ಸಾಹಿಲ್ ಆನ್ ಲೈನ್ ವರದಿ ಫಲಶ್ರುತಿ
ಶುಕ್ರವಾರ ಕೋಮಾಸ್ಥಿತಿಯಲ್ಲಿಯೇ ಅಬೂಬಕ್ಕರ್ ಬೆಂಗಳೂರಿಗೆ
ಭಟ್ಕಳ: ಕಳೆದ ೯ ತಿಂಗಳ ಹಿಂದೆ ಸೌದಿಅರೇಬಿಯಾ ರಿಯಾದ್ನಲ್ಲಿ ವಾಹನ ಅಪಘಾತಕ್ಕೊಳಗಾಗಿ ಕೋಮಾಸ್ಥಿತಿಗೆ ತಲುಪಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೆಚ್ಚ ಭರಿಸಲಾಗದೇ ಆಸ್ಪತ್ರೆಯಲ್ಲಿಯೇ ಅನಿವಾರ್ಯವಾಗಿ ದಿನದೂಡುತ್ತಿದ್ದ ಭಟ್ಕಳ ಹನೀಫಾಬಾದ್ ನಿವಾಸಿ ಮಾಕಡೆ ಅಬೂಬಕ್ಕರ್ ಮನೆಯವರ ಸಂಕಟಕ್ಕೆ ಕೈ ಜೋಡಿಸಲು ಕೇಂದ್ರ ಸರಕಾರ ಹಿಂದೇಟು ಹಾಕಿರುವಂತೆಯೇ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೋರ್ವರು ರು.೧ಕೋ. ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸಿ ಅಬೂಬಕ್ಕರ್ನ್ನು ಭಾರತಕ್ಕೆ ರವಾನಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ.
ಶುಕ್ರವಾರ ಅಬೂಬಕ್ಕರ್ರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದ್ದು, ಅಲ್ಲಿನ ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡ ಮುಂದಿನ ಚಿಕಿತ್ಸೆ ಕೈಗೊಳ್ಳಲಿದೆ. ಕಳೆದ ೯ ತಿಂಗಳಿನಿಂದ ಸೌದಿಅರೇಬಿಯಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಭಟ್ಕಳದ ಅಬೂಬಕ್ಕರ್ ಹಾಗೂ ಆಸ್ಪತ್ರೆಯ ವೆಚ್ಚದ ಬಗ್ಗೆ ಸ್ಥಳೀಯರೋರ್ವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ರಿಗೆ ಟ್ವೀಟ್ ಸಂದೇಶ ರವಾನಿಸಿ ನೆರವಿಗೆ ಕೋರಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ್ದ ಸಚಿವರು ರಿಯಾದ್ನಲ್ಲಿರುವ ರಾಯಭಾರಿ ಕಚೇರಿಯ ಅಧಿಕಾರಿ ಟಿ.ಟಿ.ಜಾರ್ಜರನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಈ ನಡುವೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಎಂದು ಹೇಳಿಕೊಂಡ ವ್ಯಕ್ತಿಯೋರ್ವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರಿಗೆ ಟ್ವೀಟ್ ಮಾಡಿ ಧರ್ಮದ ಆಧಾರದಲ್ಲಿ ವಿಶೇಷ ಕಾಳಜಿ ವಹಿಸಿ ಸಚಿವರು ಸಹಾಯ ನೀಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ ಸುಷ್ಮಾ ಸ್ವರಾಜ್, ನಾವು ಧರ್ಮದ ಆಧಾರದಲ್ಲಿ ನೆರವು ನೀಡುತ್ತಿಲ್ಲ. ಭಾರತೀಯ ಎಂಬ ಕಾರಣಕ್ಕೆ ಸಹಾಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಕೋಮಾದಲ್ಲಿರುವ ಅಬೂಬಕ್ಕರ್ರನ್ನು ಭಾರತಕ್ಕೆ ಕರೆ ತರಲು ವೀಸಾ ಇನ್ನಿತರ ಸಹಾಯವನ್ನು ಹೊರತು ಪಡಿಸಿ ಹಣಕಾಸಿನ ನೆರವು ನೀಡಲು ಸಾಧ್ಯವಿಲ್ಲ ಎಂದು ರಾಯಭಾರಿ ಕಚೇರಿಯ ಅಧಿಕಾರಿಗಳು ತಮ್ಮನ್ನು ಭೇಟಿಯಾದ ಭಟ್ಕಳಿಗರಿಗೆ ತಿಳಿಸಿದ್ದರು. ಇದರಿಂದ ವಿಚಲಿತಗೊಂಡ ಭಟ್ಕಳಿಗರು ಆಸ್ಪತ್ರೆಗೆ ಪದೇ ಪದೇ ಭೇಟಿ ನೀಡಿ ಅಸಹಾಯಕತೆಯಿಂದ ಹಿಂದಿರುಗುತ್ತಿದ್ದುದನ್ನು ಕಂಡ ಅದೇ ಆಸ್ಪತ್ರೆಯ ಸಿಇಓ ಓರ್ವರು, ಅಬೂಬಕ್ಕರ್ ಬಡತನದ ಬಗ್ಗೆ ಭಟ್ಕಳಿಗರೊಂದಿಗೆ ಚರ್ಚಿಸಿದ್ದಾರೆ. ಕೊನೆಗೆ ತಾವೇ ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು ‘ಉತ್ತರ ಪ್ರದೇಶದ ವ್ಯಕ್ತಿಯೋರ್ವರು ಇದೇ ಸ್ಥಿತಿಯಲ್ಲಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ನಾವು ಅವರ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತೇವೆ. ಆದರೆ ನೀವು ಅವರನ್ನು ಭಾರತಕ್ಕೆ ಕರೆದುಕೊಂಡು ಹೋಗಲು ನೆರವಾಗಬೇಕು’ ಎಂಬ ಶರತ್ತನ್ನು ವಿಧಿಸಿದ್ದಾರೆ. ಇದಕ್ಕೆ ಭಟ್ಕಳಿಗರು ಒಪ್ಪಿಕೊಂಡಿದ್ದು, ಇಬ್ಬರನ್ನೂ ಭಾರತಕ್ಕೆ ಕರೆ ತರುವ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲ್ಲಿನ ಅಬೂಬಕ್ಕರ್ ಕುಟುಂಬದ ಸದಸ್ಯರು, ನಮಗೆ ಈಗ ಸಮಾಧಾನವಾಗಿದೆ. ನಮಗೆ ರು.೧ಕೋ. ರುಪಾಯಿ ಭರಿಸುವ ಶಕ್ತಿ ಇಲ್ಲ. ನಾವು ಅಬೂಬಕ್ಕರ್ರನ್ನು ಮತ್ತೆ ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ.