ಭಟ್ಕಳ: ಇಲ್ಲಿನ ನೆಹರೂ ರಸ್ತೆಯಲ್ಲಿರುವ ರಂಜನ್ ಇಂಡೇನ್ ಗ್ಯಾಸ್ ಎಜೆನ್ಸಿಯಲ್ಲಿ ಗ್ರಾಹಕರ ದಿನಾಚಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರತಿಯೋರ್ವ ವ್ಯವಹಾರಸ್ಥರಿಗೆ ಅವರ ಕಂಪೆನಿಗಳಿಗೆ ಗ್ರಾಹಕರೇ ದೇವರು. ಗ್ರಾಹಕರು ಸಂತೃಪ್ತರಾದರೆ ಮಾತ್ರ ನಮ್ಮ ಕಾರ್ಯವನ್ನು ಬೇರೆಯವರಿಗೆ ಹೇಳಿ ನಮ್ಮ ವ್ಯವಹಾರ ವೃದ್ಧಿಗೆ ಸಹಕಾರಿಯಾಗವುದು. ಗ್ಯಾಸ್ ಎಜೆನ್ಸಿಯನ್ನು ಕಳೆದ ಐದು ವರ್ಷಗಳಿಂದ ಅತ್ಯಂತ ಉತ್ತಮ ರೀತಿಯಲ್ಲಿ ಮಾಡಿಕೊಂಡು ಬಂದಿರುವ ಮಹಿಳಾ ಉಧ್ಯಮಿ ಶಿವಾನಿ ಶಾಂತಾರಾಮ್ ಗ್ರಾಹಕರಿಗೆ ತುರ್ತು ಸ್ಪಂಧಿಸುವ ಕಾರ್ಯ ಮಾಡುತ್ತಾರೆ. ಅಡುಗೆ ಅನಿಲ ಸರಬರಾಜು ಕೂಡಾ ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದು ಸಂತೃಪ್ತ ಗ್ರಾಹಕರಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಟ್ಟಡ ಮಾಲಿಕ ನರೇಂದ್ರ ನಾಯಕ, ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಸಿ. ಆರ್.ನಾಯ್ಕ, ಸಿಂಡಿಕೇಟ್ ಬ್ಯಾಂಕ್ ನೆಹರು ರಸ್ತೆ ಶಾಖೆಯ ವ್ಯವಸ್ಥಾಪಕ ಸಿ. ಅಲ್ತಾಫ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಜೆನ್ಸಿಯ ಪ್ರಥಮ ಗ್ರಾಹಕರುಗಳಾದ ರಾಜೇಶ್ವರಿ ಚಂದಾವರ್, ಅನಿತಾ ವಿ. ಮಹಾಲೆ, ಈರಾ ನಾಯ್ಕ ಹಡೀನ್ ಹಾಗೂ ವಾಣಿಜ್ಯ ಸಿಲಿಂಡರ್ ಗ್ರಾಹಕರುಗಳಾದ ಫಿಶ್ ಲ್ಯಾಂಡ್ ಮಾಲಕ ಎಂ. ಎನ್. ಪೈ, ಆಲ್-ಖಲೀಜ್ ರೆಸ್ಟೋರೆಂಟ್ನ ಶೇಖ್ ಅಲಿ ಅವರುಗಳನ್ನು ಗೌರವಿಸಲಾಯಿತು.
ರಂಜನ್ ಇಂಡೇನ್ ಗ್ಯಾಸ್ ಎಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಮ್ಮ ಎಜೆನ್ಸಿಯು ಕ್ರಮಿಸಿದ ಐದು ವರ್ಷಗಳನ್ನು ನೆನಪಿಸಿದರು. ಸದಾ ಗ್ರಾಹಕರು ಯಾವುದೇ ಸಮಸ್ಯೆಗೆ ತಮ್ಮ ಎಜೆನ್ಸಿಯನ್ನು ಸಂಪರ್ಕಿಸಬಹುದು ಎಂದರು.