ಭಟ್ಕಳ: ಕಳೆದ ಮೂರು ವರ್ಷಗಳಿಂದ ಭಟ್ಕಳ ತಾಲೂಕಿನಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಶಿರಸಿಗೆ ವರ್ಗಾವಣೆಗೊಂಡಿರುವ ವೆಂಕಟೇಶ್ ಪಟಗಾರರನ್ನು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮುಖ್ಯಾಧ್ಯಾಪಕರ ಸಂಘ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ದೈಹಿಕ ಶಿಕ್ಷಕರ ಸಂಘಗಳ ಜಂಟಿ ಆಶ್ರಯದಲ್ಲಿ ನ್ಯೂಇಂಗ್ಲಿಷ್ ಶಾಲಾ ಸಭಾಂಗಣದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಪಟಗಾರ, ಶಿಕ್ಷಕರು ಆತ್ಮಗೌರವವನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಎಲ್ಲವನ್ನೂ ತ್ಯಾಗ ಮಾಡುವ ಮನೋಭಾವ ಹೊಂದಿರುವವರು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಸಮಾಜದಲ್ಲಿ ಗೌರವಯುತ ವ್ಯಕ್ತಿಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ. ತಪ್ಪುಗಳು ಎಲ್ಲರಿಂದಲೂ ನಡೆಯುತ್ತವೆ. ತನ್ನ ತಪ್ಪುಗಳನ್ನು ಅರಿತು ಅದನ್ನು ಸರಿಪಡಿಸಿಕೊಂಡಾತನೇ ಸಮಾಜದಲ್ಲಿಗೌರವ ಸನ್ಮಾನಗಳಿಗೆ ಪಾತ್ರನಾಗಬಲ್ಲ ಎಂದರು. ಭಟ್ಕಳ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿಯವರಿಗೆ ಸ್ವಾಗತ ಕೋರಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಸಂಯೋಜಕಿ ಯಲ್ಲಮ್ಮ ಮರಿಸ್ವಾಮಿ, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂದೇಶ ಹುರುಳಿಕಾಶಿ, ಸಂಘಟನಾ ಕಾರ್ಯದರ್ಶಿ ಎಂ.ಆರ್.ಮಾನ್ವಿ, ಚಿದಾನಂದ ಪಟಗಾರ, ಗಣಪಿ ಭಟ್, ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಎಂ.ಡಿ.ರಫೀಖ್, ಉಮೇಶ್ಕೆರೆಕಟ್ಟೆ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ್ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಗೀತಾ ಶಿರೂರ್ ವಂದಿಸಿದರು. ಮಂಜುಳು ಶಿರೂರ್ಕರ್ ಹಾಗೂ ಪ್ರತಿಭಾ ಕರ್ಕಿಕರ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನ್ಯೂಇಂಗ್ಲಿಷ್ ಶಾಲೆಯ ಮುಖ್ಯಾಧ್ಯಾಪಕ ಎಂ.ಕೆ.ನಾಯ್ಕ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶ್ರೀಧರ್ ಮೊಗೇರ್, ಕೆ.ಬಿ.ಮಡಿವಾಳ, ರವಿಕಿರಣ ಚೌಕಿಮನೆ, ಪಿ.ಟಿ.ಚೌಹಾಣ್, ಶಬ್ಬಿರ್ ದಫೆದಾರ್ ಮತ್ತಿತರರು ಉಪಸ್ಥಿತರಿದ್ದರು.