ಲಂಡನ್: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕ್ ಮಾಡಲು ಸಾಧ್ಯ ಎಂದು ಅಮೆರಿಕ ಮೂಲದ ಸೈಬರ್ ತಜ್ಞ ಸಯೀದ್ ಶುಜಾ ವಾದಿಸಿದ್ದಾರೆ. ಭಾರತದಲ್ಲಿ ಬಳಸುತ್ತಿರುವ ಇವಿಎಂ ಡಿಸೈನ್ ಮಾಡಿರುವ ಈ ತಜ್ಞ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ ಎಂದಿದ್ದಾರೆ.
ಇವಿಎಂ ಹ್ಯಾಕ್ ಬಗ್ಗೆ ಇರುವ ಕಾರ್ಯಕ್ರಮವನ್ನು ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಯುರೋಪ್) ಆಯೋಜಿಸಿದ್ದು , ಹಿರಿಯ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇವಿಎಂ ಹ್ಯಾಕ್ ಬಗ್ಗೆ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರಿಗೆ ತಿಳಿದಿತ್ತು. ಹಾಗಾಗಿ 2014ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಸಯೀದ್ ಶುಜಾ ಹೇಳಿದ್ದಾರೆ.
ನಿರ್ದಿಷ್ಟ ಪಕ್ಷಕ್ಕೆ ಮತ ದಾಖಲಾಗುವಂತೆ ಇವಿಎಂನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ 2017ರಲ್ಲಿ ದೆಹಲಿ ವಿಧಾನಸೌಧದಲ್ಲಿ ಆಮ್ ಆದ್ಮಿ ಶಾಸಕ ಸೌರಭ್ ಭಾರದ್ವಾಜ್ ನೇರ ಪ್ರಾತ್ಯಕ್ಷಿಕೆ ನೀಡಿದ್ದರು.ಆದರೆ ಇವಿಎಂನ್ನು ಯಾವುದೇ ರೀತಿಯಲ್ಲಿ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಚುನಾವಣೆ ಆಯೋಗ, ಎಎಪಿ ವಾದವನ್ನು ತಳ್ಳಿ ಹಾಕಿತ್ತು.
ಲಂಡನ್ನಲ್ಲಿ ಇವಿಎಂ ಹ್ಯಾಕಥಾನ್: ತಜ್ಞರು ಹೇಳಿದ್ದೇನು?
* ಬ್ಲೂಟೂತ್ನಿಂದ ಇವಿಎಂ ಹ್ಯಾಕ್ ಮಾಡಬಹುದಾಗಿದೆ. ಇವಿಎಂ ಹ್ಯಾಕ್ ಮಾಡಬೇಕಾದರೆ ಗ್ರಾಫೈಟ್ ಹೊಂದಿರುವ ಟ್ರಾನ್ಸ್ಮಿಟರ್ ಬೇಕು. ಇಂಥಾ ಟ್ರಾನ್ಸ್ಮಿಟರ್ಗಳನ್ನು 2014 ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ್ದಾರೆ.
* ಇವಿಎಂ ಮಾಹಿತಿಗಳನ್ನು ಸ್ವಾಧೀನ ಮಾಡಲು ಕೆಲವರು ಯತ್ನಿಸಿದ್ದಾರೆ. ಇವಿಎಂ ವೈರ್ಲೆಸ್ ಸಂವಹನ ಮಾಡುವುದಿಲ್ಲ ಎಂದು ಚುನಾವಣಾ ಆಯುಕ್ತರು ಹೇಳಿದ್ದರು. ಆದಾಗ್ಯೂ, 7hz ಕಡಿಮೆ ಕಂಪನಾಂಕದ ಮಾಡ್ಯುಲೇಟರ್ ಬಳಸಿದರೆ ಇದು ಸಾಧ್ಯ. ಇದು ಮಿಲಿಟರಿ ಗ್ರೇಡ್ ಕಂಪನಾಂಕವಾಗಿದೆ.
* 2014ರಲ್ಲಿ ನಾನು ಬಿಜೆಪಿ ನೇತಾರರೊಬ್ಬರನ್ನು ಭೇಟಿಯಾಗಿದ್ದು ಅವರಿಗೆ ಈ ಬಗ್ಗೆ ಗೊತ್ತಿತ್ತು. ಆದರೆ ಅವರ ತಂಡದ ಸದಸ್ಯರೇ ಅವರನ್ನು ಹತ್ಯೆ ಮಾಡಿದರು. ಗೋಪಿನಾಥ್ ಮುಂಡೆ ಅವರಿಗೆ ಹ್ಯಾಕಿಂಗ್ ವಿಷಯ ಗೊತ್ತಿತ್ತು. ಸರ್ಕಾರದ ಮೋಸದಾಟವನ್ನು ಅವರು ಬಯಲು ಮಾಡಲು ಮುಂದಾಗಿದ್ದರು. ಹಾಗಾಗಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಶುಜಾ ಆರೋಪಿಸಿದ್ದಾರೆ.
2014 ಜೂನ್ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ ಮುಂಡೆ ಸಾವಿಗೀಡಾಗಿದ್ದರು.
* ದೆಹಲಿಯಲ್ಲಿ ನಾವು ಪ್ರಸಾರವನ್ನು ನಿಲ್ಲಿಸಿದ್ದರಿಂದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿತು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐಟಿ ಸೆಲ್ ಇವಿಎಂ ಹ್ಯಾಕ್ ಮಾಡಲು ಯತ್ನಿಸಿದ್ದಾಗ ನಾವು ಆ ಕಂಪನಾಂಕದ ಪ್ರಸಾರಕ್ಕೆ ತಡೆಯೊಡ್ಡಿದೆವು. ನಾವು ಎಎಪಿ ಪರವಾಗಿ ಮತ ದಾಖಲಾಗುವಂತೆ ಕಂಪನಾಂಕ ಪ್ರಸಾರವನ್ನ ಬದಲಿಸಿದೆವು. ನಿಜವಾದ ಫಲಿತಾಂಶವು 2009ರ ಫಲಿತಾಂಶವನ್ನೇ ಹೋಲುತ್ತಿತ್ತು.
* ಕಡಿಮೆ ಕಂಪನಾಂಕದ ಪ್ರಸಾರಣವನ್ನು ನಾವು ತಡೆಯಲು ಪ್ರಯತ್ನಿಸಿದ್ದೆವು. ನಾವು ಹ್ಯಾಕ್ ಮಾಡಲು ಸಾಧ್ಯವಾಗದೇ ಇರುವ ಇವಿಎಂನ್ನು ನೀವು ಬಳಸಿ ನೋಡೋಣ ಎಂದು ಬಿಜೆಪಿ ಐಟಿ ಸೆಲ್ ಸವಾಲೆಸೆದಿತ್ತು.
* 2014ರ ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ನಡೆದಿತ್ತು ಎಂದು ಸಯೀದ್ ಶುಜಾ ಆರೋಪಿಸಿದ್ದಾರೆ.
ಸೈಯದ್ ಶುಜಾ ನಡೆಸಿದ ವಿಡಿಯೊ ಸಂವಾದದಲ್ಲಿ ಹೇಳಿದ್ದೇನು ಎಂಬುದರ ಬಗ್ಗೆ ದಿ ಕ್ವಿಂಟ್ ವರದಿ
*ಕಡಿಮೆ ಕಂಪನಾಂಕದ ಸಿಗ್ನಲ್ ಬಳಸಿ ಇವಿಎಂ ಹ್ಯಾಕ್ ಮಾಡುವುದಕ್ಕೆ ಟೆಲಿಕಾಂ ದಿಗ್ಗಜ ರಿಲಾಯನ್ಸ್ ಕಮ್ಯುನಿಕೇಷನ್ಸ್ ಬಿಜೆಪಿಗೆ ಸಹಾಯ ಮಾಡಿತ್ತು.
*ಈ ಬಗ್ಗೆ ಲೇಖನ ಬರೆಯಲು ಪತ್ರಕರ್ತೆ ಗೌರಿ ಲಂಕೇಶ್ ಒಪ್ಪಿದ್ದರು. ಅವರ ಹತ್ಯೆಯಾಯಿತು.
* ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಎಎಪಿ ಕೂಡಾ ಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂದು ತಿಳಿಯಲು ತನ್ನನ್ನು ಸಮೀಪಿಸಿತ್ತು.
ಚುನಾವಣೆ ಆಯೋಗದಿಂದ ನಿರಾಕರಣೆ
ನವದೆಹಲಿ: ಭಾರತದಲ್ಲಿ ಬಳಸುತ್ತಿರುವ ಎಲೆಕ್ಟ್ರಾನಿಕ್ಸ್ ಮತದಾನ ಯಂತ್ರ (ಇವಿಎಂ) ವನ್ನು ತಾನು ಹ್ಯಾಕ್ ಮಾಡಬಲ್ಲೆ ಎಂದ ಲಂಡನ್ ಮೂಲದ ಹ್ಯಾಕರ್ ಪ್ರತಿಪಾದನೆಯನ್ನು ಚುನಾವಣಾ ಆಯೋಗ ನಿರಾಕರಿಸಿದೆ.
ಪ್ರತಿಪಕ್ಷಗಳು ಹೊಸದಾಗಿ ಈ ಪ್ರಶ್ನೆಗಳನ್ನು ಎತ್ತಿರುವ ಸಂದರ್ಭದಲ್ಲಿ ಸೋಮವಾರ ಸಂಜೆ ನಡೆದ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಹ್ಯಾಕರ್ ಸೈಯದ್ ಶುಜಾ ಈ ಹೇಳಿಕೆ ನೀಡಿದ್ದಾರೆ. ಇವಿಎಂ ಯಾವುದೇ ಸಂಪರ್ಕ ಇಲ್ಲದ ಯಂತ್ರ. ಯಾವುದೇ ನಿಸ್ತಂತು ಸಂವಹನದ ಮೂಲಕ ಯಾವುದೇ ದತ್ತಾಂಶವನ್ನು ರವಾನಿಸುವ ಅಥವಾ ಸ್ವೀಕರಿಸುವ ಸಾಮರ್ಥ್ಯ ಈ ಯಂತ್ರಕ್ಕಿಲ್ಲ ಎಂದು ಚುನಾವಣಾ ಆಯೋಗದ ಉನ್ನತ ತಾಂತ್ರಿಕ ತಜ್ಞ ಡಾ. ರಜತ್ ಮೂನಾ ಸ್ಪಷ್ಟಪಡಿಸಿದ್ದಾರೆ. ಆದುದರಿಂದಲೇ ಇದು ‘ತಿರುಚಲು ಸಾಧ್ಯವಾಗದ’ ಯಂತ್ರ ಎಂದು ಭಿಲಾಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಹಾಗೂ ಇವಿಎಂಗಳ ಕುರಿತ ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರಾಗಿರುವ ಡಾ. ಮೂನಾ ಹೇಳಿದ್ದಾರೆ.
ಇದನ್ನು ‘‘ಉದ್ದೇಶಿತ ಕೆಸರೆರೆಚಾಟ’’ ಎಂದು ಚುನಾವಣಾ ಆಯೋಗ ಕರೆದಿದೆ. ಈ ವಿಷಯದ ಬಗ್ಗೆ ಯಾವ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯ ಹಾಗೂ ತೆಗೆದುಕೊಳ್ಳಬೇಕು ಎಂಬುದನ್ನು ಪರಿಶೀಲಿಸಲಿದ್ದೇವೆ ಎಂದು ಅದು ಹೇಳಿದೆ.