ಪ್ರತಿಕೂಲವಾಗುತ್ತಿರುವ ನ್ಯಾಯ

Source: sonews | By Staff Correspondent | Published on 1st May 2018, 6:33 PM | National News | Special Report | Don't Miss |

 

ಆಳುವ ಸರ್ಕಾರದ ಬಹುಸಂಖ್ಯಾತ ದುರಭಿಮಾನಿ ರಾಜಕೀಯವು ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಮೂಲೆಗುಂಪು ಮಾಡುತ್ತಿದೆ.

 

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಪ್ರಮುಖ ಭಯೋತ್ಪಾದನಾ ವಿರೋಧಿ ಪ್ರಕರಣಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವಂಥ  ಒಂದು ನಿರ್ದಿಷ್ಟ ಮಾದರಿಯು ಕಂಡುಬರುತ್ತಿದೆ. ಮೆಕ್ಕ-ಮಸೀದಿ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ  ಅಸೀಮಾನಂದ, ನರೋದ ಪಾಟಿಯಾ ಪ್ರಕರಣದ ಮಾಯಾ ಕೊಡ್ನಾನಿ ಮತ್ತು ಸೊಹ್ರಾಬುದ್ದೀನ್ ಹಾಗೂ ತುಳಸಿ ಪ್ರಜಾಪತಿ ಪ್ರಕರಣದಲ್ಲಿನ ಇತರ ಆರೋಪಿಗಳು ನ್ಯಾಯ ಪ್ರಕ್ರಿಯೆಯ ದಿಕ್ಕನ್ನೇ ಬದಲಿಸಿದ ಪ್ರಶ್ನಾರ್ಹ ಕಾನೂನು ನಡಾವಳಿಗಳ ಫಲಾನುಭವಿಗಳಾಗಿದ್ದಾರೆ. ಬೆಳವಣಿಗೆಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ಮೂಲೆಗುಂಪು ಮಾಡಬೇಕೆಂಬ ಸರ್ಕಾರದ ಕುತಂತ್ರೀ ಕಾರ್ಯಸೂಚಿಗಳನ್ನು ಎತ್ತಿ ತೋರಿಸುತ್ತದೆ.

ಮೆಕ್ಕಾ ಮಸೀದಿಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ರೂವಾರಿಯೆಂಬ ಆಪಾದನೆ ಹೊತ್ತಿದ್ದ ಅಸೀಮಾನಂದ ಮತ್ತು ಇತರ ನಾಲ್ವರನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎನ್ಐಎ) ವಿಶೇಷ ನ್ಯಾಯಾಲಯವು ೨೦೧೮ರ ಏಪ್ರಿಲ್ ೧೬ರಂದು  ಖುಲಾಸೆ ಮಾಡಿತು. ಆರೋಪಗಳನ್ನು ಸಾಬೀತು ಮಾಡುವಂಥ ಯಾವುದೇ ನಿರ್ಣಾಯಕ ಸಾಕ್ಷಿಗಳನ್ನು ಒದಗಿಸಲು ಪ್ರಾಸಿಕ್ಯೂಷನ್ (ಸರ್ಕಾರಿ ವಕೀಲರು) ವಿಫಲವಾದದ್ದೇ ಆರೋಪಿಗಳು ಖುಲಾಸೆಯಾಗಲು ಪ್ರಮುಖ ಕಾರಣವೆಂದು ನ್ಯಾಯಾಲಯವು ಹೇಳಿತು. ೨೦೦೭ರ ಮೇ ತಿಂಗಳಲ್ಲಿ ಹೈದರಾಬಾದಿನ ಚಾರ್ಮಿನಾರ್ ಬಳಿ ಇರುವ  ೧೭ನೇ ಶತಮಾನದ ಮೆಕ್ಕಾ ಮಸೀದಿ ಬಳಿ ಬಲವಾದ ಬಾಂಬ್ ಒಂದು ಸ್ಪೋಟಗೊಂಡು ಶುಕ್ರವಾರದ ನಮಾಜಿಗೆ ಬಂದಿದ್ದ ಒಂಭತ್ತು ಜನರನ್ನು ಬಲಿತೆಗೆದುಕೊಂಡು ೫೮ ಜನರನ್ನು ತೀವ್ರವಾಗಿ ಗಾಯಗೊಳಿಸಿತು. ಇದಕ್ಕೆ ಸಂಬಂಧಪಟ್ಟಂತೆ  ಪೊಲೀಸರು ಬೇಕಾಬಿಟ್ಟಿಯಾಗಿ ಹಲವಾರು ಅಮಾಯಕ ಮುಸ್ಲಿಂ ಯುವಕರನ್ನು ಭಯೋತ್ಪಾದನಾ  ಕಾಯಿದೆಯಡಿ ಬಂಧಿಸಿದರು. ಮತ್ತು ಅವರಿಗೆ ವಿಧವಿಧವಾದ ಚಿತ್ರಹಿಂಸೆಗಳನ್ನು ಕೊಟ್ಟು ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್ ಹಸ್ತವಿದೆಯೆಂದು ಒಪ್ಪಿಕೊಳ್ಳುವಂತೆ ಮಾಡಲು ಯತ್ನಿಸಿದರು. ಆದರೆ ಸಿಬಿಐ ತನಿಖೆಯು ಸ್ಫೋಟದ ಯೋಜನೆ ಮಾಡಿದ್ದು ಹಿಂದೂತ್ವವಾದಿ ಭಯೋತ್ಪಾದಕರೆಂಬುದನ್ನು ಬಯಲುಗೊಳಿಸುವ ಮೂಲಕ ಪ್ರಾಸಿಕ್ಯುಷನ್ನಿನ  ಕಟ್ಟುಕಥೆಗಳನ್ನು ಬಯಲುಗೊಳಿಸಿತು.

ಪ್ರಕರಣದ ಪ್ರಮುಖ ಆರೋಪಿಯಾದ ಅಸೀಮಾನಂದ ೨೦೧೦ರಲ್ಲಿ ನ್ಯಾಯಾಧೀಶರ ಮುಂದೆ ಸ್ವಯಂ ತಪ್ಪೊಪ್ಪಿಗೆ ಹೇಳಿಕೆಯೊಂದನ್ನು ನೀಡಿದನಲ್ಲದೆ ನಂತರಕ್ಯಾರಾವಾನ್ಪತ್ರಿಕೆಗೆ ಒಂದು ಸುದೀರ್ಘವಾದ ಸಂದರ್ಶನವನ್ನು ಕೊಟ್ಟು ಸ್ಪೋಟದ ಹಿಂದಿನ ಷಡ್ಯಂತ್ರಗಳನ್ನು ಬಯಲುಮಾಡಿದ್ದ. ಆತನ ಸ್ವಯಂ ತಪ್ಪೊಪ್ಪಿಗೆ ಹೇಳಿಕೆಯ ಪ್ರಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಉನ್ನತ ನಾಯಕರು ಮತ್ತು ಇತರ ಹಿಂದೂತ್ವವಾದಿ ಸಂಘಟನೆಗಳು ತಮ್ಮ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ದೇಶವ್ಯಾಪಿ ಹರಡಿಕೊಂಡಿರುವ ತಮ್ಮ ಸಂಘಟನಾ ಜಾಲದ ಮೂಲಕ ಮುಸ್ಲಿಮರ ಮೇಲೆ ಭಯೋತ್ಪಾದನಾ ದಾಳಿಯನ್ನು ನಡೆಸುವ  ಯೋಜನೆಯನ್ನು ಮಾಡಿದ್ದರು. ಅದರ ಭಾಗವಾಗಿಯೇ ಸ್ಪೋಟವನ್ನೂ ನಡೆಸಲಾಗಿತ್ತು. ಅಂತಿಮವಾಗಿ ೨೦೧೧ರಲ್ಲಿ ಪ್ರಕರಣವನ್ನು ಎನ್ಐಎ ಗೆ ಹಸ್ತಾಂತರಿಸಲಾಯಿತು. ಮತ್ತು ವೇಳೆಗಾಗಲೇ ಬಲವಾದ ಸಾಕ್ಷಿಗಳನ್ನು ಸಂಗ್ರಹಿಸಲಾಗಿತ್ತಾದ್ದರಿಂದ ಎನ್ಐಎ ಯು ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಾತರಿ ಮಾಡುತ್ತದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎನ್ಐಎ ಯು ತಪ್ಪಿತಸ್ಥರು ತಮ್ಮ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂದಕ್ಕೆ ಪಡೆಯಲು ದಾರಿ ಮಾಡಿಕೊಡುತ್ತಿದೆ ಹಾಗೂ ಸಾಕ್ಷಿಗಳು ಉಲ್ಟಾ ಹೊಡೆಯುವಂತೆಯೂ ಮಾಡುತ್ತಿದೆ. ಅರ್ಥದಲ್ಲಿ ಎನ್ಐಎ ನ್ಯಾಯಾಲಯದ ತೀರ್ಪು ನಿರೀಕ್ಷಿತವೇ ಆಗಿದ್ದರೂ ಆಘಾತಕಾರಿಯಾಗಿದೆ

೨೦೦೨ರಲ್ಲಿ ಗುಜರಾತಿನ ನರೋದಾ ಪಾಟಿಯಾದಲ್ಲಿ ನಡೆದ ನರಹತ್ಯೆಯ ಪ್ರಕರಣದಲ್ಲಿ ಬಿಜೆಪಿ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಮಾಯಾ ಕೊಡ್ನಾನಿ ಮತ್ತು ಇತರ ೧೭ ಜನರನ್ನು ಗುಜರಾತಿನ ಹೈಕೋರ್ಟು  ಖುಲಾಸೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇದು ಪ್ರಾಸಿಕ್ಯೂಷನ್ನಿಗೆ ಆದ ಮತ್ತೊಂದು ಆಘಾತ. ಅದಕ್ಕೆ  ಕಾರಣ ಆರೋಪಗಳನ್ನು ಸಂದೇಹಕ್ಕಾಸ್ಪದವಿಲ್ಲದೆ ರುಜುವಾತು ಮಾಡುವಲ್ಲಿ ಪ್ರಾಸಿಕ್ಯೂಷನ್ನು ವಿಫಲವಾದದ್ದು. ಆದರಿಂದ ಆರೋಪಿಗಳಿಗೆ ಅನುಮಾನದ ಲಾಭವನ್ನು ನೀಡಿ ಖುಲಾಸೆ ಮಾಡಲಾಯಿತು. ಗುಜಾರಾತ್ ಹತ್ಯಾಕಾಂಡಲ್ಲಿ ಅತಿಹೆಚ್ಚು ಮುಸ್ಲಿಮರ ಹತ್ಯೆಗೆ ಕಾರಣವಾದ ಘಟನೆಗೆ ಪ್ರಚೋದನೆ ನೀಡಿ ೯೭ ಮುಸ್ಲಿಮರ ಮಾರಣಹೋಮಕ್ಕೆ ಕಾರಣವಾದ ಆರೋಪದ ಮೇಲೆ ಮಾಯಾ ಕೊಡ್ನಾನಿಯವರನ್ನು ೨೦೦೯ರಲ್ಲಿ ಬಂಧಿಸಲಾಗಿತ್ತು. ನಂತರದಲ್ಲಿ ೨೮ ವರ್ಷಗಳ ಕಾಲ ಜೈಲುಶಿಕ್ಷೆಯನ್ನು ಕೆಳಗಿನ ಕೋರ್ಟು ನೀಡಿತ್ತು. ೨೦೧೨ರಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ಕೋರ್ಟು ಮಾಯಾ ಕೋದ್ನಾನಿಯವರನ್ನು ನರೋದಾ ಗಲಭೆಗಳ ಸೂತ್ರಧಾರಿಯೆಂದು ಕರೆದಿದ್ದಲ್ಲದೆ ಪ್ರದೇಶದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಾ ಲೂಟಿ ಹೊಡೆಯುತ್ತಿದ್ದ ಗುಂಪುಗಳಿಗೆ ಸ್ಥಳದಲ್ಲಿ ಹಾಜರಿದ್ದು ಖುದ್ದು ಪ್ರಚೋದನೆ ನೀಡುತ್ತಿದ್ದನ್ನು ಸಹ ದಾಖಲಿಸಿತ್ತು. ಆಗ ಆಕೆ ಗುಜರಾತ್ ವಿಧಾನಸಭೆಯ ಸದಸ್ಯರಷ್ಟೇ ಆಗಿದ್ದರು. ನಂತರ ಆಕೆಗೆ ಬಡ್ತಿ ಕೊಟ್ಟು ೨೦೦೭ರಲ್ಲಿ ಮಂತ್ರಿಯನ್ನಾಗಿ ಮಾಡಲಾಯಿತು. ಆದರೆ ಆಕೆ ಅಪರಾಧ ನಡೆದ ಸ್ಥಳದಲ್ಲಿ ಖುದ್ದು ಹಾಜರಿದ್ದರೆಂದು ಸಾಬೀತು ಮಾಡುವಷ್ಟು ಸಾಕ್ಷಿಗಳು ದೊರೆಯದ ಕಾರಣವನ್ನು ಮುಂದೆ ಮಾಡಿ ಗುಜರಾತಿನ ಹೈಕೋರ್ಟು ಆಕೆಯನ್ನು ೨೦೧೮ರ ಏಪ್ರಿಲ್ ೨೦ರಂದು ಖುಲಾಸೆ ಮಾಡಿತು. ಇದು ಹಾಲಿ ಸರ್ಕಾರವು ನ್ಯಾಯಾಂಗದ ಮೇಲೆ ಹೇಗೆ ಅನಪೇಕ್ಷಿತ ಪ್ರಭಾವವನ್ನು ಹೊಂದಿದ್ದು ನ್ಯಾಯಪ್ರಕ್ರಿಯೆಯನ್ನು  ತನ್ನ ಅಪರಾಧೀ ಕೃತ್ಯಗಳಿಗೆ  ಪೂರಕವಾಗಿ ಬಗ್ಗಿಸುತ್ತಿದೆ ಎಂಬುದನ್ನೂ ಸಹ ಸಾಬೀತು ಮಾಡುತ್ತದೆ.

ನ್ಯಾಯಾಲಯಗಳ ತೀರ್ಪುಗಳು ಹೊರಬರುತ್ತಿರುವ ಸಂದರ್ಭದಲ್ಲೇ ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಪೊಳ್ಳು ಎನ್ಕೌಂಟರ್ ಪ್ರಕರಣಗಳಲ್ಲೂ ಇಬ್ಬರು ಸಾಕ್ಷಿಗಳು ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆಂಬ ವರ್ತಮಾನ ಬಂದಿದೆ. ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀ ಹಾಗೂ ಅವರ ಸಹಾಯಕ ಪ್ರಜಾಪತಿಯವರುಗಳು ೨೦೦೫ರ ನವಂಬರ್ನಲ್ಲಿ ಹೈದರಾಬಾದಿನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಪ್ರಯಾಣ ಮಾಡುತ್ತಿದ್ದರು. ಆಗ ಅವರನ್ನು ಗುಜರಾತ್ ಪೊಲೀಸಿನ ಭಯೋತ್ಪಾದನಾ ವಿರೋಧಿ ದಳದವರು ಅಪಹರಿಸಿದರು. ೨೦೦೫ರ ನವಂಬರ್ನಲ್ಲೇ ಸುಳ್ಳು ಎನ್ಕೌಂಟರ್ ಎಂಬ ಆರೋಪವಿರುವ ಘಟನೆಯಲ್ಲಿ ಸೊಹ್ರಾಬುದ್ದೀನನನ್ನು ಕೊಲ್ಲಲಾಯಿತು. ನಂತರ ಆತನ ಪತ್ನಿಯ ಮೇಲೆ ಅತ್ಯಾಚಾರ  ಮಾಡಿ ಕೊಂದುಹಾಕಲಾಯಿತೆಂಬ ಆರೋಪವೂ ಇದೆ. ಒಂದು ವರ್ಷದ ನಂತರ ಪ್ರಜಾಪತಿಗೂ ಇದೇ ಗತಿಯಾಯಿತು. ನಿರೀಕ್ಷಿತವಾಗಿಯೇ ಸಾಕ್ಷಿಗಳು ಹಿಂದೆ ತಾವುಗಳು ಸಿಬಿಐಗೆ ಕೊಟ್ಟ ಹೇಳಿಕೆಗಳಿಂದ ಹಿಂದೆ ಸರಿದರು. ಈವರೆಗೆ ಪ್ರಕರಣದಲ್ಲಿ ೫೨ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ. ನ್ಯಾಯಾಲಯವು ಈವರೆಗೆ ೭೬ ಸಾಕ್ಷಿಗಳ ವಿಚಾರಣೆ ನಡೆಸಿದೆ.

ಎಲ್ಲಾ ಪ್ರಕರಣಗಳನ್ನು ಒಂದಾಗಿ ಬಂಧಿಸಿಡುವ ಸೂತ್ರ ಯಾವುದು?

ಮೊದಲನೆಯದಾಗಿ ನ್ಯಾಯಾಂಗ ವ್ಯವಸ್ಥೆಯು ನ್ಯಾಯವನ್ನು ಒದಗಿಸುವಲ್ಲಿ ಅಸಮರ್ಥವಾಗಿದೆ ಎಂಬುದನ್ನು ಇದು ಸಾಬೀತು ಮಾಡುತ್ತದೆ. ಮೂರೂ ಪ್ರಕರಣಗಳ ಬೆಳವಣಿಗೆಗಳಿಂದ ಅನ್ಯಾಯಕ್ಕೆ ಗುರಿಯಾದವರು ಮತ್ತು ಅವರ ಕುಟುಂಬಗಳು ನ್ಯಾಯದಿಂದ ವಂಚಿತರಾಗಿದ್ದಾರೆ. ಅಪರಾಧವನ್ನು ಎಸಗಿದವರು ನ್ಯಾಯಾಲಯದ ತೀರ್ಮಾನಗಳನ್ನು ತಮ್ಮ ಪರವಾಗಿ ಬರುವಂತೆ ಮಾಡಿಕೊಳ್ಳಲು ಯಶಸ್ವಿಯಾಗಿರುವುದು ಅವರಲ್ಲಿ ಭ್ರಮನಿರಸನ ಉಂಟು ಮಾಡಿದ್ದರೆ ಅದಕ್ಕೆ ಸಾಕಷ್ಟು ಕಾರಣಗಳಿವೆ.

ಎರಡನೆಯದಾಗಿ ಅಪರಾಧ ತನಿಖಾ ವ್ಯವಸ್ಥೆಯು ಪ್ರಬಲ ಅಪರಾಧಿಗಳ ವಿರುದ್ಧ ನಿಲ್ಲಲಾಗದಷ್ಟು ಅಸಹಾಯಕವಾಗಿದೆ. ಸ್ಥಳಿಯ ಪೊಲೀಸರಾಗಲೀ, ಸಿಬಿಐಯಾಗಲಿ ಅಥವಾ ಎನ್ಐಎ ಆಗಲೀ ಕಣ್ಣೆದುರಿರುವ ಸಾಕ್ಷಿಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ಅಂಥಾ ಸಾಕ್ಷಿಗಳನ್ನು ರಕ್ಷಿಸಿಕೊಂಡಿದ್ದರೆ ಯಾವುದೇ ಸಕ್ರಿಯ ಕಾನೂನು ವ್ಯವಸ್ಥೆಯಲ್ಲಿ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುತ್ತಿತ್ತು. ಸಾಕ್ಷಿಗಳು ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗುವುದು, ನ್ಯಾಯಾಧೀಶರ ವರ್ಗಾವಣೆಗಳು ಮತ್ತು ತನಿಖಾ ಸಂಸ್ಥೆಗಳನ್ನೇ ಬದಲಾಯಿಸುವಂಥ ಬೆಳವಣಿಗೆಗಳು ಅತ್ಯಂತ ಕಳವಳಕಾರಿಯಾಗಿವೆ. ಇದು ನಮ್ಮ ತನಿಖಾ ವ್ಯವಸ್ಥೆಯ ಬಗ್ಗೆ ಮತ್ತು ನ್ಯಾಯಾಂಗದ  ಬಗ್ಗೆ ಸಾರ್ವಜನಿಕರು  ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಮುಂದೆ ಇಂಥಾ ಬೆಳವಣಿಗೆಗಳು ನಮ್ಮ ಗಣರಾಜ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಲಿವೆ. ಸೊಹ್ರಾಬುದ್ದೀನ್ ಪ್ರಕರಣವನ್ನು ವಿಚಾರಣೆ ಮಾಡುತ್ತಿದ್ದ ನ್ಯಾಯಾಧೀಶ ಲೋಯಾ ಅವರ ಸಾವಿನ ಸುತ್ತಲಿನ ವಿವಾದವು ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ. ಅದರಲ್ಲೂ ಪ್ರಕರಣದಲ್ಲಿ ಆಗಿರಬಹುದಾದ ಕರ್ತವ್ಯಲೋಪಗಳನ್ನು  ಸಾಕ್ಷಿಗಳು ಹೆಚ್ಚೆಚ್ಚು ಬಯಲಿಗೆ ತರುತ್ತಿದ್ದರು ಅದನ್ನು ಗುರುತಿಸಲು ನಿರಾಕರಿಸುತ್ತಿರುವ ಸುಪ್ರೀಂ ಕೋರ್ಟು ಆತಂಕವನ್ನು ದುಪ್ಪಟ್ಟು ಮಾಡಿದೆ.

ಮೂರನೆಯದಾಗಿ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ನು ಮುಂದಿಟ್ಟಿರುವ ದೋಷಾರೋಪಗಳಲ್ಲಿ ಹಿಂದೂ ಬಲಪಂಥೀಯ ಸಂಘಟನೆಗಳಾದ ಅಭಿನವ್ ಭಾರತ್, ವಿಶ್ವ ಹಿಂದೂ ಪರಿಷತ್, ಭಜರಂಗ ದಳ್, ಆರೆಸ್ಸೆಸ್ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರು ಬಿಜೆಪಿ ಪಕ್ಷಗಳಿಗೆ ಸೇರಿದ ಸದಸ್ಯರು ಭಾಗವಹಿಸಿದ್ದರೆಂದು ನಮೂದಾಗಿದೆ. ಅವರಲ್ಲಿ ಅಸೀಮಾನಂದ, ಬಾಬು ಭಜರಂಗಿ, ಕೊಡ್ನಾನಿ ಮತ್ತು ಗುಜರಾತಿನ ಅಂದಿನ ಗೃಹಮಂತ್ರಿ ಅಮಿತ್ ಶಾ ಅವರದ್ದು ಪ್ರಮುಖವಾದ ಹೆಸರುಗಳು. ಇವರೆಲ್ಲರೂ ಜೈಲುವಾಸವನ್ನೂ ಸಹ ಅನುಭವಿಸಿ ಬಂದಿದ್ದಾರೆ.

ಕೇಂದ್ರದಲ್ಲಿ ಆಳ್ವಿಕೆಯಲ್ಲಿರುವ ಸರ್ಕಾರವು ನಿಸ್ಸಂಶಯವಾಗಿ ಮುಸ್ಲಿಂ ವಿರೋಧಿ ರಾಜಕಿಯದಲ್ಲಿ ತೊಡಗಿದೆ. ಭಾರತದ ಪ್ರಭುತ್ವವು ಬಹುಸಂಖ್ಯಾತ ದುರಭಿಮಾನಿ ಧೋರಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳನ್ನೂ ಮತ್ತು ಸಂಸ್ಥೆಗಳನ್ನು ಸರ್ವನಾಶಗೊಳಿಸುತ್ತಿದೆ. ಪ್ರಭುತ್ವವನ್ನು ಉಳ್ಳವರ ಕೈಯಲ್ಲಿರುವ ಸಾಧನವನ್ನಾಗಿ ಮಾಡುತ್ತಿದೆ.

ನಮ್ಮ ನಾಗರಿಕ ಸಮಾಜರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಸವಾಲನ್ನು ಸ್ವೀಕರಿಸಿ ಗಣರಾಜ್ಯವನ್ನು ಕಾಪಾಡಿಕೊಳ್ಳುವ ಯುದ್ಧದಲ್ಲಿ ಗೆಲ್ಲಬಲ್ಲವೇ? ಇದು ಕಾಲಘಟ್ಟದ ಜೀವನ್ಮರಣದ ಪ್ರಶ್ನೆಯಾಗಿದೆ.

ಕೃಪೆ: Economic and Political Weekly     ಅನು: ಶಿವಸುಂದರ್ 

                                 

 

 

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...