ಚೆನ್ನೈ, ಡಿ ೫: ಕಳೆದ 75 ದಿನಗಳಿಂದ ಬಹುವಿಧ ಕಾಯಿಲೆಗಳಿಂದ ತೀವ್ರ ಅಸ್ವಸ್ಥರಾಗಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ.
ಭಾನುವಾರ ಸಂಜೆ ಹೃದಯಘಾತಕ್ಕೊಳಗಾಗಿ ಕೃತಕ ಉಸಿರಾಟದಲ್ಲಿದ್ದ ಜಯಲಲಿತಾ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾದರು. ಅದರೊಂದಿಗೆ ಹಲವು ದಶಕಗಳ ಕಾಲ ತಮಿಳುನಾಡು ಹಾಗೂ ರಾಷ್ಟ್ರ ರಾಜಕಾರಣದಲ್ಲಿ ನಿರ್ವಿವಾದ ಛಾಪು ಮೂಡಿಸಿದ್ದ ಜಯಲಲಿತಾ ಯುಗಾಂತ್ಯವಾಯಿತು. ಜಯಾ ನಿಧನ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಆಸ್ಪತ್ರೆ ಎದುರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ದುಃಖ ಕಟ್ಟೆಯೊಡೆಯಿತು. ಜಯಾ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಸೂತಕದ ಛಾಯೆ ಆವರಿಸಿದೆ.
ಏತನ್ಮಧ್ಯೆ ಜಯಾ ಉತ್ತರಾಧಿಕಾರಿ ಪನ್ನೀರ್ ಸೆಲ್ವಂ ಸೋಮವಾರ ತಡರಾತ್ರಿ ರಾಜಭವನದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಜಯಲಲಿತಾ ನಿಧನ ವಾರ್ತೆ ಪ್ರಕಟಿಸುವುದಕ್ಕೂ ಮೊದಲೇ ಆಸ್ಪತ್ರೆ ಸುತ್ತ ಮುತ್ತ 3 ಕಿ.ಮೀ ವ್ಯಾಪ್ತಿಯ ರಸ್ತೆಗಳಲ್ಲಿ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಿಧನ ಸುದ್ದಿ ಘೊಷಣೆ ನಂತರ ಕೆಲವೇ ಗಂಟೆಗಳಲ್ಲಿ ಜಯಾ ಅವರ ಪಾರ್ಥಿವ ಶರೀರವನ್ನು ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಸಾರ್ವಜನಿಕರಿಗೆ ಜಯಲಲಿತಾ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನ ರಾಜಾಜಿ ಹಾಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಮಂಗಳವಾರ ಸಂಜೆ ಜಯಾ ಅಂತ್ಯಸಂಸ್ಕಾರ ನಡೆಸಲು ತೀರ್ವನಿಸಿರುವುದಾಗಿ ಎಐಎಡಿಎಂಕೆ ಮೂಲಗಳು ಖಚಿತಪಡಿಸಿವೆ.
ಅಘೊಷಿತ ಬಂದ್
ರಾತ್ರಿ 11.45ಕ್ಕೆ ಎಐಎಡಿಎಂಕೆಯ ಎಲ್ಲ ಸಚಿವರು ಹಾಗೂ ನಾಯಕರು ಅಪೋಲೋ ಆಸ್ಪತ್ರೆಗೆ ದಿಢೀರ್ ಧಾವಿಸಿದರು. ಇದಕ್ಕೂ ಮೊದಲೇ ಇಡೀ ಆಸ್ಪತ್ರೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜಯಾ ನಿಧನ ಸುದ್ದಿ ಬಹಿರಂಗಗೊಂಡ ನಂತರ ಚೆನ್ನೈನಲ್ಲಿ ಅಘೊಷಿತ ಬಂದ್ ವಾತಾವರಣ ನಿರ್ವಣವಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ.