ಭೋಪಾಲ್ : ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ವಿಪಕ್ಷ ಕಾಂಗ್ರೆಸ್ಸಿನ ಮುಖ್ಯ ವಕ್ತಾರ ಕೆ.ಕೆ ಮಿಶ್ರಾ ಅವರಿಗೆ ಭೋಪಾಲ್ ನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 25,0000 ದಂಡ ವಿಧಿಸಿದೆ. ದಂಡ ಪಾವತಿಸಲು ಅವರು ವಿಫಲರಾದ ಪಕ್ಷದಲ್ಲಿ ಮೂರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಿದೆ.
ಮುಖ್ಯಮಂತ್ರಿ ಚೌಹಾಣ್ ಅವರು ಜೂನ್ 2014ರಲ್ಲಿ ಮಿಶ್ರಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಶಿಕ್ಷೆ ಪ್ರಕಟಗೊಂಡ ಕೂಡಲೇ ಮಿಶ್ರಾ ಅವರು ಜಾಮೀನು ಅರ್ಜಿ ಸಲ್ಲಿಸಿದ್ದು ಅವರಿಗೆ ನ್ಯಾಯಾಲಯ ರೂ. 50,000 ಬಾಂಡ್ ಸಲ್ಲಿಕೆಯ ನಂತರ ಜಾಮೀನು ನೀಡಿದೆ. ಸೆಶನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಮಿಶ್ರಾ ಅವರು ಮಧ್ಯ ಪ್ರದೇಶ ಹೈಕೋರ್ಟಿನ ಮೆಟ್ಟಿಲು ಹತ್ತಲಿದ್ದಾರೆ. ಈಗಾಗಲೇ ಮೇಲ್ಮನವಿ ಅರ್ಜಿಯೊಂದು ಸುಪ್ರೀಂ ಕೋರ್ಟಿನಲ್ಲಿ ಬಾಕಿಯಿರುವುದರಿಂದ ಶುಕ್ರವಾರದ ಕೋರ್ಟ್ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟಿಗೂ ಸಲ್ಲಿಸಲಾಗುವುದು.
ವ್ಯಾಪಂ ಹಗರಣದ ಭಾಗವಾಗಿದ್ದ ಕಾನ್ಸ್ಟೇಬಲ್ ನೇಮಕಾತಿ ಅವ್ಯವಹಾರಗಳಲ್ಲಿ ಮುಖ್ಯಮಂತ್ರಿ ಚೌಹಾಣ್ ಮತ್ತವರ ಸಂಬಂಧಿಕರು ಭಾಗಿಯಾಗಿದ್ದರೆಂದು ಜೂನ್ 21, 2014ರಂದು ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲ ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ಮಿಶ್ರಾ ಆರೋಪಿಸಿದ್ದರು. ಮುಖ್ಯಮಂತ್ರಿಯ ಪತ್ನಿ ಸಾಧನಾ ಸಿಂಗ್ ಅವರ ತವರು ಜಿಲ್ಲೆಯಾದ ಮಹಾರಾಷ್ಟ್ರದ ಗೊಂಡಿಯಾದಿಂದ ಒಟ್ಟು 19 ಅಭ್ಯರ್ಥಿಗಳನ್ನು ಕಾನ್ಸ್ಟೇಬಲ್ ಗಳಾಗಿ ನೇಮಿಸಲಾಗಿತ್ತು ಎಂದು ಮಿಶ್ರಾ ಆರೋಪಿಸಿದ ಮೂರೇ ದಿನಗಳಲ್ಲಿ ಚೌಹಾಣ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.