ನೋಟು ನಿಷೇಧ, ರಾಷ್ಟ್ರೀಯತೆ ಮತ್ತು ಪ್ರಜಾತಂತ್ರ

Source: sonews | By Staff Correspondent | Published on 13th November 2017, 11:39 PM | National News | Special Report | Don't Miss |

ನೋಟು ನಿಷೇಧವು ಒಂದು ಘೋರ ವೈಫಲ್ಯವಾಗಿದೆ; ದೇಶವನ್ನು ಆಳುವವರ್ಗಗಳಿಂದ ರಕ್ಷಿಸಬೇಕಿದೆ.

ಈ ಸಂಚಿಕೆಯು ಮುದ್ರಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷವು ನವಂಬರ್ ೮ನ್ನು ಕಪ್ಪು ಹಣ ವಿರೋಧಿ ದಿನವನಾಗಿ ಆಚರಿಸಿವೆ. ಈ ನವಂಬರ್ ೮ ಕ್ಕೆ ಒಂದು ವರ್ಷ ಮುಂಚೆ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಮತ್ತು ಕಪ್ಪುಹಣದ ಮಗ್ಗಲು ಮುರಿಯುವ ಸಲುವಾಗಿ ಮುಂದಿನ ನಾಲ್ಕು ಗಂಟೆಗಳಲ್ಲಿ   ೫೦೦ ಮತ್ತು ೧೦೦೦ ರೂ ನೋಟುಗಳ ಚಲಾವಣೆಯನ್ನು ನಿಷೇಧಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಭಾರತದ ರಿಸರ್ವ್ ಬ್ಯಾಂಕಾಗಲಿ, ಅಥವಾ ಒಟ್ಟಾರೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಾಗಲೀ, ಚಲಾವಣೆಯಲ್ಲಿದ್ದ ಶೇ.೮೬ರಷ್ಟು ನಗದನ್ನು ಹಿಂಪಡೆದುಕೊಂಡಾಗ ಉಂಟಾಗುವ ಸಂದರ್ಭವನ್ನು ನಿಭಾಯಿಸಲು ಯಾವುದೇ ತಯಾರಿಗಳನ್ನು ಮಾಡಿಕೊಳ್ಳದ sಸಂದರ್ಭದಲ್ಲಿ ಈ ನಿರ್ಧಾರವನ್ನು ಜಾರಿ ಮಾಡಲಾಯಿತು. ಪರಿಣಾಮವಾಗಿ ದೇಶದ ಅರ್ಥಿಕ ಬದುಕು ದಿಕ್ಕೆಟ್ಟಿತು. ತನ್ನ ಈ ನಿರ್ಧಾರದಿಂದ ಕೋಟ್ಯಾಂತರ ಜನತೆ ಸಂಕಷ್ಟಗಳಿಗೆ, ಅನಾನುಕೂಲತೆಗಳಿಗೆ, ಬಾಧೆಗಳಿಗೆ ಮತ್ತು ಅಪಮಾನಗಳಿಗೆ ಗುರಿಯಾಗಲಿದ್ದಾರೆಂದು ಮೋದಿಯವರಿಗೆ ತಿಳಿದಿತ್ತು; ಆದರೂ ಅವರು ಯಾವ ಬಗೆಯಲ್ಲೂ ವಿಚಲಿತರಾಗದೆ ಅಪಾರ ಧೃಢತೆಯನ್ನು ಮತ್ತು ನಿರ್ಲಿಪ್ತತೆಯನ್ನು ಪ್ರದರ್ಶಿಸಿದರು.

ಪ್ರಧಾನಿಗಳು ಯಾವುದೇ ತರ್ಕ ಅಥವಾ ವಿವೇಚನೆಯಿಲ್ಲzಂಥ ಕ್ರಮವನ್ನು ಜಾರಿಗೊಳಿಸುತ್ತಿದ್ದರು. ಆದರೂ ಅವರು ನೋಟು ನಿಷೇಧದ ಕ್ರಮದಿಂದ ಕಾಳಸಂತೆಕೋರರು ಕೂಡಿಟ್ಟಿರುವ ಎಲ್ಲಾ ಕಪ್ಪುಹಣವು ರದ್ದಿ ಕಾಗದದಂತಾಗುತ್ತದೆಂಬ ಬಗ್ಗೆ ಅಪಾರ ಆತ್ಮವಿಶ್ವಾಸದಿಂದಿರುವಂತೆ ಕಂಡುಬಂದಿದ್ದರು. ಆದರೆ ಈ ನೋಟುನಿಷೇಧವು ಮೋದಿಯವರು ಜನರ ಮೇಲೆ ಹರಿಬಿಟ್ಟ ಮತ್ತೊಂದು ಸೈತಾನಿ ಕ್ರಮವಾಗಿತ್ತು. ಏಕೆಂದರೆ ಕಪ್ಪುಹಣದ ವಹಿವಾಟು ನಡೆಸುವವರು ಕಳ್ಳದಾರಿಗಳನ್ನು ಹುಡುಕುವುದರಲ್ಲೂ ರುಸ್ತುಮರೆಂಬುದು ಮೋದಿಯವರಿಗೆ ತಿಳಿಯದ ಸಂಗತಿಯೇನಾಗಿರಲಿಲ್ಲ. ಆ ಕಪ್ಪುಹಣದ ಪಂಟರುಗಳು ಹಲವಾರು ಕಳ್ಳದಾರಿಗಳ ಮೂಲಕ ತಾವು ಗಳಿಸಿದ್ದ ಕಪ್ಪುಹಣವನ್ನು ಕಾನೂನುಬದ್ಧವಾಗಿಯೇ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದುಬಿಟ್ಟರು.

ಹಾಗಿದ್ದಲ್ಲಿ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರಗಳು ಈ ವರ್ಷ ನವಂಬರ್ ೮ ರಂದು ನಡೆಸಿದ ಸಂಭ್ರಮ ಮತ್ತು ಆಚರಣೆಗಳು ಯಾವುದಕ್ಕೆ? ನೋಟುನಿಷೇಧದ ನಂತರದ ದಿನಗಳಲ್ಲಿ ತಮ್ಮ ಬಳಿ ಇದ್ದ ನಿಷೇಧಗೊಂಡ ನೋಟುಗಳ ಬದಲಿಗೆ ಚಾಲ್ತಿಯಾಗುವ ಹೊಸ ನೋಟುಗಳನ್ನು ಪಡೆದುಕೊಳ್ಳಲು ಹೆಬ್ಬಾವಿನಂತಿದ್ದ ಸರದಿ ಸಾಲುಗಳಲ್ಲಿ ನಿಂತು ನೂರಕ್ಕೂ ಹೆಚ್ಚ ಜನ ಪ್ರಾಣ ತೆತ್ತಿದ್ದಕ್ಕಾಗಿಯೇ? ಖಾಯಿಲೆಯಿಂದ ನರಳುತ್ತಿದ್ದ ತಮ್ಮ ನೆಂಟರಿಷ್ಟರು ತುರ್ತಾಗಿ ವೈದ್ಯಕೀಯ ಸೌಕರ್ಯ ಸಿಗದೆ ಪ್ರಾಣ ಬಿಡಬಹುದಾದ ಸಾಧ್ಯತೆಯನ್ನು ನೆನಸಿಕೊಂಡು ಸಾವಿರಾರು ಜನ ಒಳಗೊಳಗೆ ಅನುಭವಿಸಿದ ವೇದನೆಗಳಿಗಾಗಿಯೇ? ಅನಿವಾರ್ಯವಾಗಿ ತಮ್ಮ ಕೂಲಿಯನ್ನು ನಿಷೇಧಿತ ನೋಟುಗಳಲ್ಲೇ ಪಡೆದುಕೊಂಡ ದಿನಗೂಲಿಗಳು ಅದನ್ನು ಹೊಸನೋಟುಗಳಿಗೆ ಪರಿವರ್ತಿಸಿಕೊಳ್ಳಲು ಹತ್ತಿರದ ಬ್ಯಾಂಕುಗಳ ಬಳಿ ದಿನಗಟ್ಟಲೇ ಸಾಲಿನಲ್ಲಿ ನಿಂತು ಅಥವಾ ಅದನ್ನು ಬದಲಿ ಮಾಡಿಕೊಡಲು ಹುಟ್ಟಿಕೊಂಡ ದಲ್ಲಾಳಿಗಳ ಬಳಿ ಹೆಚ್ಚೆಚ್ಚು ಕಮಿಷನ್ ತೆರಬೇಕಾದ ಸಂಕಷ್ಟಗಳಿಗಾಗಿಯೇ? ಅಥವಾ ಉತ್ತರ ಭಾರತದಲ್ಲಿ ನೋಟು ನಿಷೇಧದ ಕಾರಣದಿಂದ ತಮ್ಮ ಖಾರಿಫ್ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದ ರೈತಾಪಿ ರಬಿ ಬೆಳೆಯ ಬಿತ್ತನೆಯ ಸಂದರ್ಭದಲ್ಲೂ ಇನ್ನಿಲ್ಲದ ಕಷ್ಟನಷ್ಟಗಳನ್ನು ಎದುರಿಸಬೇಕಾಗಿದ್ದಕ್ಕಾಗಿಯೇ?

ನೋಟು ನಿಷೇಧದಿಂದ ಈ ದೇಶದ ಸಾಮಾನ್ಯ ಜನತೆ ಎದುರಿಸಬೇಕಾದ ಇಂಥಾ ಹಲವಾರು ಸಂಕಷ್ಟ ಮತ್ತು ಹತಾಷೆಗಳನ್ನು ಈ ಪತ್ರಿಕೆಯ ಮಾಜಿ ಸಹೋದ್ಯೋಗಿಗಳಾದ ಸಿ. ರಾಮಮನೋಹರ ರೆಡ್ಡಿಯವರು ತಮ್ಮ ಇತ್ತೀಚಿನ ಪುಸ್ತಕ ಡಿಮಾನಿಟೈಸೇಷನ್ ಅಂಡ್ ಬ್ಲಾಕ್‌ಮನಿ (ಓರಿಯಂಟ್ ಬ್ಲಾಕ್‌ಸ್ವಾನ್, ೨೦೧೭) (ನೋಟುನಿಷೇಧ ಮತ್ತು ಕಪ್ಪುಹಣ)ದಲ್ಲಿ ಅತ್ಯಂತ ಅಪರೂಪದ ಸೂಕ್ಷ್ಮತೆ ಮತ್ತು ಅನುಭೂತಿಗಳಿಂದ ವಿಷದವಾಗಿ ವಿವರಿಸಿದ್ದಾರೆ.

ಹಾಗಿದ್ದಲ್ಲಿ ಸರ್ಕಾರವು ಕೋಟ್ಯಾಂತರ ಜನತೆಯನ್ನು ಈ ಬಗೆಯ ಸಂಕಷ್ಟಗಳಿಗೆ ಮಾತ್ರವಲ್ಲದೆ ಸಾವುಗಳಿಗೂ ಗುರಿಮಾಡಿದ್ದಾದರೂ ಯಾತಕ್ಕೆ? ಕೇವಲ ಶೇ.೧ ರಷ್ಟು ನಿಷೇಧಿತ ನೋಟುಗಳು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿಲ್ಲ. ಹಾಗೆಂದ ಮಾತ್ರಕ್ಕೆ ಅವಷ್ಟೂ ಕಪ್ಪು ಹಣ ಎಂದೂ ಹೇಳಲಾಗುವುದಿಲ್ಲ. ನೋಟು ನಿಷೇಧದಿಂದ ಚಾಲ್ತಿಯಲ್ಲಿದೆಯೆಂದು ಲೆಕ್ಕಹಾಕಲಾಗಿದ್ದ  ನಕಲಿ ನೋಟುಗಳಲ್ಲಿ ಶೇ. ೫ರಷ್ಟನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿದೆ. ಸರ್ಕಾರದ ಅಧಿಕೃತ ಉದ್ದೇಶಗಳ ಹಿನ್ನೆಲೆಯಲ್ಲಿ ನೋಡುವುದಾದರೆ ನೋಟು ನಿಷೇಧವು ಸ್ಪಷ್ಟವಾಗಿ ಒಂದು ವಿಫಲವಾದ ಕ್ರಮವಾಗಿದೆ.

ಆದರೆ ಜನರು ಇಷ್ಟೊಂದು ಕಷ್ಟನಷ್ಟಗಳಿಗೆ ಗುರಿಯಾದರೂ ಅಂಥಾ ದೊಡ್ಡ ಸಂಘಟಿತ ಪ್ರತಿರೋಧಗಳು ಏಕೆ ವ್ಯಕ್ತವಾಗಲಿಲ್ಲ ಎಂಬ ಪ್ರಶ್ನೆ ಮಾತ್ರ ಹಾಗೆ ಉಳಿದಿದೆ.

ನೋಟುನಿಷೇಧದ ತರುವಾಯ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ದೊಡ್ಡ ಬಹುಮತದೊಂದಿಗೆ ಆರಿಸಿ ಬಂದಿತು. ಅದಕ್ಕೆ ಪ್ರಧಾನ ಕಾರಣ ಜನರಿಗೆ ಅಪಾರ ಸಂಕಷ್ಟವನ್ನು ತೊಂಡೊಡ್ಡಿದ್ದ ಈ ನೋಟುನಿಷೇಧದ ಭೂತವನ್ನು ಜನರ ಮೇಲೆ ಹರಿಬಿಟ್ಟು ತಾನು ಮಾತ್ರ ನಿರ್ಲಿಪ್ತನಾಗಿ ಉಳಿದ ನರೇಂದ್ರಮೋದಿಯವರ ಬ್ರಾಂಡು. ಅದಕ್ಕಿರಬಹುದಾದ ಒಂದು ಕಾರಣ ಈಗ ಹಿಂದುತ್ವದ ದಿರಿಸು ಧರಿಸಿರುವ ರಾಷ್ಟ್ರೀಯತೆಯೆಂಬ ಗಾಳಿಯ ರಭಸ. ಕಪ್ಪುಹಣದ ಕಬಂಧ ಬಾಹುಗಳಿಂದ ದೇಶವನ್ನು ಬಿಡುಗಡೆ ಮಾಡಲು ನರೇಂದ್ರ ಮೋದಿಯವರು ರಾಷ್ಟ್ರ ವಿರೋಧಿಗಳು ಮತ್ತು ಸಮಾಜಘಾತುಕ ಶಕ್ತಿಗಳ ಬಳಿ ಇರುವ ಕಪ್ಪುಹಣವನ್ನು ರದ್ದಿ ಕಾಗದವನ್ನಾಗಿ ಮಾಡಿಬಿಡುತ್ತಾರೆಂದು ದೇಶದ ಬಹುಪಾಲು ಜನತೆ ನಂಬಿಕೊಂಡಿದ್ದರು.

ವಾಸ್ತವವಾಗಿ ವಸಾಹತುಶಾಹಿ ಬ್ರಿಟಿಷರಿಂದ ಭಾರತದ ಪರಾವಲಂಬಿ ಮತ್ತು ಲಂಪಟ ಆಳುವವರ್ಗಗಳಿಗೆ ಅಧಿಕಾರ ಹಸ್ತಾಂತರವಾಗಿದೆಯೇ ವಿನಃ ವ್ಯವಸ್ಥೆಯಲ್ಲಿ ಯಾವುದೇ ಮೂಲಭೂತ ಬದಲಾವಣೆಗಳು ಬಂದಿಲ್ಲವೆಂಬುದನ್ನು ಇನ್ನೂ ಜನರ ಅರಿವಿಗೆ ಬಂದಿಲ್ಲ. ಹೀಗಾಗಿ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆಯುವ ಹೋರಾಟವು ಆಳುವವರ್ಗಗಳ ವಿರುದ್ಧ ಒಂದು ಕ್ರಾಂತಿಕಾರಿ ಹೋರಾಟವನ್ನು ನಡೆಸುವುದರ ಜೊತೆಜೊತೆಗೆ ಈ ವ್ಯವಸ್ಥೆಯೊಳಗಿನ ನಿರ್ದಿಷ್ಟ ಶಕ್ತಿಶಾಲಿ ಪಟ್ಟಭದ್ರ ಹಿತಾಸಕ್ತಿ ಗುಂಪುಗಳ ಪರವಾಗಿ ದಲ್ಲಾಳಿತನ ನಡೆಸುವ ಲಂಪಟ ರಾಜಕೀಯ ವರ್ಗಗಳ ವಿರುದ್ಧವೂ ಹೋರಾಟಗಳನ್ನು ನಡೆಸುವ ಅಗತ್ಯವಿದೆ. ಭಾರತದ ಉದಾರವಾದಿ ರಾಜಕೀಯ ಪ್ರಜಾತಂತ್ರವು ಭಾರತದ ಜನತೆಯನ್ನು ಭಾರತದ ಬಂಡವಾಳಶಾಹಿ ವರ್ಗಗಳ ಆಳದಲ್ಲಿ ಮನೆಮಾಡಿರುವ  ಬಲವಾದ ಸರ್ವಾಧಿಕಾರಿ ಧೋರಣೆಯಿಂದ ಆಗಾಗ ಬಚಾವು ಮಾಡಿರುವುದು  ನಿಜವಾದರೂ (ಉದಾಹರಣೆಗೆ ತುರ್ತುಪರಿಸ್ಥಿತಿಯಿಂದ ವಿಮೋಚನೆ ಮಾಡಿದ್ದು) ಶೋಷಿತರು, ವಂಚಿತರ ಮತ್ತು ದಮನಿತರು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಬಲ್ಲಂಥ ರಾಜಕೀಯ ಶಕ್ತಿಯಾಗಲು ಅವಕಾಶ ಮಾಡಿಕೊಟ್ಟಿಲ್ಲ. ಬದಲಿಗೆ ಆಳುವವರ್ಗಗಳು ಪ್ರಜಾತಂತ್ರದ ಹೆಸರಲ್ಲಿ ತೋರಿಕೆಯ ಜನಸಮ್ಮತಿಯೊಂದಿಗೆ ತಮ್ಮ ಆಸಕ್ತಿಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ರಾಷ್ಟ್ರವಿರೋಧಿ ಭಾರತದ ಆಳುವವರ್ಗಗಳು ಮತ್ತವರ ರಾಜಕೀಯ ದಲ್ಲಾಳಿಗಳು ರಾಷ್ಟ್ರದ ಹೆಸರಲ್ಲಿ ಜನರ ಮೇಲೆ ಸವಾರಿಮಾಡಲು ಅವಕಾಶ ಮಾಡಿಕೊಡುವ ಬಿಜೆಪಿಯ ಹಿಂದೂತ್ವ-ರಾಷ್ಟ್ರವಾದದ ಮಿಥ್ಯೆಯನ್ನು ಬಯಲುಮಾಡಬೇಕಿದೆ. ಮೋದಿಯ ರಾಷ್ಟ್ರವಾದ ಮತ್ತು ದೇಶಭಕ್ತಿಯ ಪದಗಾರುಡಿಗಳು ಜನರ ಮೇಲೆ ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ದೇಶಭಕ್ತಿಯ ಇಂದಿನ ಹಿಂದೂತ್ವ ಸ್ವರೂಪವು ಬಹುಸಂಖ್ಯಾತ ಜನರಲ್ಲಿ ಅಮಲನ್ನು ಮತ್ತು ದೇಶಪ್ರೇಮದ ಅಫೀಮನ್ನೂ ಉಣಿಸುತ್ತಿದೆ.

ಆದರೆ ನೈಜ ಸತ್ಯವನ್ನು ಜನರಿಗೆ ತಲುಪಿಸಲೇ ಬೇಕು; ಕಪ್ಪು ಆರ್ಥಿಕತೆ ಮತ್ತು ಕಪ್ಪು ಹಣವು ಭಾರತದ ಪರಾವಲಂಬಿ ಬಂಡವಾಳಶಾಹಿ ವ್ಯವಸ್ಥೆಯ ಅಂತರ್ಗತ ಭಾಗವಾಗಿದೆ; ಅದರಿಂದ ವಿಮೋಚನೆ ಪಡೆಯಬೇಕೆಂದರೆ ರಾಷ್ಟ್ರದೊಳಗೇ ಇರುವ ರಾಷ್ಟ್ರವಿರೋಧಿಗಳಾದ ಈ ದೇಶದ ಆಳುವವರ್ಗಗಳ ವಿರುದ್ಧ ಮತ್ತವರ ರಾಜಕೀಯ ದಲ್ಲಾಳಿಗಳ ವಿರುದ್ಧ ವರ್ಗ ಸಂಘರ್ಷವನ್ನೇ ನಡೆಸಬೇಕು.

ಕೃಪೆ: Economic and Political Weekly                                                     

ಅನು: ಶಿವಸುಂದರ್

 

 

 

 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...