ಗೋಗಲ್ ಸರ್ಚ್ನ ಭಟ್ಕಳಕ್ಕೂ ವಾಸ್ತವ ಭಟ್ಕಳಕ್ಕೂ ಅಜಗಜಾಂತರ ವ್ಯತ್ಯಾಸವಿದೆ-ಬ್ರಿಟೀಷ್ ರಾಯಭಾರಿ ಡೊಮ್ಯಾನಿಕ್ ಮ್ಯಾಕ್ ಅಲಿಷ್ಟರ್
ಭಟ್ಕಳ: ಭಟ್ಕಳವನ್ನು ಗೋಗಲ್ ಸರ್ಚ್ನಲ್ಲಿ ನೋಡಿದರೆ ಅದರ ಚಿತ್ರಣವೇ ಬೇರೆಯಾಗಿದ್ದು ವಾಸ್ತವ ಭಟ್ಕಳಕ್ಕೂ ಗೋಗಲ್ ಸರ್ಚ್ನ ಮಾಧ್ಯಮಗಳ ಭಟ್ಕಳಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಬ್ರಿಟೀಷ್ ದೇಶದ ರಾಯಭಾರಿ (British deputy high commissioner) ಡೊಮ್ಯಾನಿಕ್ ಮ್ಯಾಕ್ ಅಲಿಷ್ಟರ್ ಹೇಳಿದರು.
ಅವರು ಮಂಗಳವಾರ ಭಟ್ಕಳದ ಅಬುಲ್ ಹಸನ್ ಅಲಿ ನದ್ವಿ ಇಸ್ಲಾಮಿಕ್ ಅಕಾಡೆಮಿಯ ಅಹ್ವಾನದ ಮೆರೆಗೆ ಭಟ್ಕಳದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಹುಬ್ಬಳ್ಳಿಯಿಂದ ಶಿರಸಿ ಮಾರ್ಗವಾಗಿ ಭಟ್ಕಳ ಬಂದ ಅವರು ಇಲ್ಲಿನ ಅಬುಲ್ ಹಸನ್ ಅಲಿ ನದ್ವಿ ಇಸ್ಲಾಮಿ ಅಕಾಡೆಮಿಗೆ ಭೇಟಿ ಅಕಾಡೆಮಿಯಿಂದ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ದೇಶದ ಹಿಂದೂ ಮುಸ್ಲಿಮರಲ್ಲಿ ಸಹೋದರತೆಯ ಭಾವನೆ ಮೂಡಿಸುವಲ್ಲಿ ಅಕಾಡೆಮಿ ಶ್ರಮಿಸುತ್ತಿದ್ದು ಪರಸ್ಪರ ಸಮುದಾಯಗಳಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಲು ಇದು ಸಹಕಾರಿಯಾಗಿದೆ ಎಂದರು. ಮಾಧ್ಯಮಗಳು ಭಟ್ಕಳವನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿವೆ. ವಾಸ್ತವದಲ್ಲಿ ಭಟ್ಕಳ ಬಹಳ ಸುಂದರವಾಗಿದೆ ಎಂದು ಭಟ್ಕಳ ಹಾಗೂ ಭಟ್ಕಳದ ಜನತೆಯನ್ನು ಪ್ರಶಂಸಿದರು.
ನಂತರ ಅಲಿಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಿದ ಅವರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು. ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆ ಹಾಗೂ ಅಂಜುಮನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಅವರು ಭಟ್ಕಳದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸವಾಗುತ್ತಿದೆ. ಸಮುದಯಾದ ಅಭಿವೃದ್ಧಿಗಾಗಿ ಬ್ರಿಟೀಷ್ ದೇಶದಿಂದ ಏನೆಲ್ಲ ಸಹಾಯ, ಸಹಕಾರ ನೀಡಲು ಸಾಧ್ಯವಾಗುತ್ತದೋ ಅದನ್ನು ತಾನು ನೀಡುವುದಾಗಿ ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಅಂಜುಮನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಮುಖಂಡರೊಂದಿಗೆ ಮಾತನಾಡಿದ ಅವರು ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ನಲ್ಲಿ ವಿವಿಧ ಕಂಪನಿಗಳಲ್ಲಿ ಯಾವ ರೀತಿಯ ಸಹಕಾರ ನೀಡಲಾಗುವುದು ಎಂಬುದರ ಕುರಿತಂತೆ ಚರ್ಚಿಸಿದರು. ಅಲ್ಲದೆ ಸಂಸ್ಥೆಯ ಮುಖ್ಯಸ್ಥರಿಗೆ ಬೆಂಗಳೂರಿನ ಬ್ರಿಟನ್ ರಾಯಭಾರಿ ಕಚೇರಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಅಲಿ ಪಬ್ಲಿಕ್ ಸ್ಕೂಲ್ ಹಾಗೂ ಅಲಿಮಿಯಾ ನದ್ವಿ ಇಸ್ಲಾಮಿಕ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಅಂಜುಮನ್ ಸಂಸ್ಥಯ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್ ಶಾಬಂದ್ರಿ, ರಾಯಭಾರಿಯವರ ಆಪ್ತ ಸಹಾಯಕ ನಟರಾಜ್, ರಾಜಕೀಯ ಹಾಗೂ ಆರ್ಥಿಕ ಸಲಹೆಗಾರ ಮಂಜುನಾಥ್ ಶ್ರೀಪತಿ ಸೇರಿಂದತೆ ಹಲವು ಮುಖಂಡರು ಉಪಸ್ಥಿತರಿದ್ದರು.