ಧಾರವಾಡ: ‘ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಜನತೆ ತಿರಸ್ಕರಿಸಬೇಕು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಇದೊಂದು ದೊಡ್ಡ ಅವಕಾಶ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ‘ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ಜನರು ಮತ ಚಲಾಯಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ಗಾಲಿ ಜನರಾರ್ಧನ ರೆಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಇಂಥವರ ನೆರವು ಪಡೆಯಲು ಹೊರಟಿರುವ ಬಿಜೆಪಿ ನಡೆಯನ್ನು ಜನಸಂಗ್ರಾಮ ಪರಿಷತ್ ಮತ್ತು ಜನಾಂದೋಲನ ಮಹಾಮೈತ್ರಿ ಖಂಡಿಸುತ್ತದೆ’ ಎಂದರು. ‘ಬೆಂಗಳೂರಿನಲ್ಲಿ ಮತಚೀಟಿ ಸಿಕ್ಕಿರುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ, ಚುನಾವಣೆಯನ್ನು ಮುಂದೂಡಬೇಕು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡುತ್ತಿವೆ. ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.