• ಗಣೇಶೋತ್ಸವ ಸಮಿತಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ
ಭಟ್ಕಳ: ತಾಲೂಕಿನ ಎಲ್ಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿಯೂ ಅವರ ಉತ್ಸವದ ಎಲ್ಲಾ ಸಕಲ ತಯಾರಿಯ ಜೊತೆಗೆ ಜವಾಬ್ದಾರಿಯನ್ನು ವಹಿಸಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದು ಸಹಾಯಕ ಆಯುಕ್ತ ಸಾಜಿದ ಅಹ್ಮದ್ ಮುಲ್ಲಾ ಸೂಚಿಸಿದರು.
ಅವರು ಭಾನುವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಗರ ಪೊಲೀಸ ಠಾಣೆ ವತಿಯಿಂದ ಕರೆಯಲಾದ ಗಣೇಶ ಹಬ್ಬದ ಆಚರಣೆಯ ಕುರಿತಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
‘ದೇಶಕ್ಕೆ ಸ್ವಾತಂತ್ರ್ಯಕ್ಕೂ ಪೂರ್ವದಿಂದಲೇ ಆರಂಭಗೊಂಡ ಹಬ್ಬ ಗಣೇಶ ಹಬ್ಬವಾಗಿದ್ದು, ಮನೆ ಮನೆ ಸೇರಿದಂತೆ ಸಾರ್ವಜನಿಕವಾಗಿ ಗಣಪತಿ ಮೂರ್ತಿಯನ್ನು ಕುರಿಸಿ ಪೂಜೆಯನ್ನು ಸಲ್ಲಿಸಿ ವಿಜೃಂಭಣೆಯಿಂದ ಆಚರಿಸುತ್ತಾರೆ. ತಾಲೂಕಿನಲ್ಲಿ 3 ರಿಂದ 5 ದಿನದವರೆಗೆ ಗಣೇಶ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿ ಬಳಿಕ ವಿಸರ್ಜನೆ ಮಾಡಲಿದ್ದು, ಪೊಲೀಸ ಇಲಾಖೆಯಿಂದ ಎಲ್ಲಾ ಭದ್ರತಾ ವ್ಯವಸ್ಥೆಗಳು ಕಲ್ಪಿಸಲಾಗಿದೆ. ಗಣೇಶೋತ್ಸವ ಸಮಿತಿಯೂ ಆಯಾ ಉತ್ಸವದ ಜವಾಬ್ದಾರಿಯನ್ನು ಪಡೆದು ಪೂರ್ವ ತಯಾರಿ ನಡೆಸಿ ಶಿಸ್ತುಬದ್ಧವಾಗಿ ಆಚರಿಸಬೇಕು. ಹಬ್ಬದಲ್ಲಿ ಸಾರ್ವಜನಿಕರು ಇಲಾಖೆ ಉತ್ತಮ ಸಹಕಾರ ನೀಡುವ ಅವಶ್ಯವಿದ್ದು, ಉತ್ಸವವೂ ನಿರ್ವಿಘ್ಯವಾಗಿ ನಡೆಯಲಿ ಎಂದು ಹೇಳಿದರು.
ಸಭೆಯಲ್ಲಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮಾತನಾಡಿ ‘ಸಬೆಯಲ್ಲಿ ಚರ್ಚೆಯಾದ ವಿಚಾರದ ಬಗ್ಗೆ ಆಯಾ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ತುರ್ತು ಸಭೆಯನ್ನು ಕರೆದು ಎಲ್ಲಾ ವಿಷಯವನ್ನು ಸೂಚಿಸಬೇಕು. ಉತ್ಸವದಲ್ಲಿ ಸ್ವಯಂಸೇವಕರನ್ನು ಸಮಿತಿಯಿಂದಲೇ ನೇಮಿಸಿ ಎಲ್ಲರಿಗೂ ಒಂದೊಂದು ವಿಭಾಗದ ಜವಾಬ್ದಾರಿಯನ್ನು ನೀಡಬೇಕು. ಗಣೇಶ ಮೂರ್ತಿ ವಿಸರ್ಜನೆ ವೇಳೆ ಏನಾದರೂ ತಳ್ಳಾಟ ಸೇರಿದಂಎತ ಶಾಂತಿ ಭಂಗವಾಗದಂತೆ ಜಾಗೃತಿ ವಹಿಸಿಕೊಳ್ಳಬೇಕು. ಉದ್ದೇಶ ಪೂರ್ವಕವಾಗಿ ವಾತಾವರಣ ಕೆಡಿಸುವಂತವರ ಮೇಲೆ ಕ್ರಮಕ್ಕೆ ಮುಂದಾಗಲಿದ್ದೇವೆ. ಆಯಾ ಉತ್ಸವದ ಸುತ್ತಮುತ್ತ ಸಿ.ಸಿ.ಟಿವಿ ಅಳವಡಿಸುವಂತೆ ಸೂಚನೆ ನೀಡಿದರು.
ಸಬೆಯಲ್ಲಿ ಉತ್ಸವದ ವಿಸರ್ಜನೆ ವೇಳೆ ಡಿಜೆ ಬಳಕೆಯ ಬಗ್ಗೆ ಆಟೋ ರಿಕ್ಷಾ ಗಣೇಶೋತ್ಸವ ಸಮಿತಿ ಪ್ರಮುಖ ಗಣಪತಿ ನಾಯ್ಕ ಅನುಮತಿಯನ್ನು ಕೋರಿದ್ದು, ಸುಪ್ರಿಂಕೋರ್ಟನಿಂದ ಡಿಜೆ ಬಳಕೆಗೆ ನಿಷೇಧ ಹೇರಿದ್ದು, ಉತ್ಸವದಲ್ಲಿ ಬಳಸುವ ಧ್ವನಿವರ್ಧಕವನ್ನು ಬಳಸಬಹುದು ಎಂದು ಡಿವೈಎಸ್ಪಿ ವೆಲೆಂಟೈನ ಡಿಸೋಜಾ ಉತ್ತರಿಸಿದರು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ತಹಸೀಲ್ದಾರ್ ವಿ.ಎನ್.ಬಾಡಕರ್ ಮಾತನಾಡಿದರು. ಸಭೆಯಲ್ಲಿ ವಿವಿಧ ಸಮಾಜ ಮುಖಂಡರು, ಆಯಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಮಾತನಾಡಿದರು.
ಸಿಪಿಐ ಕೆ.ಎಲ್.ಗಣೇಶ, ನಗರ ಠಾಣೆ ಪಿಎಸ್ಐ ಕುಸುಮಾಧರ, ಗ್ರಾಮೀಣ ಠಾಣೆ ಪಿಎಸ್ಐ ರವಿ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭೆ ಉಪಾಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.