ಶಿರಸಿ : ಇಲ್ಲಿನ ದಾಸನಕೊಪ್ಪ ಸಮೀಪದ ರಂಗಾಪುರದ ಕುಂಬಾರಗಟ್ಟಿ ಕೆರೆಗೆ ಮೊಸಳೆಯೊಂದು ಬಂದು ಸೇರಿಕೊಂಡಿದ್ದು, ಸುತ್ತಲಿನ ಗ್ರಾಮಸ್ಥರು ತೀವ್ರ ಭಯಗೊಂಡಿದ್ದಾರೆ.
ಕಳೆದ ವಾರ ಬಿದ್ದ ಭಾರಿ ಮಳೆಗೆ ಮುಳಗಿ ಡ್ಯಾಂ ತುಂಬಿ ಹರಿದಿದ್ದು, ಆ ಸಂದರ್ಭದಲ್ಲಿ ಡ್ಯಾಂನಲ್ಲಿದ್ದ ಈ ಮೊಸಳೆಯು ನೀರಿನ ಜೊತೆಗೆ ಪಕ್ಕದ ಗದ್ದೆಯೊಳಗೆ ಬಂದು ಸೇರಿದೆ. ಗದ್ದೆಯಲ್ಲೂ ನೀರು ಸಾಕಷ್ಟಿದ್ದರಿಂದ ಮೊಸಳೆಯು ಸುಲಭವಾಗಿ ಅಲ್ಲೇ ಇದ್ದು, ಅಲ್ಲೇ ಸಮೀಪದ ರಂಗಾಪುರದ ಕುಂಬಾರಗಟ್ಟಿ ಕೆರೆಗೆ ಬಂದು ಸೇರಿಕೊಂಡಿದೆ. 14 ಎಕ್ರೆ ವಿಸ್ತೀರ್ಣದ ದೊಡ್ಡ ಕೆರೆಯ ಸುತ್ತ ನೂರಾರು ಎಕ್ರೆ ಗದ್ದೆಗಳು ಇದ್ದು, ರೈತರು ಗದ್ದೆಗೆ ಹೋಗಿ ಕೆಲಸ ಮಾಡದಂತಹ ಪರಿಸ್ಥಿತಿ ಬಂದಿದೆ.
ಶನಿವಾರ ಮೊಸಳೆಯನ್ನು ಕೆರೆ ಏರಿ ಮೇಲೆ ಜನರು ಕಂಡು ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಅವರು ಬಂದು ನೋಡಿದಾಗ ಮೊಸಳೆ ಮತ್ತೆ ನೀರಿಗೆ ಸೇರಿದೆ. ಅರಣ್ಯ ಇಲಾಖೆ ನಿಗಾ ಇಟ್ಟಾಗ ಎರಡ್ಮೂರು ಸಲ ಹೊರಬಂದು ಹೋಗಿದೆ. ರವಿವಾರ ಬೆಳಿಗ್ಗೆಯಿಂದ ಸಂಜೆತನಕವೂ ಅರಣ್ಯ ಸಿಬ್ಬಂದಿ ಅಲ್ಲೇ ಇದ್ದು ಮೊಸಳೆ ನೀರಿನಿಂದ ಹೊರಬರುವುದನ್ನು ಕಾಯುತ್ತಿದ್ದಾರೆ. ಆದರೆ ರಂಗಾಪುರ, ದಾಸನಕೊಪ್ಪ, ಮಳಗಿ, ಬದನಗೋಡ ಹೀಗೆ ಅಕ್ಕ ಪಕ್ಕದ ಊರಿನ ನೂರಾರು ಬಂದು ಕೆರೆ ಸುತ್ತ ಸೇರಿ ಗೌಜಿ ಮಾಡುತ್ತಿರುವುದರಿಂದ ಮೊಸಳೆ ಹೊರಬರುತ್ತಿಲ್ಲ ಎನ್ನಲಾಗಿದೆ. ರವಿವಾರ ಕೆರೆ ಸಮೀಪ ಕೋಳಿ ಕಟ್ಟಿ ಮೊಸಳೆ ಹೊರತರುವ ಪ್ರಯತ್ನ ವಿಫಲವಾಗಿದೆ.
ಎಸಿಎಫ್ ರಘು ಅವರನ್ನು ಈ ಕುರಿತು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, “ಕೆರೆಯೊಳಗೆ ಇಳಿದು ಮೊಸಳೆ ಹಿಡಿಯುವುದು ಅಸಾಧ್ಯವೇ ಆಗಿದೆ. ಹೊರಗೆ ಬಂದಾಗ ಹಿಡಿಯಲು ಕಾಯುತ್ತಿದ್ದೇವೆ. ಪಕ್ಕದ ಗದ್ದೆಯೊಳಗೆ ಹೋಗುವುದರಿಂದ ಅಪಾಯವೇ ಆಗಿದೆ. ರೈತರಿಗೆ ಮತ್ತು ಜನರಿಗೆ ಆದಷ್ಟು ಕೆರೆ ಸಮೀಪ, ಸಮೀಪದ ಗದ್ದೆಗಳಿಗೂ ಹೋಗದಂತೆ ಸೂಚಿಸಿದ್ದೇವೆ. ಹೊರಬಂದ ತಕ್ಷಣ ಹಿಡಿದು ಹೊರಒಯ್ಯುತ್ತೇವೆ” ಎಂದು ತಿಳಿಸಿದರು. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಸಹ ಭೇಟಿ ನೀಡಿದ್ದಾರೆ. ಸದ್ಯ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಜನರು ಕೆರೆ ಸುತ್ತ ನಿಗಾ ವಹಿಸಿದ್ದು, ನೀರಿನಿಂದ ಮೊಸಳೆ ಹೊರಬರುವುದನ್ನು ಕಾಯುತ್ತಿದ್ದಾರೆ.