ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಫಾರಿ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿಬೆಳಗೆರೆ ಅವರನ್ನು ವಶಕ್ಕೆ ಪಡೆದು ತೀವ್ರ ಚಾರಣೆಗೊಳಪಡಿಸಿದ್ದಾರೆ. ಜಾಮೀನು ರಹಿತ ವಾರೆಂಟ್ನೊಂದಿಗೆ ಏಕಾಏಕಿ ಪದ್ಮನಾಭನಗರದಲ್ಲಿರುವ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಬೆಳಗೆರೆಯನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ:
ಹಾಯ್ ಬೆಂಗಳೂರು ಪತ್ರಿಕಾ ಕಚೇರಿಯಲ್ಲಿ ಪತ್ರಕರ್ತನಾಗಿದ್ದ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ರವಿ ಬೆಳಗೆರೆ ಅವರು ಸುಫಾರಿ ನೀಡಿದ್ದರು ಎನ್ನಲಾಗಿದೆ. ಈ ಕುರಿತಂತೆ ಭೀಮಾತೀರದ ಹಂತಕ ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಎಂಬಾತ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಬೆಳಗೆರೆ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಗೌರಿ ಹಂತಕರ ಪತ್ತೆಕಾರ್ಯಾಚರಣೆ ಕೈಗೊಂಡಿದ್ದ ಎಸ್ಐಟಿ ಪೊಲೀಸರು ತಾಹೀರ್ ಎಂಬ ಶೂಟರ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದ ಸಂದರ್ಭದಲ್ಲಿ ಆತ ಶಶಿಧರ್ ಮುಂಡೇವಾಡಗಿ ಬಗ್ಗೆ ಮಾಹಿತಿ ನೀಡಿದ್ದ.
ತಾಹೀರ್ ನೀಡಿದ್ದ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು ಶಶಿಧರ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ರವಿಬೆಳಗೆರೆ ಅವರು ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ನೀಡಿದ್ದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಒಂದು ಬಾರಿ ಸುನಿಲ್ ಹತ್ಯೆಗೆ ಯತ್ನಿಸಲಾಗಿತ್ತು. ಆದರೆ, ಆತನ ಮನೆಯಲ್ಲಿ ಸಿಸಿ ಕ್ಯಾಮೆರಾ ಇದ್ದುದ್ದರಿಂದ ವಾಪಸ್ ಆಗಿದ್ದೆ. ಈ ಬಗ್ಗೆ ಬೆಳಗೆರೆ ಅವರ ಗಮನಕ್ಕೆ ತಂದಾಗ ಈಗ ಬೇಡ ಕಾಲ ಬಂದಾಗ ನೋಡೋಣ ಸುಮ್ಮನಿರು ಎಂದಿದ್ದರು ಎಂದು ಶಶಿಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಈ ಮಾಹಿತಿ ಆಧಾರದ ಮೇಲೆ ರವಿ ಬೆಳಗೆರೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದ್ದು, ಎಫ್ಐಆರ್ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರ ಪೋಲಿಷ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿ : ನಗರ ಪೋಲಿಷ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಂಧಿತ ಆರೋಪಿ ಶಶಿಧರ್ ವಿಚಾರಣೆ ವೇಳೆ ಸುನಿಲ್ ಹತ್ಯೆಗೆ ಮುಂಗಡವಾಗಿ ೧೫ ಸಾವಿರ ನೀಡಿದ್ದು, ಒಪ್ಪಿಕೊಂಡ ಕೆಲಸ ಮುಗಿದ ನಂತರ ಕೇಳಿದಷ್ಟು ಹಣ ನೀಡುವುದಾಗಿ ರವಿ ಬೆಳಗೆರೆ ಭರವಸೆ ನೀಡಿದ್ದರು ಎಂಬ ಮಾಹಿತಿ ನೀಡಿದ್ದಾರೆ.
ರವಿ ಬೆಳಗೆರೆ ಮನೆಯಲ್ಲಿ ಸಿಕ್ಕಿರುವ ಜಿಂಕೆಯ ಚರ್ಮದ ಬಗ್ಗೆ ತನಿಖೆ ನಡಿಯುತ್ತಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದೇ ಸಿಸಿಬಿ ಪೊಲೀಸರು ರವಿ ಬೆಳಗೆರೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಂಜೆ 6 ಗಂಟೆಯ ಸಂದರ್ಭದಲ್ಲಿ ಬಂಧಿಸಿ ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಇನ್ನು ಸುಪಾರಿ ಹತ್ಯೆ ಕುರಿತಂತೆ ಇದರ ಹಿಂದಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆಯ ಬಳಿಕ ತಿಳಿಯಲಿದೆ ಎಂದು ಸುನಿಲ್ ಕುಮಾರ್ ಅವರು ಮಾಹಿತಿ ನೀಡಿದರು.