ಭಟ್ಕಳ: ಹಿಂದೂ ಯುವತಿಯರೊಂದಿಗೆ ಮುಸ್ಲಿಮ್ ಯುವಕರು ಮಾತನಾಡಿದನ್ನೆ ಅಪರಾಧವೆನ್ನುವಂತೆ ಬಿಂಬಿಸಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮುಸ್ಲಿಮ್ ಯುವಕರೊಂದಿಗೆ ತಗಾದೆ ತೆಗೆದು ಹೊಡೆದಾಟ ನಡೆಸಿದ್ದರ ಪರಿಣಾಮ ಹೊಡೆತದಿಂದ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಗುರುವಾರ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ತಿಮಕ್ಕಿ ಎಂಬಲ್ಲಿ ಜರಗಿದ್ದು ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರು ದಾಖಲಾಗಿವೆ.
ಗಾಯಗೊಂಡ ವ್ಯಕ್ತಿಯನ್ನು ಶ್ರೀರಾಮಸೇನೆ ಉತ್ತರಕನ್ನಡ ಜಿಲ್ಲಾಧ್ಯಕ್ಷ ಜಯಂತ್ ನಾಯ್ಕ ಎಂದು ಗುರುತಿಸಲಾಗಿದ್ದು ಭಟ್ಕಳ ಸಿಪಿಐ ಗಣೇಶ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಂಜಾಗೃತಾ ಕ್ರಮವನ್ನು ಜರಗಿಸಿದ್ದಾರೆ.
ಘಟನೆ ಹಿನ್ನೆಲೆ: ಮುರುಡೇಶ್ವರದ ಬಸ್ತಿಮಕ್ಕಿ ಎಂಬಲ್ಲಿ ಅಂಗಡಿಯೊಂದರ ಬಳಿ ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಮಾತನಾಡಿಸಿದ್ದು ಅದನ್ನೇ ಹಿಂದೂ ಯುವತಿಯರನ್ನು ಮುಸ್ಲಿಮ್ ಯುವಕರು ಚುಡಾಯಿಸಿದ್ದಾರೆ ಎಂದು ಭಾವಿಸಿ ಅವರೊಂದಿಗೆ ತಗಾದೆ ತೆಗೆದಿದ್ದಾರೆ. ಯುವಕರು ಯುವತಿಯರನ್ನು ಚುಡಾಯಿಸಿದ ಬಗ್ಗೆ ಅಲ್ಲಗೆಳೆದಿದ್ದು ಯುವತಿಯರೂ ಕೂಡ ತಮಗೆ ಯಾರೂ ಕೂಡ ಚುಡಾಯಿಸಿಲ್ಲ ಎಂದು ಸಾಕ್ಷಿಯನ್ನು ನುಡಿದಿದ್ದಾರೆ. ಅದಾಗ್ಯೂ ಶ್ರೀರಾಮಸೇನೆಯ ಜಯಂತ್ ನಾಯ್ಕ ಮುಸ್ಲಿಮ್ ಯುವಕರೊಂದಿಗೆ ಹೊಡೆದಾಟಕ್ಕೆ ಇಳಿದಿದ್ದು ಈ ಹೊಡೆದಾಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸ ಪಡೆಯುತ್ತಿದ್ದಾರೆ.
ಸುಳ್ಳಾರೋಪ: ಯುವತಿಯರ ವಿಷಯಕ್ಕೆ ಸಂಬಂಧಿಸಿದ ಹೊಡೆದಾಟವನ್ನು ಜಯಂತ್ ನಾಯ್ಕ ಕಡೆಯರು ಅಲ್ಲಗೆಳೆದಿದ್ದು ಇದು ಸುಳ್ಳಾರೋಪವಾಗಿದೆ. ಮಾವಳ್ಳಿ ಗ್ರಾಮ ಪಂಚಾಯತ್ ವಿಷಯದಲ್ಲಿ ಸದಸ್ಯರಾಗಿರುವ ಜಯಂತ್ ನಾಯ್ಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರಸ್ಪರ ದೂರು ದಾಖಲು: ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭಟ್ಕಳ ಸಿಪಿಐ ಗಣೇಶ ಅವರು ಈ ಕುರಿತಂತೆ ಎರಡು ಪ್ರತ್ಯೇಕ ದೂರು ದಾಖಲಾಗಿದ್ದು ಸಮಾನ್ ಶೇಖ್ ಹಾಗೂ ಮಲಿಕ್ ರೈಹಾನ್ ಎಂಬುವವರು ಜಯಂತ್ ನಾಯ್ಕರ ಮೇಲೆ ಹಾಗೂ ಜಯಂತ್ ನಾಯ್ಕ ಸಮಾನ್ ಶೇಖ್ ಹಾಗೂ ಮಲಿಕ್ ರೈಹಾನ್ ರ ಮೇಲೆ ದೂರು ನೀಡಿದ್ದು ಮುರುಢೇಶ್ವರ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.