ಬೆಂಗಳೂರು: ನ.೩ ರಂದು ನಡೆದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪೂರ್ಣಗೊಂಡಿದ್ದು ಆಡಳಿತರೂಢ ಕಾಂಗ್ರೇಸ್ ಜೆ.ಡಿ.ಎಸ್ ಸಮ್ಮಿಶ್ರ ಸರ್ಕಾರ ತಲಾ ಎರಡು ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಬಿಜೆಪಿ ಕೇವಲ ಒಂದು ಲೋಕಾಸಭಾ ಕ್ಷೇತ್ರಕ್ಕಷ್ಟೆ ತೃಪ್ತಿಪಟ್ಟುಕೊಂಡಿದೆ.
ಗಣಿ ದಣಿಗಳ ತವರು ಬಳ್ಳಾರಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಉಗ್ರಪ್ಪ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ರೆಡ್ಡಿ ಸಹೋದರರಿಗೆ ಭಾರಿ ಮುಖಭಂಗವನ್ನುಂಟು ಮಾಡಿದ್ದಾರೆ. ಈ ಕ್ಷೇತ್ರ ಸಮ್ಮಿಶ್ರ ಸರ್ಕಾರಕ್ಕೆ ಪ್ರತಿಷ್ಟೆಯ ಕ್ಷೇತ್ರವಾಗಿತ್ತು. ಇಲ್ಲಿ ರೆಡ್ಡಿಯ ಸಹೋದರಿ ಶಾಂತಾ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಪತ್ನಿ ಅನಿತಾ ಕುಮಾರ್ ಸ್ವಾಮಿ ಜೆ.ಡಿ.ಎಸ. ಪಕ್ಷದಿಂದ ಸ್ಪರ್ಧಿಸಿ ಭಾರಿ ಅಂತರದಲ್ಲಿ ಗೆಲುವನ್ನು ದಾಖಲಿಸಿದ್ದಾರೆ.
ಸಿದ್ದು ನ್ಯಾಮೆಗೌಡ ಅವರ ಮರಣದಿಂದಾಗಿ ತೆರವುಗೊಂಡಿದ್ದ ಜಮಖಂಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆನಂದ್ ನ್ಯಾಮಗೌಡ ಭರ್ಜರಿ ಗೆಲುವು ದಾಖಲಿಸಿದ್ದು ’ನನ್ನ ತಂದೆಯ ಕನಸನ್ನು ಸಾಕಾರಗೊಳಿಸುತ್ತೇನೆ. ನನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ ಎಂದು ತಿಳಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್ಆರ್ ಶಿವರಾಮೇಗೌಡ ಕಣಕ್ಕಿಳಿದಿದ್ದು ಕಾಂಗ್ರೆಸ್ ಇಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿತ್ತು. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಕಾಂಗ್ರೆಸ್ ಬೆಂಬಲದೊಂದಿಗೆ ತನ್ನ ಗೆಲುವನ್ನು ದಾಖಲಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರವು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸುಪುತ್ರರು ಕಣದಲ್ಲಿರುವುದರಿಂದ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟು ಕೊನೆಗೆ ಬಿಎಸ್.ವೈ ಪುತ್ರ ರಾಘವೇಂದ್ರ ಅವರು ಮಧುಬಂಗಾರಪ್ಪರನ್ನು ಸೋಲಿಸುವುದರ ಮೂಲಕ ತಮ್ಮ ತಂದೆಯವರ ಮಾನವನ್ನು ಕಾಪಾಡಿಕೊಂಡಿದ್ದಾರೆ.