ಸಾವು ಮತ್ತು ಬದುಕಿನ ನಡುವಿನ ಸೇತುವೆಗಳು

Source: sonews | By Staff Correspondent | Published on 24th March 2019, 6:33 PM | National News | Special Report | Don't Miss |

ಮುಂಬೈನಲ್ಲಿ ಸಂಭವಿಸಿದ ಪಾದಾಚರಿ ಸೇತುವೆ ಕುಸಿತವು ನಮ್ಮ ನಗರ ಯೋಜನೆಗಳಲ್ಲಿರುವ ಲೋಪಗಳನ್ನು ಬಯಲುಮಾಡಿದೆ.

ಒಂದು ಸೇತುವೆಯನ್ನು ಕಟ್ಟುವುದೇ ಸಾಗಾಟ-ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶದಿಂದ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಸಾಗಾಟದಲ್ಲಿ ಅಡ್ಡವಾಗುವ ನದಿ, ರಸ್ತೆ ಮತ್ತಿತರ ಅಡೆತಡೆಗಳನ್ನು ದಾಟಲೆಂದೇ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಮುಂಬೈನಲ್ಲಿ ಮಾತ್ರ ಸೇತುವೆಗಳ ಅರ್ಥವೇ ಹಲವಾರು ಬಾರಿ ಬದಲಾಗುತ್ತಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಮೇಲ್ಸೇತುವೆಯು ೨೦೧೯ರ ಮಾರ್ಚ್ ೧೫ರಂದು ದಿಢೀರನೆ ಕುಸಿದುಬಿದ್ದು ಆರು ಜನ ಸತ್ತು ೩೨ ಜನ ಗಂಭೀರವಾಗಿ ಗಾಯಗೊಂಡರುಮಾಧ್ಯಮಗಳ ತಲೆಬರಹಗಳಲ್ಲಂತೂ ಹಲವಾರು ಬಾರಿ ಸೇತುವೆಯನ್ನು ದುರಂತ ಮತ್ತು ಸಾವು ಎಂಬರ್ಥಗಳಿಗೆ ಸಮೀಕರಿಸಿ ಬರೆಯಲಾಗುತ್ತಿದೆ. ನಗರದ ಸೇತುವೆಗಳು ಮತ್ತು ಫ್ಲೈ ಓವರ್ಗಳ ಸಮಸ್ಯೆಗಳಲ್ಲಿ ಕೇವಲ ನಗರಾಡಳಿತ ಮತ್ತು ನಗರ ಯೋಜನೆಗಳಂಥ ವಿಷಯಗಳು ಮಾತ್ರವಲ್ಲದೆ ನಗರ ಯೋಜನೆಗಳಲ್ಲಿ ನಾಗರಿಕರ ಪಾಲುದಾರಿಕೆಯ ಹಾಗೂ ರಾಜಕೀಯ ಉದ್ದೇಶಗಳೂ ಒಳಗೊಂಡಿವೆ

ಇತ್ತೀಚಿನ ಮುಂಬೈ ಸೇತುವೆ ಕುಸಿತದ ಘಟನೆಯು ಸಂದರ್ಭದಲ್ಲಿರುವ ಇನ್ನೊಂದು ವ್ಯಂಗ್ಯವನ್ನು ಎತ್ತಿ ತೋರಿಸುತ್ತದೆ: ನಿಲ್ದಾಣದಲ್ಲಿ ಪಾದಾಚಾರಿ ಮೇಲ್ ಸೇತುವೆಯನ್ನು ನಿರ್ಮಿಸಿದ್ದಕ್ಕೆ ಕಾರಣವೇ ಪಾದಾಚಾರಿಗಳು ಕೆಳಗೆ ರಸ್ತೆಯನ್ನು ದಾಟುತ್ತಾ ಅಪಘಾತಗಳಿಗೆ ಸಿಲುಕದಿರಲಿ ಎಂದು. ಈಗ ಸುರಕ್ಷತಾ ಕ್ರಮವೇ ಇಷ್ಟೊಂದು ಜನಗಳನ್ನು ಬಲಿತೆಗೆದುಕೊಂಡಿದೆ. ಸೇತುವೆಯ ಕುಸಿತದ ನಂತರ ಮಾಧ್ಯಮಗಳು ಪ್ರಕಟಿಸಿರುವ ವಿವರಗಳನ್ನು ಓದಿದರೆ ಭಾರತೀಯರಾದ ನಮಗೆ ಅಂಥಾ ಹೊಸ ಆಘಾತವೇನೂ ಆಗುವುದಿಲ್ಲ. ಬೃಹನ್ ಮುಂಬೈ ನಗರ ಪಾಲಿಕೆಯು ಸೇತುವೆಯ ಸ್ಥಿತಿಯ ಬಗ್ಗೆ ವರದಿ ನೀಡಲು ಕೆಲವು ತಿಂಗಳ ಕೆಳಗೆ ಒಂದು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿತ್ತು. ಮತ್ತು ಖಾಸಗಿ ಕಂಪನಿಯು ಸೇತುವೆಯು ಸುಸ್ಥಿತಿಯಲ್ಲಿದೆಯೆಂದು ವರದಿ ನೀಡಿತ್ತು. ಕಾಲಕಾಲಕ್ಕೆ ಇವುಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ವರದಿ ಮಾಡಬೇಕಿದ್ದ ಖಾಸಗಿ ಇಂಜನಿಯರುಗಳ ಕಂಪನಿಯ ನಿರ್ದೇಶಕರನ್ನು ಈಗ ಬಂಧಿಸಲಾಗಿದೆ. ಆದರೆ ಪ್ರಕರಣದ ಮತ್ತೊಂದು ಅಸಂಗತವೆಂದರೆ ಪೊಲೀಸರು ಘಟನೆಯಲ್ಲಿ ನಗರ ಪಾಲಿಕೆಯ ಅಥವಾ ರೈಲ್ವೆ ಸಿಬ್ಬಂದಿಯ ಕೈವಾಡವಿದೆಯೇ ಎನ್ನುವ ಕೋನದಿಂದಲೂ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆಂದು ವರದಿಯಾಗಿದೆ. ಇಷ್ಟೊಂದು ಮಾನವ ಜೀವಗಳ ಸುರಕ್ಷೆಯು ಯಾವುದೇ ಮೇಲ್ವಿಚಾರಣೆ/ಉಸ್ತುವಾರಿಗಳಿಲ್ಲದೆ ಕೇವಲ ಒಬ್ಬ ಇಂಜನಿಂii ವರದಿಯನ್ನು ಆಧರಿಸಿರುತ್ತದೆಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅಲ್ಲದೆ ಸಂಬಂಧಪಟ್ಟವರ ಉತ್ತರದಾಯಿತ್ವವನ್ನು ಕಠಿಣವಾಗಿ ಜಾರಿಮಾಡುವ ವ್ಯವಸ್ಥೆ ಇದ್ದಿದ್ದರೆ ಇಂಜನಿಯರ್ ಒಬ್ಬ ಇಷ್ಟೊಂದು ಬೇಜವಾಬ್ದಾರಿ ವರದಿಯನ್ನು ನೀಡಲಾಗುತ್ತಿತ್ತೇ?

ನಮ್ಮ ನಗರ ಯೋಜನೆಯೊಳಗಿರುವ ಅತ್ಯಂತ ಕಳವಳ ಹುಟ್ಟಿಸುವ ಅಂಶವೂ ಇಲ್ಲೇ ಅಡಗಿದೆ. ನಗರದ ಯೋಜನೆಗಳು ನಾಗರಿಕರ ಮತ್ತು ಪ್ರಯಾಣಿಕರ ನೈಜ ಅಗತ್ಯಗಳನ್ನು ಆಧರಿಸಿ ರೂಪುಗೊಳ್ಳುತ್ತದೋ ಅಥವಾ ರಾಜಕೀಯ ಅಗತ್ಯಗಳನ್ನು ಮತ್ತು ಕಾಂಟ್ರಾಕ್ಟರುಗಳ ದುರಾಸೆಯನ್ನು ಆಧರಿಸಿ ಹುಟ್ಟಿಕೊಳ್ಳುತ್ತದೋ? ಮುಂಬೈನಲ್ಲಿ ಬಳಕೆಯಾಗದಿರುವ ಹಲವಾರು ಸ್ಕೈ ವಾಕ್ ಮತ್ತು ಮೋನೋ ರೈಲು ಯೋಜನೆಗಳಂತೆ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳದೇ ಮುಂಬೈನಲ್ಲಿ ಮೂಲಭೂತ ಸೌಲಭ್ಯ ಯೋಜನೆಗಳನ್ನು ನಿರ್ಮಿಸುವುದು ಸಾಧಾರಣ ಸಂಗತಿಯಾಗಿಬಿಟ್ಟಿದೆ. ಮತ್ತು ಮಾಧ್ಯಮಗಳು ಬಯಲು ಮಾಡಿರುವಂತೆ ಇಂಥಾ ಹಲವಾರು ಯೋಜನೆಗಳ ನಿರ್ಮಾಣದ ಗುತ್ತಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಹಲವಾರು ಕಾಂಟ್ರಾಕ್ಟರುಗಳಿಗೆ ನೀಡಲಾಗಿದೆ. ಭಾರತದಲ್ಲಿ ಹೇರಳವಾಗಿರುವ ಅದ್ಭುತ ಇಂಜನಿಯರಿಂಗ್ ಮತ್ತು ವಾಸ್ತುಶಿಲ್ಪ ನೈಪುಣ್ಯಗಳು ನಾಗರಿಕರ ಅಗತ್ಯಗಳಿಗಲ್ಲದೆ ರಾಜಕೀಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದು ಎಂಥಾ ನಾಚಿಕೆಗೇಡಿನ ಸಂಗತಿಯಲ್ಲವೇ? ಅವರ ಪರಿಣಿತಿ ಮತ್ತು ಪ್ರತಿಭೆಗಳು ಸಾರ್ವಜನಿಕ ಸೇವೆಗೆ ಬಳಕೆಯಾಗಬೇಕೇ ವಿನಃ ಪಟ್ಟಭದ್ರ ಹಿತಾಸಕ್ತಿಗಳಿU ಉದ್ದೇಶಗಳಿಗಲ್ಲ. ನಗರ ಯೋಜನೆಗಳ ಗುತ್ತಿಗೆಯನ್ನು ಅತ್ಯುತ್ತಮ ಸೇವೆಯನ್ನು ಒದಗಿಸಬಲ್ಲ ವೃತ್ತಿಪರತೆಯನ್ನು ಹೊಂದಿರುವ ಪರಿಣಿತರಿಗೆ ಕೊಡುವ ಬದಲು ಯಾರು ಕಡಿಮೆ ಬಿಡ್ಡಿಂಗ್ ಮಾಡುತ್ತಾರೋ ಅವರಿಗೆ ನೀಡುವ ಪರಿಪಾಠವನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ಬಹುಪಾಲು ಯೋಜನೆಗಳ ಬಗ್ಗೆ ದೇಶಾದ್ಯಂತ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

ಆಟೊಮೊಬೈಲ್ ವಾಹನಗಳ ಕೇಂದ್ರಿತವಾದ, ಸಾರ್ವಜನಿಕ ಸಾರಿಗೆ ವಿರೋಧಿಯಾಗಿರುವ ಮತ್ತು ಖಾಸಗಿ ಗುತ್ತಿಗೆದಾರರ ಪರವಾಗಿರುವ ನಗರ ಯೋಜನೆಗಳಿಂದಾಗುವ ಅನಾಹುತಗಳ ಬಗ್ಗೆ ನಗರ ಯೋಜನಾ ಕಾರ್ಯಕರ್ತರು ಪದೇಪದೇ ಸಾರ್ವಜನಿಕರ ಗಮನವನ್ನು ಸೆಳೆಯುತ್ತಲೇ ಇದ್ದಾರೆ. ವಾಸ್ತವವೆಂದರೆ ನಮ್ಮ ದೇಶದ ನಗರೀಕರಣವು ಅರಾಜಕವಾಗಿ ಮತ್ತು ಯೋಜನಾರಹಿತವಾಗಿ  ನಡೆಯುತ್ತಿರುವುದರಿಂದಲೇ ನಗರದ ಮೂಲಭೂತ ಸೌಕರ್ಯ ಯೋಜನೆಗಳೂ ಸಹ ನಿರ್ದಿಷ್ಟ ಸಂದರ್ಭಗಳನ್ನು ಮತ್ತು ಸಾರ್ವಜನಿಕ ಅಗತ್ಯಗಳನ್ನು ಆಧರಿಸದೆ ಅರಾಜಕವಾಗಿ ಮತ್ತು ಸಮಗ್ರ ದೃಷ್ಟಿಯಿಲ್ಲದೆ ರೂಪುಗೊಳ್ಳುತ್ತಿವೆ. ಸನ್ನಿವೇಶವು ಯಾವುದೇ ಉತ್ತರದಾಯಿತ್ವವಿಲ್ಲದಿರುವ ಆಡಳಿತಕ್ಕೆ ಮತ್ತು ವ್ಯಾಪಕ ಭ್ರಷ್ಟಾಚಾರಗಳಿಗೆ ಎಡೆಮಾಡಿಕೊಡುತ್ತದೆಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಮುಂಬೈನಲ್ಲಿ ನಗರ ಯೋಜನಾ ಪರಿಣಿತರು ಮತ್ತು ಪರಿಸರ ಪರಿಣಿತರು ಎಷ್ಟೇ ಪ್ರತಿಭಟನೆ ಮಾಡುತ್ತಿದ್ದರೂ ಲೆಕ್ಕಿಸದೆ ಅಲ್ಲಿನ ಸರ್ಕಾರವು ಮೆಟ್ರೋ ವ್ಯವಸ್ಥೆಗಳಿಗೆ ಮತ್ತು ಕರಾವಳಿ ಹೆದ್ದಾರಿ ಯೋಜನೆಗಳಿಗೆ ಹೆಚ್ಚು ಒತ್ತುಕೊಡುತ್ತಿದೆ. ಇದೇ ಧೋರಣೆಯೇ ದೇದೆಲ್ಲೆಡೆಯೂ ವ್ಯಕ್ತವಾಗುತ್ತಿದೆ.

ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದ ಮೇಲೆ ೨೦೧೮ರ ಜುಲೈ ರಂದು ಸೇತುವೆಯೊಂದು ಕುಸಿದುಬಿದ್ದು ಇಬ್ಬರು ವ್ಯಕ್ತಿಗಳು ಪ್ರಾಣಕಳೆದುಕೊಂಡರು. ಕೂಡಲೇ ಪರಸ್ಪರ ದೋಷಾರೋಪಗಳು ಪ್ರಾರಂಭವಾದವು. ನಂತರ ತಿಳಿದುಬಂದ ಸಂಗತಿಯೆಂದರೆ ೨೦೧೪-೧೭ರ ನಡುವೆ ಸೇತುವೆಯ ಸ್ಥಿತಿಗತಿಯ ಬಗ್ಗೆ ರೈಲ್ವೆ ಇಲಾಖೆಯು ಪರಿಶೀಲನೆ ಮಾಡಿದ್ದರೂ ಅದಕ್ಕೆ ಸಂಬಂಧಪಟ್ಟಂತೆ ಯಾವ ದಾಖಲೆಗಳು ಇರಲಿಲ್ಲ. ಅದಕ್ಕೆ ಮುಂಚೆ ೨೦೧೭ರಲ್ಲಿ ಎಲ್ಫಿನ್ಸ್ಟನ್ ಸೇತುವೆಯ ಮೇಲೆ ಸಂಭವಿಸಿದ ನೂಕುನುಗ್ಗಲಿನಲ್ಲಿ ೨೩ ಜನರು ಪ್ರಾಣಕಳೆದುಕೊಂಡು ಹಲವಾರು ಜನ ಗಂಭೀರವಾಗಿ ಗಾಯಗೊಂಡರು. ಪ್ರಯಾಣಿಕರ ಜನದಟ್ಟಣೆಗೆ ತಕ್ಕಂತೆ ಪ್ರದೇಶದ ಭೂಮಿ ಬಳಕೆಯ ಆದ್ಯತೆಯನ್ನು ಬದಲಿಸಿಕೊಳ್ಳುವಲ್ಲಿನ ಆಡಳಿತದ ಸಂಪೂರ್ಣ ವೈಫಲ್ಯವನ್ನು ಭಯಾನಕ ಘಟನೆ ಬಯಲಿಗೆ ತಂದಿತು.

ಇತ್ತೀಚಿನ ಸೇತುವೆ ಕುಸಿತದ ಘಟನೆಗೆ ಇನ್ನೂ ಎರಡು ಪ್ರಮುಖ ಆಯಾಮಗಳಿವೆ. ದುರಂತ mನೆಯು ಸಂಭವಿಸಿದ ನಂತರ ಇಂಥಾ ಅವಘಡಗಳಿಗೆ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯೇ ಕಾರಣವೆಂದು ದೂಷಿಸಿದ ಶಿವಸೇನಾ ಪಕ್ಷವು ಹೊಣೆಗಾರಿಕೆಯನ್ನು ಮತ್ತೊಬ್ಬರ ಮೇಲೆ ಎತ್ತಿಹಾಕುವ ಸಿನಿಕ ಪ್ರಯತ್ನವನ್ನು ಮಾಡಿತು. ಉದ್ಯೋಗಾವಕಾಶಗಳ ಕಾರಣದಿಂದಾಗಿ ಮುಂಬೈ ನಗರವು ಶತಮಾನಗಳಿಂದಲೂ ವಲಸಿಗರನ್ನು ಆಕರ್ಷಿಸುತ್ತಿದ್ದು ಮುಂದೆಯೂ ಆಕರ್ಷಣೆ ಮುಂದುವರೆಯಲಿದೆ. ನಗರದ ಇತ್ತೀಚಿನ ಅಭಿವೃದ್ಧಿ ಯೋಜನೆಯ ಪ್ರಕಾರ ಇನ್ನೂ ೮೦ ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಂಥಾ ಅಭಿವೃದ್ಧಿ ಯೋಜನೆಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಸಂಭವಿಸಲಿರುವ ಹೆಚ್ಚಳವನ್ನೂ ಗಣನೆಗೆ ತೆಗೆದುಕೊಳ್ಲಬೇಕಲ್ಲವೇ? ಮತ್ತೊಂದು ಅಂಶವೆಂದರೆ ಕಳೆದೆರಡು ವರ್ಷಗಳಲ್ಲಿ ಇದು ಮೂರನೇ ದುರಂತವಾಗಿದ್ದರೂ, ಇದು ಸಾರ್ವಜನಿಕರಲ್ಲಿ ದೊಡ್ಡ ಆಕ್ರೋವನ್ನಾಗಲೀ  ಪ್ರತಿಭಟನೆಂiನ್ನಾಗಲೀ ಹುಟ್ಟುಹಾಕಿಲ್ಲ. ಒಂದು ರೀತಿಯಲ್ಲಿ ಇಂಥಾ ಅವಘಡಗಳು ಮತ್ತು ಸಂಬಂಧೀ ಸಾವುಗಳು ಅಭಿವೃದ್ಧಿಗೆ ನಾವು ತೆರಬೇಕಿರುವ ಸಹಜ ಬೆಲೆಯೆಂದು ನಾಗರಿಕರು ಒಪ್ಪಿಕೊಂಡುಬಿಟ್ಟಿರುವಂತೆ ಕಾಣುತ್ತದೆ. ಸರ್ಕಾರವು ಸಹ ನಾಗರಿಕರ ವಿರೋಧವನ್ನು ಕಿಂಚಿತ್ತೂ ಪರಿಗಣಿಸದೆ ವಿವಾದಸ್ಪದ ಯೋಜನೆಗಳನ್ನು ಯಥಾಪ್ರಕಾರವಾಗಿ ಮುಂದುವರೆಸುತ್ತಿವೆ.

ಹೀಗಾಗಿ ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳನ್ನು ಖಾಸಗಿ ಕಾಂಟ್ರಾಕ್ಟುದಾರರಿಗೆ ಮತ್ತಿತರರಿಗೆ ವಿತರಿಸುವ ಕೊಡುಗೆಗಳೆಂದು ಪರಿಗಣಿಸದೆ ಒಂದು ಸಾರ್ವಜನಿಕ ಸೇವೆಯೆಂದು ಪರಿಗಣಿಸುವ ಅಗತ್ಯವಿದೆ. ಹೀಗಾಗಬೇಕೆಂದರೆ ನಾಗರಿಕರು ಪ್ರಶ್ನೆಗಳನ್ನು ಕೇಳುವುದು ಮತ್ತು ಅದಕ್ಕೆ ಉತ್ತರವನ್ನು ಆಗ್ರಹಿಸುವುದನ್ನು ನಿರಂತರವಾಗಿ ಮುಂದುವರೆಸಬೇಕಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...