ಭಟ್ಕಳ: ಭಾನುವಾರ ಬೆಳಗಿನ ಜಾವ ಇಲ್ಲಿನ ಬಂಗಾರಮಕ್ಕಿ ಕ್ರಾಸ್ ಬಳಿ ಶಿವಮೊಗ್ಗದ ಅರಸೀಕೆರೆಯಿಂದ ಶಿಲ್ಪಿ ಕೆಲಸಕ್ಕೆಂದು ತೆರಳಿ ಮುರ್ಡೇಶ್ವರದ ಮನೆಗೆ ವಾಪಸ್ಸು ಬರುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಸ್ಥಳಕ್ಕೆ ಸಾವನ್ನಪ್ಪಿದ್ದು, ಹಿಂಬದಿ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.
ಮೃತ ಬೈಕ್ ಸವಾರ ಇಲ್ಲಿನ ಕಾಯ್ಕಿಣಿ ಗ್ರಾ. ಪಂ. ವ್ಯಾಪ್ತಿಯ ತೆರ್ನಮಕ್ಕಿ ಚರ್ಚ ಕ್ರಾಸ್ ನಿವಾಸಿ ಮನೋಜ ಮಾದೇವ ನಾಯ್ಕ (21) ಎಂದು ತಿಳಿದು ಬಂದಿದ್ದು, ಹಿಂಬದಿ ಬೈಕ್ ಸವಾರ ಮುರ್ಡೇಶ್ವರದ ಜನತಾ ಕಾಲೋನಿ ನಿವಾಸಿ ಮಹೇಶ ಪಾಂಡು ನಾಯ್ಕ (22) ಎಂದು ತಿಳಿದು ಬಂದಿದೆ. ಇಬ್ಬರು ಶಿವಮೊಗ್ಗಕ್ಕೆ ತಮ್ಮ ಶಿಲ್ಪಿ ಕೆಲಸವನ್ನು ಮುಗಿಸಿ ಕೋಗಾರ ರಸ್ತೆ ಮಾರ್ಗವಾಗಿ ಭಟ್ಕಳದಿಂದ ಮುರ್ಡೇಶ್ವರದ ಅವರ ಮನೆಗೆ ತೆರಳುತ್ತಿದ್ದ ವೇಳೆ ಇನ್ನು ಮನೆಗೆ 1.5 ಕಿ.ಮೀ. ದೂರದಲ್ಲಿರುವಾಗ ಬೈಕ್ ಸ್ಕಿಡ್ ಆಗಿದೆ ಎನ್ನಲಾಗಿದೆ. ಇಬ್ಬರು ಸಂಕ್ರಾಂತಿ ಹಬ್ಬದ ನಿಮಿತ್ತ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಮೃತ ಬೈಕ್ ಸವಾರ ಮನೋಜ ನಾಯ್ಕ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದವನು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಘಟನೆಯ ಬಗ್ಗೆ ತಿಳಿದು ಆಸ್ಪತ್ರೆಗೆ ಬಂದ ಮೃತ ಬೈಕ್ ಸವಾರನ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅಫಘಾತದಲ್ಲಿ ಗಂಭೀರ ಗಾಯಾಳು ಮಹೇಶ ಪಾಂಡು ನಾಯ್ಕನನ್ನು ತಕ್ಷಣಕ್ಕೆ ತಾಲೂಕಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಈತನಿಗೆ ಹೆಚ್ಚಿನ ಚಿಕಿತ್ಸೆ ಕಾರಣ ಅಂಬುಲೇನ್ಸ ಮೂಲಕ ಕುಂದಾಪುರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಬೈಕ್ ಸವಾರನ ಶವವನ್ನು ಇಲ್ಲಿನ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಮುರ್ಡೇಶ್ವರ ಪಿಎಸೈ ನಾಗವ್ವ ಭೇಟಿ ನೀಡಿ ಪರಿಶೀಲಿಸಿದ್ದಾರೆ.