ಕಾರವಾರ: ಮಾನವನ ವಿಕಾಸವಾಗಬೇಕಾದರೆ ನಮ್ಮಲ್ಲಿ ಏಕತೆ ರಕ್ತಗತವಾಗಿ ಬರಬೇಕು. ನಮ್ಮಲ್ಲಿ ಮಾನವೀಯತೆ ಇರಬೇಕು. ಮಾನವೀಯತೆ ಇಲ್ಲದವರು ಪಶುವಿಗೆ ಸಮಾನರು. ನಮ್ಮಲ್ಲಿ ಉತ್ತಮ ಗುಣಗಳು ಬಾಲ್ಯದಿಂದಲೇ ಬೆಳೆಯಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂಯಮದಿಂದ ನಡೆಯಬೇಕು. ವಿವೇಕಾನಂದರು ಸಂಯಮದಿಂದ ಸಾಧನೆಮಾಡಿ ಜಗತ್ತಿಗೇ ಮಾದರಿಯಾಗಿದ್ದಾರೆ. ಆದ್ದರಿಂದ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಕಾರಾತ್ಮಕ ವಿಚಾರಗಳು ಬೆಳೆಯಬೇಕು ಎಂದು ಕಾರವಾರದ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನೆಹರು ಯುವ ಕೇಂದ್ರ ಕಾರವಾರ, ಆಝದ್ ಯುಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರರವರ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಮಾನವ ಹಕ್ಕು’ಗಳ ದಿನಾಚರಣೆ ಮತ್ತು ‘ಕೌಮಿ ಏಕತಾ ದಿವಸ’ ದ ನಿಮಿತ್ತ ಕೋಡಿಬಾಗದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಉಚಿತ ರಕ್ತದ ಗುಂಪು ತಪಾಸಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾದ ರೊ.ಲೀಯೋ ಎಫ್. ಲೂವಿಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಸಂಸ್ಕಾರಗಳು ಕಡಿಮೆ ಆಗಿದೆ. ಮೋಹ, ಸ್ವಾರ್ಥಕ್ಕಾಗಿ ಬೇರೆಯವರಿಗೆ ತೊಂದರೆ ಕೊಡುತ್ತಿದ್ದೇವೆ. ತಾಳ್ಮೆಯಿಂದ ಜೀವನ ನಡೆಸಿ ಪ್ರೀತಿ ಹಾಗೂ ಸೌಹಾರ್ದತೆಯಿಂದ ಜೀವನ ನಡೆಸಬೇಕಾಗಿದೆ. ಅನ್ಯಾಯ ಆದಾಗ ಮಾನವ ಹಕ್ಕುಗಳ ಪ್ರಯೋಜನ ಪಡೆಯಬೇಕಾಗಿದೆ ಎಂದು ಹೇಳಿದರು. ಸ್ವಾಮಿ ವಿವೇಕಾನಂದ ಆಡಳಿತ ಮಂಡಳಿಯ ಅಧ್ಯಕ್ಷರಾದ ದೀಪಕ ವೈಂಗಣ್ಕರ್ ಮಾತನಾಡಿ ರಕ್ತದ ಗುಂಪು ತಪಾಸಣೆ ಕಾರ್ಯವು ಉತ್ತಮ ಕಾರ್ಯವಾಗಿದೆ. ಇದರಿಂದ ಮುಂದೆ ರಕ್ತದಾನ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಿದರು. ಕಾರ್ಯದರ್ಶಿ ವಿ.ಜೆ.ತಾಮಸೆ ಮಾತನಾಡಿ ಸಮಾಜದಲ್ಲಿ ಬೇರೆ ಬೇರೆ ಕೋಮುಗಳಿದ್ದು ಎಲ್ಲರೂ ಅನ್ಯೋನ್ಯತೆಯಿಂದ ಬಾಳಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಧರ್ಮದ ಜೊತೆಗೆ ಎಲ್ಲಾ ಧರ್ಮವನ್ನು ಪ್ರೀತಿಸಬೇಕು ಎಂದು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್ ಮಾನವ ಹಕ್ಕುಗಳಿರುವುದರಿಂದ ನಮಗೆ ಅನ್ಯಾಯ ವಾದಾಗ ನ್ಯಾಯವನ್ನು ಪಡೆದುಕೊಳ್ಳಬಹುದು. ಇದರ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಆಝಾದ್ ಯುಥ್ ಕ್ಲಬ್ನ ಚೀಫ್ ಪ್ಯಾಟ್ರನ್ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಇಬ್ರಾಹಿಂ ಕಲ್ಲೂರ್ ಮಾತನಾಡಿ ಮಾನವೀಯತೆಯೇ ಮಾನವನ ಮೌಲ್ಯ. ಅದು ವಿದ್ಯಾರ್ಥಿ ಜೀವನದಿಂದಲೇ ಪ್ರಾರಂಭವಾಗಬೇಕು. ಭಾರತ ದೇಶವನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸ್ವಚ್ಛವಾಗಿ ಇಡೋಣ ಎಂದು ಹೇಳಿದರು.
ಪ್ರಾರಂಭದಲ್ಲಿ ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್ ಪ್ರಾಸ್ಥವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಮುಖ್ಯಾಧ್ಯಾಪಕರಾದ ಪಿ.ಎ.ಮಯೇಕರ್ ವಂದಿಸಿದರು. ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಕೃಷ್ಣ ಗಾಯತ್ರಿ, ಆರ್.ಟಿ.ಜಿ.ಗೌಡ, ವಿಕ್ರಾಂತ ತಾಡೇಲ್, ಲತಾ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತ ರಕ್ತದ ಗುಂಪು ತಪಾಸಣೆಯನ್ನು ಮಾಡಲಾಯಿತು . ಜಿಲ್ಲಾ ಆಸ್ಪತ್ರೆಯ ಬ್ಲಡ್ ಟೆಕ್ನೀಶಿಯನ್ ಛಾಯಾ ದುರ್ಗೇಕರ್ ಮತ್ತು ಸಂಧ್ಯಾ ರಕ್ತದ ಗುಂಪು ತಪಾಸಣೆ ಮಾಡಿದರು.