ಹೊಸದಿಲ್ಲಿ: ದೇಶದ ಗಡಿಕಾಯುವ ಯೋಧರಿಗೆ ಕಳಪೆಆಹಾರವನ್ನು ನೀಡಲಾಗುತ್ತಿರುವ ಬಗ್ಗೆ ಜನವರಿಯಲ್ಲಿ ಬಿಎಸ್ಎಫ್ ತೇಜ್ಪಾಲ್ಯಾದವ್ ಪ್ರಸಾರ ಮಾಡಿದ ವಿಡಿಯೋ, ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ನೆನಪು ಮಾಸುವ ಮುನ್ನವೇ, ಮಂಗಳವಾರ ಇನ್ನೋರ್ವ ಯೋಧ ಸೇನಾಪಡೆಯಲ್ಲಿ ಅಸ್ತಿತ್ವದಲ್ಲಿರುವ ‘ಬ್ಯಾಟ್ಮ್ಯಾನ್’ ಅಥವಾ ‘ಸಹಾಯಕ್’ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ. ಸೈನಿಕರನ್ನು ಮೇಲಾಧಿಕಾರಿಗಳು ಸೇವಕರಂತೆ ನೋಡಿಕೊಳ್ಳುತ್ತಿದ್ದು, ಅವರಿಗೆ ಅತ್ಯಂತ ಕಳಪೆ ದರ್ಜೆಯ ಆಹಾರವನ್ನು ಒದಗಿಸಲಾಗುತ್ತಿದೆಯೆಂದು ದೂರಿದ್ದಾನೆ.
ಪ್ರಧಾನಿ ಕಾರ್ಯಾಲಯ ಹಾಗೂ ರಕ್ಷಣಾ ಸಚಿವಾಲಯಕ್ಕೆ ತಾನು ಈ ಬಗ್ಗೆ ದೂರು ನೀಡಿದ್ದರೂ, ಅದಕ್ಕೆ ಯಾವುದೇ ಸ್ಪಂದನೆ ವ್ಯಕ್ತವಾಗದಿರುವ ಹಿನ್ನೆಲೆಯಲ್ಲಿ ತನ್ನ ಆಹವಾಲುಗಳನ್ನು ಸಾರ್ವಜನಿಕರ ಮುಂದಿಡುತ್ತಿರುವುದಾಗಿ ಆರ್ಮಿ ಮೆಡಿಕಲ್ ಕಾರ್ಪ್ಸ್ನ ಯೋಧ ಸಿಂಧವ್ ಜೋಗಿದಾಸ್ ಹೇಳಿದ್ದಾರೆ.
ಬ್ಯಾಟ್ಮ್ಯಾನ್ ಅಥವಾ ಸಹಾಯಕ್ ಕೆಲಸದ ಹೆಸರಿನಲ್ಲಿ ಕೆಲವು ಅಧಿಕಾರಿಗಳು ಸೈನಿಕರಿಂದ ತಮ್ಮ ಮನೆಕೆಲಸಗಳನ್ನು ಮಾಡಿಸುತ್ತಾರೆ ಎಂದು ಜೋಗಿದಾಸ್ ಅಳಲು ತೋಡಿಕೊಂಡಿದ್ದಾರೆ. ಇದನ್ನು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯವೆಂದು ಆತ ಹತಾಶೆ ವ್ಯಕ್ತಪಡಿಸಿದ್ದಾರೆ. ಸೇನಾಜವಾನರು ಮೇಲಿನ ಆದೇಶಗಳನ್ನು ಪಾಲಿಸಲೇಬೇಕಾಗುತ್ತದೆ. ಯಾಕೆಂದರೆ. ಅದರ ವಿರುದ್ಧ ಮಾತನಾಡಿದಲ್ಲಿ ಅವರನ್ನು ಪೀಡನೆಗೊಳಗಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.ಈ ಬಗ್ಗೆ ತಾನು ಪ್ರಧಾನಿ ಮೋದಿಯವರ ಕಾರ್ಯಾಲಯ ಹಾಗೂ ರಕ್ಷಣಾ ಸಚಿವಾಲಯಕ್ಕೆ ತೆರಳಿ ದೂರು ನೀಡಿದ್ದೆ. ಆದರೆ ಆ ಬಳಿಕ ತನ್ನ ವಿರುದ್ಧ ಶಿಸ್ತು ಕ್ರಮದ ಪ್ರಕರಣವನ್ನು ದಾಖಲಿಸಲಾಯಿತು ಹಾಗೂ ಎರಡು ಬಾರಿ ತನಿಖೆಗಳನ್ನು ನಡೆಸಲಾಯಿತು. ಸುಮಾರು ಒಂದು ವರ್ಷದವರೆಗೂ ತನಗೆ ಕಿರುಕುಳ ನೀಡಲಾಗಿತ್ತೆಂದವರು ಹೇಳಿದ್ದ್ಜಾರೆ.
ನ್ಯಾಯ ಕೋರಿ ಸೇನಾಭವನಕ್ಕೆ ತೆರಳಿದರೂ ತನಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು ಮತ್ತು ಸೇನಾವರಿಷ್ಠ ಬಿಪಿನ್ ರಾವತ್ ಅವರಿಗೆ ಈ ಬಗ್ಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲವೆಂದು ಜೋಗಿದಾಸ್ ಹೇಳಿದ್ದಾರೆ. ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೇನೆಂಬ ಕಾರಣಕ್ಕಾಗಿ ತನಗೆ 14 ದಿನಗಳ ವೇತನವನ್ನು ಕಡಿತಗೊಳಿಸಲಾಗಿತ್ತು. ಸಾಮಾನ್ಯ ಸೈನಿಕರು ನಿಯಮ ಮುರಿದಲ್ಲಿ ಕೂಡಲೇ ಶಿಕ್ಷೆಯನುಭವಿಸುವರು ಅದರೆ ಅಧಿಕಾರಿಗಳಿಗೆ ಯಾವುದೇ ಕಾನೂನು ಅಥವಾ ನಿಯಮಗಳು ಇಲ್ಲವೆಂದು ಜೋಗಿದಾಸ್ ಹತಾಶೆ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಕುಟುಕು ಕಾರ್ಯಾಚರಣೆಯಲ್ಲಿ ಸೇನಾಪಡೆಯ ಸಹಾಯಕ್ ಪದ್ಧತಿಯನ್ನು ಟೀಕಿಸಿದ್ದ ಯೋಧ ಲಾನ್ಸ್ ನಾಯ್ಕ್ ರಾಯ್ ಮ್ಯಾಥ್ಯೂ, ನಿಗೂಢವಾಗಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಜೋಗಿದಾಸ್ನ ಈ ವಿಡಿಯೋ ಫೇಸ್ಬುಕ್ನಲ್ಲಿ ಪ್ರಸಾರವಾಗಿದೆ. ಕಳೆದ ಜನವರಿಯಲ್ಲಿ ಲಾನ್ಸ್ ನಾಯ್ಕ್ ಹುದ್ದೆಯ ಯಜ್ಞಪ್ರತಾಪ್ ಎಂಬ ಯೋಧ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ವಿಡಿಯೋದಲ್ಲಿ ಕೂಡಾ ಸೈನಿಕರನ್ನು ಅಧಿಕಾರಿಗಳು ಶೋಷಿಸುತ್ತಿದ್ದಾರೆಂದು ಆರೋಪಿಸಿದ್ದನು.