ಶಾಲಾ ಕಾಲೇಜುಗಳಿಗೆ ಏಕ ರೂಪ ರಜೆ; ಮರುಪರಿಶೀಲಿಸುವಂತೆ ಶಿಕ್ಷಣ ಸಚಿವರಿಗೆ ಮನವಿ
ಭಟ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತಿಚೆಗೆ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ಅನ್ವಯವಾಗುವಂತೆ ಸುತ್ತೋಲೆಯೊಂದನ್ನು ಕಳುಹಿಸಿದ್ದು ಶಾಲಾ ಕಾಲೇಜುಗಳಿಗೆ ನೀಡುವ ವಾರದ ರಜೆಯನ್ನು ಏಕರೂಪ ಇರುವಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಉರ್ದು ಹಾಗೂ ಮುಸ್ಲಿಮ್ ಆಡಳಿತ ಮಂಡಳಿಗಳು ನಡೆಸುತ್ತಿರುವ ಶಾಲಾ ಕಾಲೇಜುಗಳಿಗೆ ಈ ಆದೇಶದಿಂದಾಗಿ ತೊಂದರೆಯನ್ನು ಅನುಭವಿಸುವಂತಾಗಿದ್ದು ಏಕರೂಪ ರಜೆಯ ಬದಲು ವಾರದ ರಜೆಯನ್ನು ನೀಡುವ ಅಧಿಕಾರವನ್ನು ಆಯಾ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ವಹಿಸಿಕೊಡಬೇಕೆಂದು ಭಟ್ಕಳದ ಎಲ್ಲ ಮುಸ್ಲಿಮ್ ಆಡಳಿತ ಮಂಡಳಿಗಳ ಒಕ್ಕೂಟವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಟ್ ರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿಯನ್ನು ಅರ್ಪಿಸಿದ್ದಾರೆ.
ಭಟ್ಕಳ ನಗರದಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಾಲಿ ಇರುವ ಶುಕ್ರವಾರದ ರಜೆಯನ್ನು ರದ್ದುಗೊಳಿಸಿ ಅರ್ದದಿನ ಶಾಲೆಯನ್ನು ನಡೆಸುವಂತೆ ಮಾನ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶಿಸಿದ್ದು ಇದರಿಂದಾಗಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ಮುಸ್ಲಿಮರ ಪವಿತ್ರ ದಿನವಾಗಿದ್ದು ಭಟ್ಕಳದ ಪರಿಸರದಲ್ಲಿ ಶೇ೧೦೦ ವಿದ್ಯಾರ್ಥಿಗಳೇ ಇರುವ ಅಲ್ಪಸಂಖ್ಯಾತ ಸಮುದಾಯದ ಶಾಲೆಗಳ ಆಡಳಿತ ಮಂಡಳಿಗೆ ಅಂದು ಶಾಲೆಯನ್ನು ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಶುಕ್ರವಾರ ಪ್ರಾರ್ಥನೆಗಾಗಿ ಕಳುಹಿಸುವುದರಿಂದ ಶಾಲೆಗಳಿಗೆ ಕಳುಹಿಸಲು ಒಪ್ಪುತ್ತಿಲ್ಲ. ಕಾರಣ ಶುಕ್ರವಾರ ರಜೆ ನೀಡಬೇಕೊ ಅಥವಾ ಶಾಲೆಯನ್ನು ನಡೆಸಬೇಕೋ ಎನ್ನುವ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗೆ ವಹಿಸಿಕೊಡುವುದರ ಮೂಲಕ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದ್ದು, ಭಟ್ಕಳದ ಪರಿಸರವು ಬೇರೆ ನಗರ ಹಾಗೂ ಪಟ್ಟಣಗಳಲ್ಲಿ ಇರುವಂತೆ ಇಲ್ಲ. ಇಲ್ಲಿನ ಮುಸ್ಲಿಮ್ ಸಮುದಾಯ ಅತ್ಯಂತ ಧಾರ್ಮಿಕ ಶ್ರಧ್ದಾಳುಗಳಾಗಿರುವುದರಿಂದ ಶುಕ್ರವಾರ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲ. ಅಲ್ಲದೇ ಭಟ್ಕಳದಲ್ಲಿ ಕಳೆದ ನೂರಾರು ವರ್ಷಗಳಿಂದ ಶುಕ್ರವಾರವೇ ವಾರದ ರಜೆಯನ್ನು ನೀಡುತ್ತ ಬಂದಿದ್ದು ಇದರಿಂದ ಯಾವುದೇ ಆಡಳಿತಾತ್ಮಕ ಸಮಸ್ಯೆ ಉದ್ಭವಿಸಿರುವುದಿಲ್ಲ. ಪರೀಕ್ಷೆ ಮತ್ತಿತರ ಅತಿ ಜರೂರು ಕಾರ್ಯಗಳಿಗೆ ಇಲ್ಲಿನ ಆಡಳಿತ ಮಂಡಳಿ ಯಾವತ್ತೂ ಶುಕ್ರವಾರದ ದಿನವಾದರೂ ಸಹಕರಿಸಿ ಅಂದು ಶಾಲೆಯನ್ನು ನಡೆಸಿದೆ. ಮತ್ತು ಮುಂದೆಯೂ ಇದೇ ರೀತಿಯ ಸಹಕಾರವನ್ನು ಶಿಕ್ಷಣ ಇಲಾಖೆಗೆ ನೀಡುತ್ತದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಜಾರಿಗೊಳಿಸಿದ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ ಭಟ್ಕಳದ ಅಲ್ಪಸಂಖ್ಯಾತ ಆಡಳಿತ ಮಂಡಳಿ ಶಾಲೆಗಳಿಗೆ ಶುಕ್ರವಾರ ರಜೆ ನೀಡುವಂತೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಿಕೊಳ್ಳಲಾಗದೆ.
ಈ ಸಂದರ್ಭದಲ್ಲಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ತರಬಿಯತ್ ಎಜ್ಯುಕೇಶನ್ ಸೂಸೈಟಿ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ಸೇರಿದಂತೆ ಮುರುಡೇಶ್ವರದ ಮುಸ್ಲಿಮ್ ಎಜ್ಯುಕೇಶ್ ಸೂಸೈಟಿ, ಇಖ್ರಾ ಶಾಲೆ, ಅಲಿಪಬ್ಲಿಕ್ ಸ್ಕೂಲ್, ಮಾದರೆ ಹವ್ವಾ ಹಾಗೂ ಮತ್ತಿತರರ ಮುಸ್ಲಿಮ ಆಡಳಿತ ಮಂಡಳಿಗಳ ಸದಸ್ಯರು ಉಪಸ್ಥಿತಿದ್ದರು.