಂದು ಒಂದ ಲಕ್ಷ ರೂಪಾಯಿ ಪರಿಹಾರ ನೀಡಲು ಕೋರಿಕೊಂಡಿದ್ದೇನೆ.
ಬೋಟಿನಲ್ಲಿ ಹೋದವರು ಸುರಕ್ಷಿತವಾಗಿ ದೊರೆಯುತ್ತಾರೆನ್ನುವ ವಿಶ್ವಾಸ ನಮಗಿದೆ. ದೇವರ ಮೇಲೆ ನಂಬಿಕೆಯಿಡಿ ಅವರು ಸಿಗುತ್ತಾರೆ ಎನ್ನುವ ಕುರಿತು. ಅವರು ನೀರಿನಲ್ಲಿ ಮುಳುಗಿದ್ದರೆ ಇಷ್ಟರೊಳಗಾಗಿ ಬೋಟಿನ ಅವಶೇಷಗಳು ದೊರೆಯಲೇ ಬೇಕಿತ್ತು. ಅದರಲ್ಲಿರುವ ಸಾಮಗ್ರಿಗಳಾದರೂ ತೇಲಿ ಬರಬೇಕಿತ್ತು. ಇಲ್ಲ ಅಂದಾಗ ಅವರೆಲ್ಲೋ ಸುರಕ್ಷಿತವಾಗಿದ್ದಾರೆ ಎನ್ನುವ ಭಾವನೆ ನಮ್ಮದು ಎಂದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ನಾಯ್ಕ ಸಚಿವರೊಂದಿಗಿದ್ದರು.
ಗೋವಾ ಸರಕಾರದ ನಿಮಯಗಳಿಗೆ ನಾವು ಬದ್ಧರಿರಬೇಕಾಗುತ್ತದೆ ಎಂದು ಮೀನುಗಾರಿಕಾ ಸಚಿವ ವೆಂಕಟ್ರಾವ್ ನಾಡಗೌಡ ಹೇಳಿಕೆ.
ಭಟ್ಕಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಾಡಗೌಡ.
ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಲು ಬಂದಿದ್ದ ಮೀನುಗಾರಿಕಾ ಸಚಿವ ವೆಂಕಟ್ರಾವ್ ನಾಡಗೌಡ ಅವರು ಗೋವಾ ರಾಜ್ಯ ಕರ್ನಾಟಕದ ಮೀನನ್ನು ತಡೆ ಹಿಡಿದಿರುವುದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ನಮ್ಮ ಮನವಿಯ ಮೇರೆಗೆ ರಾಜ್ಯ ಸರಕಾರದ ಪ್ರಮಾಣ ಪತ್ರ ತರುವಂತೆ ಕೋರಿದ್ದಾರೆ. ನಮ್ಮಿಂದ ಪಾಮೋಲಿನ ಉಪಯೋಗ ಮಾಡಿಲ್ಲ ಎನ್ನುವ ಪ್ರಮಾಣ ಪತ್ರ ಪಡೆದ ಲಾರಿಗಳಿಗೆ ಯಾವುದೇ ತೊಂದರೆ ಕೊಡೋದಿಲ್ಲ. ನಮ್ಮಿಂದ ಸರ್ಟಿಫಿಕೇಟ್ ಕೊಡಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅದನ್ನು ಪಡೆದುಕೊಂಡು ಹೋದರೆ ಯಾವುದೇ ತೊಂದರೆ ಇಲ್ಲ.