ಭಟ್ಕಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಗೆಲುವಿನ ಅದೃಷ್ಟ ಇರಲಿಲ್ಲ. ಸೋಲಿಗೆ ಯಾರನ್ನೂ ದೂಷಿಸದೇ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪ್ರಯತ್ನ ಮಾಡೋಣ ಎಂದು ಮಾಜಿ ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ.
ಅವರು ಶನಿವಾರ ಸಂಜೆ ಮುರುಡೇಶ್ವರದಲ್ಲಿರುವ ತಮ್ಮ ಸ್ವಗೃಹದಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಹಾಗೂ ಬೂತ್ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಸೋಲಿನಿಂದ ಬೇಸರವಾಗುವುದು ಸಹಜವಾಗಿದೆ. ರಾಜಕೀಯದಲ್ಲಿ ಜನರ ಅಭಿಪ್ರಾಯಕ್ಕೆ ನಾವೆಲ್ಲರೂ ತಲೆ ಬಾಗಲೇ ಬೇಕು. ಚುನಾವಣಾ ಸಮಯದಲ್ಲಿ ವಿರೋಧ ಪಕ್ಷದವರು ಸಾಮಾಜಿಕ ಜಾಲ ತಾಣದಲ್ಲಿ, ಅಲ್ಲಿ ಇಲ್ಲಿ ಏನೆಲ್ಲ ಸುಳ್ಳು ಸುದ್ದಿಯನ್ನು ಹಬ್ಬಸಿದರು ಎನ್ನುವುದು ನಿಮಗೇ ಗೊತ್ತಿದೆ. ಅವರು ಸುಳ್ಳು ಹೇಳಿ ಜನರನ್ನು ವಂಚಿಸಿದ್ದಾರೆ.
ಇದು ಹೆಚ್ಚು ದಿನ ನಡೆಯಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಜನರಿಗೆ ಸತ್ಯದ ಅರಿವಾಗಲಿದೆ. ಎಲ್ಲದಕ್ಕೂ ಅಂತ್ಯ ಎನ್ನುವುದು ಇದ್ದೇ ಇರುತ್ತದೆ. ಆದರೆ ನಾವು ಅದಕ್ಕಾಗಿ ಕಾಯಬೇಕು ಅಷ್ಟೇ. ಯಾವುದೇ ಕಾರಣಕ್ಕೂ ರಾಜಕೀಯದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ನಮ್ಮ ಸರಕಾರವೇ ಅಧಿಕಾರದಲ್ಲಿದ್ದು, ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಅವಕಾಶ ಇದೆ. ಭಟ್ಕಳದಲ್ಲಿನ ಸೋಲಿನ ಬಗ್ಗೆ ಕಾರ್ಯಕರ್ತರು ನಿರಾಶರಾಗಬಾರದು. ಪ್ರತಿ ಬೂತ್ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕ್ರೀಯರಾಗಬೇಕು. ಸಂಘಟನೆ ಬಲಗೊಂಡಲ್ಲಿ ಭವಿಷ್ಯದಲ್ಲಿ ಖಂಡಿತ ಒಳ್ಳೆಯದಾಗಲಿದೆ ಎಂದರು. ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳ ಬದಲಾವಣೆಗೂ ಕೆಲವರು ಆಗ್ರಹಿಸಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಜಿಪಂ ಸದಸ್ಯ ಆಲ್ಬರ್ಟ ಡಿಕೋಸ್ತಾ, ಜಿಪಂ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ, ತಾಪಂ ಉಪಾಧ್ಯಕ್ಷೆ ರಾಧಾ ಅಶೋಕ ವೈದ್ಯ, ಭಟ್ಕಳ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ನಾರಾಯಣ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.