ಕಳೆದ ಐದು ವರ್ಷಗಳಲ್ಲಿ ಒಂದು ದಿನವೂ ವ್ಯರ್ಥ ಮಾಡದೆ ಜನರ ಕೆಲಸ ಮಾಡಿದ್ದೇನೆ-ಮಾಂಕಾಳ್
ಭಟ್ಕಳ: ವಿರೋಧಿಗಳು ಯಾರು ಏನೆ ಅಂದರೂ ನನಗೆ ನನ್ನ ಕೆಲಸ ತೃಪ್ತಿನೀಡಿದೆ. ಕಳೆದ 5ವರ್ಷಗಳಲ್ಲಿ ಒಂದು ದಿನವೂ ವ್ಯರ್ಥಮಾಡದೆ ಜನರ ಕೆಲಸ ಮಾಡಿದ್ದೇನೆ ಎಂದು ಭಟ್ಕಳ-ಹೊನ್ನಾವರ ವಿಧಾಸಭಾ ಕ್ಷೇತ್ರದ ಕಾಂಗ್ರೇಸ್ ಹುರಿಯಾಳು ಮಾಂಕಾಳ್ ಎಸ್.ವೈದ್ಯ ಹೇಳಿದರು.
ಅವರು ಬುಧವಾರ ನಗರದಲ್ಲಿ ರೋಡ್ ಶೋ ನಡೆಸಿ ನಂತರ ಸಾರ್ವಜನಿಕ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಜನರು ಅಭಿವೃಧ್ಧಿಯ ಪರವಾಗಿ ಶಿಕ್ಷಣಕ್ಕೆ ಉತ್ತೇಜನ ನೀಡುವವರ ಪರವಾಗಿದ್ದಾರೆ. ಬಡವರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯ ಒದಗಿಸಿ ಕೊಡುವವರ ಪರವಾಗಿದ್ದಾರೆ ಎಂದು ನಾನು ನಂಬಿದ್ದು ಡೋಂಗಿ ಭಾಷಣ ಮಾಡುವವರ ಪರವಾಗಿ ನಮ್ಮ ಕ್ಷೇತ್ರದ ಜನರಿಲ್ಲ ಎಂದು ಹೇಳಿದ ಅವರು, 5ವರ್ಷ ಯಾವುದೇ ಕಾರಣಕ್ಕೂ ಸಾಮಾನ್ಯ ಜನರಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದೇನೆ. ಇಂತಹ ಆಡಳಿತ ನೀಡಿದ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ವಿರೋಧಿಗಳ ಅಪಪ್ರಚಾರಕ್ಕೆ ನಾನು ಜಗ್ಗುವವನಲ್ಲ, ಕ್ಷೇತ್ರದ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ನನ್ನನ್ನು ಹತ್ತಿರದಿಂದ ನೋಡಿದ್ದಾನೆ. ನಾನು ಎಲ್ಲಿಯೂ ಶಾಸಕ ಎಂದು ತೋರಿಸಿಕೊಂಡಿಲ್ಲ. ಸಾಮಾನ್ಯನೊಂದಿಗೆ ಸಾಮಾನ್ಯನಾಗಿ ಬಾಳಿದ್ದೇನೆ. ನಾನು ಜನರು ಹಾಗೂ ದೇವರನ್ನು ನಂಬಿದ್ದೇನೆ. ಈ ಇಬ್ಬರು ನನ್ನನ್ನು ಕೈಬಿಡಲ್ಲ ಎಂಬ ನಂಬಿಕೆ ನನಗಿದೆ ನಾನು ನನ್ನ ತತ್ವಸಿದ್ಧಾಂತಗಳೊಂದಿಗೆ ಬದುಕುತ್ತಿದ್ದೇನೆ. ಜನರು ಹಾಗೂ ದೇವರು ನನ್ನನ್ನು ಆಶೀರ್ವಧಿಸುತ್ತಾರೆ ಎಂದು ನಂಬಿದ್ದೇನೆ ಎಂದರು.
ಭಟ್ಕಳ ಅತಿ ಹೆಚ್ಚು ಮತದಾರರನ್ನು ಹೊಂದಿದ ಪ್ರಮುಖ ಎರಡು ಸಮುದಾಯದ ಮತದಾರರು ಸೇರಿದಂತೆ ಪ.ಜಾ, ಪ.ಪಂ ಹಾಗೂ ಮೀನುಗಾರ ಸಮುದಾಯದವರು ಸಾವಿರಾರು ಸಂಖ್ಯೆಯಲ್ಲಿ ರೋಡ್ ಶೋ ನಲ್ಲಿ ಭಾಗವಹಿಸಿ ಮಾಂಕಾಳರಿಗೆ ತಮ್ಮ ನಿಷ್ಟೆಯನ್ನು ತೋರ್ಪಡಿಸಿದರು.