ದುಬೈ, ನ ೫: ಪ್ರತಿವರ್ಷದಂತೆ ಈ ವರ್ಷವೂ ಕನ್ನಡಿಗರು ದುಬೈ ಸಂಘಟನೆ ಕರ್ನಾಟಕ ರಾಜ್ಯೋತ್ಸವವನ್ನು ನ 11ರ ಶುಕ್ರವಾರದಂದು ಅದ್ದೂರಿಯಾಗಿ ಆಚರಿಸಲು ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ನಿಸಾರ್ ಅಹ್ಮದ್ ರವರು ವಹಿಸಲಿದ್ದಾರೆ. ಭಾರತೀಯ ದೂತಾವಾಸದ Chancery & Consul (Culture & Protocol) ವಿಭಾಗದ ಮುಖ್ಯಸ್ಥೆಯಾಗಿರುವ H.H. ದೀಪಾ ಜೈನ್ ರವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಪ್ರೀಶಿಯಸ್ ಪಾರ್ಟೀಸ್ ಅಂಟ್ ಎಂಟರ್ಟೈನ್ಮೆಂಟ್ ಸಂಘಟನೆಯ ಸಹಯೋಗದೊಂದಿಗೆ ನಡೆಸಲಿರುವ ಈ ಕಾರ್ಯಕ್ರಮ ಶುಕ್ರವಾರ ನ ೧೧ ರ ಮೂರು ಘಂಟೆಗೆ ಘುಸೈಸ್ ನಲ್ಲಿರುವ ಜೆಮ್ಸ್ ಮಿಲೆನಿಯಂ ಶಾಲಾ ಸಭಾಂಗಣದಲ್ಲಿ ಪ್ರಾರಂಭವಾಗಲಿದ್ದು ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕನ್ನಡ ರತ್ನ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.
ಇದರ ಹೊರತಾಗಿ ಹಲವಾರು ಸಾಂಸ್ಕೃತಿಕ ಮತ್ತು ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಡಿನಿಂದ ಆಗಮಿಸಲಿರುವ ಜನಪದ ಕಲಾವಿದರ ತಂಡ ತಮ್ಮ ಪ್ರತಿಭೆಯನ್ನು ಮೆರೆಯಲಿದ್ದು ನಾಡಿನ ಸಂಸ್ಕೃತಿಯನ್ನು ಕಂಡು ಅನುಭವಿಸುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ. ಧಾರವಾಡದ ರಂಗ ಗಾನ ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಗಮಿಸಿದವರನ್ನು ರಂಜಿಸಲಿದ್ದಾರೆ.